ಬೆಳಗಾವಿ: ಮೃತ ಗುತ್ತಿಗೆದಾರ ಸಂತೋಷ್ ಪಾಟೀಲ್ ಮಾಡಿರುವ ಕಾಮಗಾರಿಗಳಿಗೆ ಸರ್ಕಾರದಿಂದ ಅಥವಾ ಸಂಬಂಧಪಟ್ಟ ಅಧಿಕಾರಿಗಳಿಂದ ಅನುಮೋದನೆಯೇ ಸಿಕ್ಕಿಲ್ಲ ಎಂದು ಬೆಳಗಾವಿ ಜಿಲ್ಲಾ ಪಂಚಾಯತ್ ಸಿಇಒ ದರ್ಶನ್ ಹೆಚ್ವಿ ಸ್ಫೋಟಕ ಮಾಹಿತಿ ನೀಡಿದ್ದಾರೆ.
ಸಂತೋಷ್ ಪಾಟಿಲ್ರ ಕಾಮಗಾರಿಗಳ ಕುರಿತಂತೆ ಜಿಲ್ಲಾ ಪಂಚಾಯತ್ ಮಾಜಿ ಅಧ್ಯಕ್ಷೆ ಆಶಾ ಐಹೊಳೆಯವರ ಸಹಿಯನ್ನು ಫೋರ್ಜರಿ ಮಾಡಿರುವುದು ಮೇಲ್ನೋಟಕ್ಕೆ ಕಂಡುಬರುತ್ತದೆ. ಅನುಮೋದನೆ ಪತ್ರದಲ್ಲಿರುವ ಸಹಿ ನನ್ನದಲ್ಲ ಎಂದು ಆಶಾ ಐಹೊಳೆ ಹೇಳಿದ್ದಾರೆ. ಈ ಕುರಿತಂತೆ ತನಿಖೆಯಿಂದಷ್ಟೇ ಎಲ್ಲಾ ಮಾಹಿತಿ ಹೊರಬೀಳಬೇಕಿದೆ ಎಂದು ಸಿಇಒ ದರ್ಶನ್ ಹೇಳಿದ್ದಾರೆ.
ಸಾಮಾನ್ಯವಾಗಿ ಜಿಪಂ ಅಧ್ಯಕ್ಷರಿಗೆ ಯಾರಾದರೂ ಮನವಿ ನೀಡಿದರೆ, ಅವರು ಆ ಮನವಿಯನ್ನು ಅಧಿಕಾರಿಗಳಿಗೆ ಕಳುಹಿಸುತ್ತಾರೆ. ಹಿಂದಿನ ಜಿ.ಪಂ. ಅಧ್ಯಕ್ಷರು ಪಂಚಾಯತ್ ರಾಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ 2021ರ ಫೆಬ್ರವರಿ 15 ರಂದು ಪತ್ರ ಬರೆದಿದ್ದಾರೆ. ಅದರ ಕೆಳಗಡೆ 108 ಕಾಮಗಾರಿಗಳ ಬಗ್ಗೆ ಉಲ್ಲೇಖಿಸಿ ಪಟ್ಟಿ ಮಾಡಿ ಅದರ ಕೆಳಗಡೆ ಸಹಿ ಮಾಡಿದ್ದಾರೆ. ಮೊದಲ ಹಾಗೂ ಕೊನೆಯ ಪುಟದಲ್ಲಿ ಹಸಿರು ಶಾಯಿಯಿಂದ ಬರೆದಿರುವ ಸಹಿ ನನ್ನ ಹಸ್ತಾಕ್ಷರ ಅಲ್ಲ ಎಂದು ಜಿ.ಪಂ. ಮಾಜಿ ಅಧ್ಯಕ್ಷೆ ಆಶಾ ಐಹೊಳೆ ಹೇಳಿದ್ದಾರೆ ಎಂದರು. ಇದನ್ನೂ ಓದಿ: ಮಸೀದಿಯ ಮೇಲೆ ನಾವೇನು ಬಾಂಬ್ ಹಾಕಿದ್ದೇವಾ?: ಮುತಾಲಿಕ್ ಗರಂ
ಸಾಮಾನ್ಯವಾಗಿ ಕಾಮಗಾರಿಗೆ ಅನುಮೋದನೆ ಕೊಡಬೇಕಾದರೆ ಪಟ್ಟಿ ಮಾಡುವುದಿಲ್ಲ. ಅದಕ್ಕೆ ಅದರದ್ದೇ ಆದಂತಹ ಸರ್ಕಾರದ ನಿಯಮಗಳಿವೆ. ಫೈಲ್ ನೋಟಿಂಗ್ ಆಗಬೇಕು, ಇಲಾಖೆ ಮುಖ್ಯಸ್ಥರು, ಸಂಬಂಧಿಸಿದವರು ಅನುಮೋದನೆ ಕೊಡಬೇಕು. ಆಮೇಲೆ ಅದಕ್ಕೆ ಪ್ರತ್ಯೇಕವಾಗಿ ಸರ್ಕಾರಿ ಆದೇಶ ಬರುತ್ತದೆ. ಸರ್ಕಾರ ಮಟ್ಟದಲ್ಲಿ ಇಲಾಖೆ ಕಾರ್ಯಾದರ್ಶಿಗಳು, ಜಿಲ್ಲಾಮಟ್ಟದಲ್ಲಿ ನನ್ನ ಅನುಮೋದನೆ ಆಗಬೇಕು. ಆದರೆ ಈ ಕಾಮಗಾರಿಗಳಲ್ಲಿ ನನ್ನ ಮಟ್ಟದಲ್ಲೂ ಅನುಮೋದನೆ ಆಗಿಲ್ಲ ಎಂದು ಹಿಂಡಲಗಾದಲ್ಲಿ ನಡೆದ ಕಾಮಗಾರಿಗಳಿಗೆ ಸರ್ಕಾರ ಅಥವಾ ಜಿಲ್ಲಾ ಪಂಚಾಯತ್ ಮಟ್ಟದಲ್ಲಿ ಅನುಮೋದನೆ ಸಿಕ್ಕಿಲ್ಲ ಎಂದು ಈ ವೇಳೆ ಸ್ಪಷ್ಟಪಡಿಸಿದರು.
ಹಿಂಡಲಗಾ ಗ್ರಾಮದಲ್ಲಿ 108 ಕಾಮಗಾರಿ ನಡೆದಿರುವ ವಿಚಾರ ನನಗೂ ಆಶ್ಚರ್ಯವಾಗಿದೆ. ಈ ರೀತಿ 108 ಕಾಮಗಾರಿ ಮಾಡಿರುವುದು ಅಚ್ಚರಿ ತಂದಿದೆ. ಇಷ್ಟೊಂದು ಸಮಸ್ಯೆಯಾದಾಗ ಅವರು ನಮ್ಮನ್ನು ಭೇಟಿ ಮಾಡಬೇಕಿತ್ತು. ಆದರೆ ಈ ಪ್ರಕರಣದಲ್ಲಿ ಈವರೆಗೂ ಯಾವೊಬ್ಬ ಗುತ್ತಿಗೆದಾರರೂ ನನ್ನನ್ನು ಭೇಟಿಯಾಗಿಲ್ಲ ಎಂದರು. ಇದನ್ನೂ ಓದಿ: ಹಿಂಡಲಗಾ ಗ್ರಾ.ಪಂ. ಅಧ್ಯಕ್ಷರಿಗೆ, ಸದಸ್ಯರಿಗೆ ಲೆಟರ್ ಕೊಟ್ಟಿದ್ದು ನಿಜ: ಆಶಾ ಐಹೊಳೆ
15ನೇ ಹಣಕಾಸಿನ ಆಯೋಗದಲ್ಲಿ ಗರಿಷ್ಠ ಎಂದರೂ 50 ರಿಂದ 60 ಲಕ್ಷ ರೂ. ಹಣ ಬರುತ್ತದೆ. ಆದರೆ 4 ಕೋಟಿ ರೂ. ಅನುದಾನ ಪಂಚಾಯಿತಿಗೆ ಬರುವುದಿಲ್ಲ. ಪೊಲೀಸರ ತನಿಖೆ ನಡೆಯುತ್ತಿದೆ. ನಮ್ಮ ಕಡೆಯಿಂದ ಏನು ಮಾಹಿತಿ ಬೇಕು ಅದನ್ನು ಕೊಡುತ್ತಿದ್ದೇವೆ. ಈ ಕುರಿತು ಪತ್ರ ಬರೆದಿರುವುದು ನಿಜ. ಅನುಮೋದನೆ ಎಂದು ಬರೆದಿರುವುದು ನಿಜವಲ್ಲ. ಈ ಬಗ್ಗೆ ತನಿಖೆ ಆಗಬೇಕು, ಆಗುತ್ತಿದೆ. ಈ ಬಗ್ಗೆ ಸರ್ಕಾರದ ಗಮನಕ್ಕೂ ತಂದಿದ್ದೇನೆ. ಈ ಪತ್ರ ನೋಡಿದಾಗ ಫೋರ್ಜರಿ ಮಾಡಿದ್ದು ಎಂಬುದು ಮೇಲ್ನೋಟಕ್ಕೆ ಗೊತ್ತಾಗುತ್ತಿದೆ ಎಂದರು.