ಗುವಾಹಟಿ: ಅಲ್ಲು ಅರ್ಜುನ್ ಅಭಿನಯದ ʻಪುಷ್ಪʼ ಸಿನಿಮಾದ ದೃಶ್ಯಗಳನ್ನು ಮೆಚ್ಚಿ ಸೆಲೆಬ್ರಿಟಿಗಳು, ಕ್ರಿಕೆಟಿಗರು, ಜನರು ಅನುಸರಿಸುತ್ತಿರುವುದನ್ನು ನೋಡಿದ್ದೇವೆ. ಈಚೆಗೆ ಅಸ್ಸಾಂ ಪೊಲೀಸರಿಗೆ ಬಂಧನಕ್ಕೊಳಗಾಗಿ ಕೋರ್ಟ್ನಿಂದ ಜಾಮೀನು ಪಡೆದ ಶಾಸಕ ಜಿಗ್ನೇಶ್ ಮೇವಾನಿ ಕೂಡ ಖುಷಿಗೆ ಪುಷ್ಪ ದೃಶ್ಯವನ್ನು ಅನುಸರಿಸಿ ಗಮನ ಸೆಳೆದಿದ್ದಾರೆ.
ಶಾಸಕ ಜಿಗ್ನೇಶ್ ಮೇವಾನಿಗೆ ಕೋರ್ಟ್ ಜಾಮೀನು ನೀಡಿದೆ. ಜಾಮೀನು ಪಡೆದ ಖುಷಿ ಹಾಗೂ ಗೆಲುವಿನ ಹಿನ್ನೆಲೆಯಲ್ಲಿ ಮೇವಾನಿ ಅವರು ಪುಷ್ಪ ಸಿನಿಮಾ ದೃಶ್ಯ ಅನುಕರಿಸಿ ಅಲ್ಲು ಅರ್ಜುನ್ ರೀತಿ ಗಡ್ಡ ಸವರಿದರು. ಈ ದೃಶ್ಯ ಎಲ್ಲೆಡೆ ವೈರಲ್ ಆಗಿದೆ.
ಜಾಮೀನು ಪಡೆದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಎಂದಿಗೂ ತಲೆ ಬಾಗುವುದಿಲ್ಲ ಎಂದು ಬಿಜೆಪಿಗೆ ಪರೋಕ್ಷವಾಗಿ ಟಾಂಗ್ ಕೊಟ್ಟಿದ್ದಾರೆ. ಇದನ್ನೂ ಓದಿ: ಹನುಮಾನ್ ಚಾಲೀಸಾ ಪಠಿಸಿದವರನ್ನು ಬಂಧಿಸಿದ್ದಕ್ಕೆ ಬಾಳಾ ಠಾಕ್ರೆ ನೊಂದಿದ್ದಾರೆ: ಕೇಂದ್ರ ಸಚಿವ
ನನ್ನ ಬಂಧನ ಅಷ್ಟು ಸುಲಭದ ಮಾತಲ್ಲ. ಪ್ರಧಾನ ಮಂತ್ರಿ ಕಚೇರಿಯಲ್ಲಿನ ರಾಜಕೀಯ ಮೇಲಧಿಕಾರಿಗಳ ಸೂಚನೆಯ ಮೇರೆಗೆ ಇದನ್ನು ಮಾಡಿರಬೇಕು ಎಂದು ಮೇವಾನಿ ಟೀಕಿಸಿದ್ದಾರೆ.
ನಾನು ಮಾಡಿದ ಟ್ವೀಟ್ ಬಗ್ಗೆ ಈಗಲೂ ಹೆಮ್ಮೆ ಇದೆ. ಟ್ವೀಟ್ನಲ್ಲಿ ನಾನು ಮೂಲಭೂತವಾಗಿ ಕೋಮು ಗಲಭೆಗಳು ಸಂಭವಿಸಿದಂತೆ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಪಾಡುವಂತೆ ಪ್ರಧಾನ ಮಂತ್ರಿಯನ್ನು ಕೇಳಿಕೊಂಡಿದ್ದೇನೆ. ಭಾರತದ ಪ್ರಜೆಯಾಗಿ ಇದನ್ನು ಕೇಳುವ ಹಕ್ಕು ನನಗಿದೆ. ಒಬ್ಬ ಶಾಸಕನಾಗಿ ನನ್ನ ಕರ್ತವ್ಯವೇನು? ಶಾಂತಿ ಕಾಪಾಡಬೇಕು ಎಂದು ಒತ್ತಾಯಿಸುವ ಕೆಲಸ ಮಾಡಿದ್ದೇನೆ ಎಂದು ತಮ್ಮ ಟ್ವೀಟ್ ಅನ್ನು ಸಮರ್ಥಿಸಿಕೊಂಡಿದ್ದಾರೆ.
ನನ್ನ ವಿರುದ್ಧ ಷಡ್ಯಂತ್ರ ರೂಪಿಸಿ, ಮಹಿಳೆಯೊಬ್ಬರನ್ನು ಬಳಸಿಕೊಂಡು ಕಥೆ ಹೆಣೆದು ನನ್ನ ಮೇಲೆ ಇಲ್ಲಸಲ್ಲದ ಆರೋಪ ಮಾಡಿದರು. ನನ್ನ ವಿರುದ್ಧ ಮಹಿಳೆಯನ್ನು ಬಳಸಿಕೊಂಡ ಸರ್ಕಾರ ಹೇಡಿಯಾಗಿದೆ. ಇದು ಹೇಡಿತನದ ಕೃತ್ಯ ಎಂದು ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.
ಇದೊಂದು ಷಡ್ಯಂತ್ರ. ಇದನ್ನು ದಲಿತರಲ್ಲಿ, ಗುಜರಾತ್ನ ಜನರು ಸಹಿಸುವುದಿಲ್ಲ. ಇಂತಹ ಕೃತ್ಯಗಳಿಗೆ ಬಿಜೆಪಿಯವರು ಹಣ ಕೊಡುತ್ತಾರೆ. ನನ್ನ ವಿರುದ್ಧದ ಎರಡೂ ಪ್ರಕರಣಗಳು ಸುಳ್ಳು ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಮುಖ್ಯಮಂತ್ರಿ ಉದ್ಧವ್ ಠಾಕ್ರೆಯನ್ನು ಭೇಟಿಯಾದ ಶರದ್ ಪವಾರ್
ಗುಜರಾತ್ ಚುನಾವಣೆ ಬರುತ್ತಿದೆ. ಹಾಗಾಗಿ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ. ಈ ಕುತಂತ್ರವನ್ನು ಜನ ಅರ್ಥ ಮಾಡಿಕೊಂಡಿದ್ದಾರೆ. ನನ್ನನ್ನು ಗುಜರಾತಿಗೆ ಕರೆದೊಯ್ದ ಕ್ಷಣ, ಅವರು ನನ್ನನ್ನು ಬೇರೆ ಬೇರೆ ಪ್ರಕರಣಗಳಲ್ಲಿ ಸಿಲುಕಿಸಲು ಯೋಜಿಸುತ್ತಿದ್ದಾರೆಂದು ನನಗೆ ತಿಳಿದಿತ್ತು. ಅಸ್ಸಾಂನಲ್ಲಿ ಗುಜರಾತ್ನ ಶಾಸಕರೊಬ್ಬರನ್ನು ಟಾರ್ಗೆಟ್ ಮಾಡಿರುವುದು ದೊಡ್ಡ ಸಂಚಿನ ಭಾಗವಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ.
ತಮ್ಮನ್ನು (ಬಿಜೆಪಿ) ಪ್ರಶ್ನಿಸುವವರ ವಿರುದ್ಧ, ಸತ್ಯದ ಪರವಾಗಿ ಮಾತನಾಡುವವರ ವಿರುದ್ಧ ಅವರು ಕೇಸ್ ಹಾಕುತ್ತಾರೆ. ಅಸ್ಸಾಂ ಮತ್ತು ಕಾಂಗ್ರೆಸ್ನ ಜನರು ನನಗೆ ಬೆಂಬಲ ನೀಡಿದ್ದು, ಅವರಿಗೆ ಕೃತಜ್ಞ ಎಂದು ಮೇವಾನಿ ಹೇಳಿದ್ದಾರೆ.
ಪ್ರಧಾನಿ ವಿರುದ್ಧ ಟ್ವಿಟ್ಟರ್ನಲ್ಲಿ ಪೋಸ್ಟ್ ಹಾಕಿದ್ದ ಆರೋಪದಡಿ ಶಾಸಕ ಜಿಗ್ನೇಶ್ ಮೇವಾನಿ ಅವರನ್ನು ಅಸ್ಸಾಂ ಪೊಲೀಸರು ಬಂಧಿಸಿದ್ದರು. ಬಂಧನದ ವೇಳೆ ಮೇವಾನಿ ಅವರು ನನ್ನ ಮೇಲೆ ಹಲ್ಲೆ ನಡೆಸಿದ್ದು, ಅನುಚಿತವಾಗಿ ವರ್ತಿಸಿದ್ದಾರೆಂದು ಮಹಿಳಾ ಪೊಲೀಸ್ ಅಧಿಕಾರಿ ಗಂಭೀರ ಆರೋಪ ಮಾಡಿದ್ದರು. ಇದನ್ನೂ ಓದಿ: ಊಟ ನಿರಾಕರಣೆ, ಎಸಿ ಇಲ್ದೆ ನಿದ್ರೆ ಇಲ್ಲ – PSI ಅಕ್ರಮದಲ್ಲಿ ಅರೆಸ್ಟ್ ಆದ ದಿವ್ಯಾ ಹಾಗರಗಿ ಹೈಡ್ರಾಮಾ