ಬೆಂಗಳೂರು: ಕರ್ನಾಟಕದ ಹೆಮ್ಮೆಯ ಹಾಗೂ ಸುಮಾರು 300 ವರ್ಷಗಳಷ್ಟು ಇತಿಹಾಸ ಹೊಂದಿರುವ ದೇಶಿಯ ದೇವಣಿ ಗೋತಳಿಯು ಸೋಮವಾರ ರಾಜಭವನದ ಗೋಶಾಲೆಗೆ ಸೇರ್ಪಡೆಗೊಂಡಿದೆ.
ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರು ರಾಜಭವನಕ್ಕೆ ಆಗಮಿಸಿದ ಗೋವುಗಳಿಗೆ ಗೋಪೂಜೆ ಮಾಡಿ ಬರಮಾಡಿಕೊಂಡರು. ನಂತರ ಮಾತನಾಡಿದ ಅವರು, ದೇಶಿಯ ಗೋವುಗಳ ಸಂರಕ್ಷಣೆ ಎಲ್ಲರ ಆದ್ಯ ಕರ್ತವ್ಯ. ವಿದೇಶಿ ತಳಿಗಳ ಬದಲಾಗಿ ದೇಶಿಯ ಗೋಸಾಕಾಣಿಕೆ ಮಾಡಲು ಪ್ರತಿಯೊಬ್ಬರು ಮುಂದಾಗಬೇಕು. ಇದಕ್ಕೆ ಮಾದರಿಯಾಗಿ ರಾಜಭವನದ ಗೋಶಾಲೆಗೆ ಎರಡು ದೇವಣಿ ಗೋತಳಿಯನ್ನು ಕರೆತರಲಾಗಿದೆ ಎಂದರು. ಇದನ್ನೂ ಓದಿ: ಕ್ರೀಡೆಯಲ್ಲಿ ಮಕ್ಕಳು ಭಾಗವಹಿಸಲು ಪ್ರೋತ್ಸಾಹಿಸಿ: ರಾಜ್ಯಪಾಲ ಕರೆ
ಕರ್ನಾಟಕದ ಹೆಮ್ಮೆ-ದೇವಣಿ ಗೋತಳಿಯು ಶಕ್ತಿ/ದುಡಿಮೆಗೆ, ಉಷ್ಣ ಸಹಿಷ್ಣುತೆಗೆ, ರೋಗ ನಿರೋಧಕ ಶಕ್ತಿ ಮತ್ತು ಕಠಿಣ ಹವಾಮಾನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳುವಿಕೆಗೆ ಹೆಸರುವಾಸಿ. ದೇವಣಿ ತಳಿಯ ಎತ್ತುಗಳು ಭಾರಿ ಕೃಷಿ ಕೆಲಸಗಳಿಗೆ ಹೇಳಿ ಮಾಡಿಸಿದ ತಳಿಯಾಗಿದ್ದು ಹಾಗೂ ಅರೆ ತೀವ್ರ ಕೃಷಿ ಪದ್ಧತಿಯಲ್ಲಿ ಕೂಡ ಸೂಕ್ತವಾದ ತಳಿಯಾಗಿದೆ. ಅಲ್ಲದೇ, ದೇವಣಿ ಹಸುಗಳ ಹಾಲು ಪೌಷ್ಠಿಕಾಂಶದಿಂದ ಕೂಡಿರುತ್ತದೆ.
ಈ ಸಂದರ್ಭದಲ್ಲಿ ರಾಜಭವನದ ಅಧಿಕಾರಿಗಳು, ಸಿಬ್ಬಂದಿ ಉಪಸ್ಥಿತರಿದ್ದರು.