ಕನ್ನಡದ ಹೆಸರಾಂತ ನಟ ಸತೀಶ್ ನೀನಾಂಸ ನಟನೆಯ ನಿರೀಕ್ಷಿತ ‘ಗೋಧ್ರಾ’ ಸಿನಿಮಾದ ಹೆಸರು ಬದಲಾಗಿದೆ. ಈ ಚಿತ್ರಕ್ಕೆ ಈಗ ‘ಡಿಯರ್ ವಿಕ್ರಂ’ ಎಂದು ಹೆಸರಿಡಲಾಗಿದೆ. ಶ್ರದ್ಧಾ ಶ್ರೀನಾಥ್ ಮತ್ತು ಸತೀಶ್ ಕಾಂಬಿನೇಷನ್ನ ಸಿನಿಮಾ ಇದಾಗಿದ್ದು, ನಂದೀಶ್ ನಿರ್ದೇಶನ ಮಾಡಿದ್ದಾರೆ. ನಿರ್ದೇಶಕರ ಚೊಚ್ಚಲ ಸಿನಿಮಾ ಇದಾಗಿದ್ದರೂ, ಈಗಾಗಲೇ ಟ್ರೇಲರ್ ನಿಂದಾಗಿ ಭಾರೀ ಸದ್ದು ಮಾಡಿದೆ.
ಸಿನಿಮಾದ ಟೈಟಲ್ ಬದಲಾವಣೆ ಕುರಿತು ಸತೀಶ್ ಮಾತನಾಡಿದ್ದಾರೆ, “ಈ ಸಿನಿಮಾ ಕ್ರಾಂತಿ ಮತ್ತು ಪ್ರೀತಿಯ ಸುತ್ತಲೂ ಹೆಣೆದಿರುವ ಸುಂದರವಾದ ಕಥನ. ಸಿನಿಮಾದ ಪ್ರತಿ ಹೆಜ್ಜೆಯಲ್ಲೂ ಸಮಾಜದ ಹುಳುಕನ್ನು ತೀಕ್ಷ್ಣವಾಗಿ ಪ್ರಶ್ನಿಸುವ ಧೈರ್ಯ ಮಾಡಿದೆ. ಗೋಧ್ರಾ ಪ್ರಸ್ತುತ ರಾಜಕೀಯ ಅರಾಜಕತೆಗೆ ಹಿಡಿದ ಕೈ ಗನ್ನಡಿ ಆಗಿದೆ. ಆದರೀಗ ಸಿನಿಮಾದ ಟೈಟಲ್ ವಿಚಾರವಾಗಿ ಒಂದಷ್ಟು ಚರ್ಚೆ ಶುರುವಾಗಿದೆ. ನಿಜ ಹೇಳುವುದಾದರೇ ನಮ್ಮ ಸಿನಿಮಾ ಯಾವುದೇ ನೈಜ ಘಟನೆಗೆ, ಪ್ರದೇಶವನ್ನು ಆಧರಿಸಿದ ಸಿನಿಮಾವಲ್ಲ. ಹೀಗಾಗಿ ಜನರಲ್ಲಿ ಗೊಂದಲ ಮೂಡಿಸಬಾರದು ಅನ್ನೋ ಕಾರಣದಿಂದ ಸಿನಿಮಾ ಶೀರ್ಷಿಕೆಯನ್ನು ಬದಲಾಯಿಸಲು ಚಿತ್ರತಂಡ ಯೋಚಿಸಿದೆ. ಇಂದಿನಿಂದ ಗೋಧ್ರಾ.. ‘ಡಿಯರ್ ವಿಕ್ರಂ’ ಆಗಿ ಪ್ರೇಕ್ಷಕರೆದುರು ಬರಲಿದೆ” ಎಂದಿದ್ದಾರೆ.
ಸತೀಶ್ ನೀನಾಸಂ ಮತ್ತು ಶ್ರದ್ಧಾ ಶ್ರೀನಾಥ್ ಸಿನಿಮಾದ ನಾಯಕ- ನಾಯಕಿಯಾಗಿ ನಟಿಸಿದ್ದು, ಅಚ್ಯುತ್ ಕುಮಾರ್, ವಸಿಷ್ಠ ಸಿಂಹ, ರಕ್ಷಾ ಸೋಮಶೇಖರ್, ಸೋನುಗೌಡ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಜೂಡಾ ಸ್ಯಾಂಡಿ ಸಂಗೀತ ನೀಡಿದ್ದು, KP ಹಿನ್ನೆಲೆ ಸಂಗೀತ ಪ್ರೇಕ್ಷಕರನ್ನು ಕಾಡಲಿದೆ. ಶಶಿಕುಮಾರ್ ಮತ್ತು ಜಾಕೆಬ್ ಕೆ. ಗಣೇಶ್ ಛಾಯಾಗ್ರಹಣದ ಜುಗಲ್ ಬಂಧಿ ಖಂಡಿತಾ ಇಷ್ಟವಾಗಲಿದೆ. ಈ ಸಿನಿಮಾ ಮೂಲಕ ನಂದೀಶ ಭರವಸೆಯ ನಿರ್ದೇಶಕನಾಗಿ ಚಂದನವನಕ್ಕೆ ಕಾಲಿಡುತ್ತಿದ್ದಾರೆ. ಇದನ್ನೂ ಓದಿ: ಶ್ರದ್ಧಾ ಶ್ರೀನಾಥ್ ಗುಡ್ ಬೈ ಹೇಳಿದ್ದು ಯಾಕೆ.?
ಅಂದಹಾಗೆ ಈ ಸಿನಿಮಾ ಥಿಯೇಟರ್ನಲ್ಲಿ ರಿಲೀಸ್ ಆಗದೇ ನೇರವಾಗಿ VOOT Select OTT ವೇದಿಕೆಯಲ್ಲಿ ಬಿಡುಗಡೆ ಆಗಲಿದೆಯಂತೆ. ಯಾವತ್ತಿನಿಂದ ಈ ಸಿನಿಮಾ ನೋಡಬಹುದು ಎನ್ನುವ ಕುರಿತು ಇನ್ನೂ ಡೇಟ್ ಅನೌನ್ಸ್ ಆಗಿಲ್ಲ. ಆದರೆ, ಅತೀ ಶೀಘ್ರದಲ್ಲೇ ರಿಲೀಸ್ ಮಾಡುವ ಪ್ಲ್ಯಾನ್ ನಡೆದಿದೆ ಎನ್ನಲಾಗುತ್ತಿದೆ.