ರಂಗಭೂಮಿ ಕಲಾವಿದ ದಿವಂಗತ ಗುಬ್ಬಿವೀರಣ್ಣ ಪುತ್ರಿ ಹೇಮಲತಾ(೭೦) ವರ್ಷ ನಿಧನರಾಗಿದ್ದಾರೆ. ಲಘು ಹೃದಯಾಘಾತಕ್ಕೆ ಒಳಗಾಗಿದ್ದ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿತ್ತು. ಚಿಕಿತ್ಸೆ ಫಲಕಾರಿಯಾಗದೆ ಇಂದು ಇಹಲೋಕ ತ್ಯಜಿಸಿದ್ದಾರೆ. ಇನ್ನೂ ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ದೇಹದಾನ ಮಾಡುವ ಮೂಲಕ ಸಾವಿನಲ್ಲೂ ಸಾರ್ಥಕತೆ ಮರೆದಿದ್ದಾರೆ.
ಹೇಮಲತಾ ಅವರು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ ನಗರದ ಸೋಮೇಶ್ವರ ಬಡಾವಣೆಯಲ್ಲಿ, ಗುಬ್ಬೀ ವೀರಣ್ಣನವರ ಪುತ್ರ ಗುರುಸ್ವಾಮಿ ಅವರ ಪುತ್ರಿ ಜಯಭಾರತಿ ಅವರ ಮನೆಯಲ್ಲಿ ವಾಸವಾಗಿದ್ದರು. ಹೇಮಲತಾ ಅವರು ಹೆಸರಾಂತ ನೃತ್ಯಗಾರ್ತಿ ಕೂಡ ಆಗಿದ್ದರು. ನಾಲ್ಕು ದಿನಗಳ ಹಿಂದೆಯಷ್ಟೇ ಲಘು ಹೃದಯಾಘಾತಕ್ಕೆ ಒಳಗಾಗಿ ಬಾಶೆಟ್ಟಿಹಳ್ಳಿ ಬಳಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಹೇಮಲತಾ ಅವರು ರಾಜ್ ಕುಮಾರ್ ಜೊತೆ ಎಮ್ಮೆ ತಮ್ಮಣ್ಣ, ಕಲ್ಯಾಣ್ ಕುಮಾರ್ ಅವರೊಂದಿಗೆ ಕಲಾವತಿ ಸಿನಿಮಾ ಸೇರಿ ಹಲವು ಚಿತ್ರಗಳಲ್ಲಿ ನಟಿಸಿದ್ದು ಹಲವು ಪ್ರಶಸ್ತಿ ಪುರಸ್ಕಾರಗಳು ಪಡೆದಿದ್ದಾರೆ. ಇವರಿಗೆ ಮೂವರು ಮಕ್ಕಳಿದ್ದು ಅಮೆರಿಕಾದಲ್ಲಿ ನೆಲಸಿದ್ದಾರೆ. ಸದ್ಯ ಮೃತದೇಹವನ್ನ ಬೆಂಗಳೂರಿನ ಹೆಸರಘಟ್ಟದ ರಸ್ತೆಯಲ್ಲಿರುವ ಖಾಸಗಿ ಮೆಡಿಕಲ್ ಕಾಲೇಜಿಗೆ ಮೃತದೇಹ ಹಸ್ತಾಂತರ ಮಾಡಲು ತೀರ್ಮಾನಿಸಿದ್ದು, ಸಿನಿರಂಗದ ಹಲವರು ಖಾಸಗಿ ಆಸ್ಪತ್ರೆಗೆ ಭೇಟಿ ನೀಡಿ ಅಂತಿಮ ದರ್ಶನ ಪಡೆದಿದ್ದಾರೆ.