ಹೈದರಾಬಾದ್: ವೈದ್ಯರ ನಿರ್ಲಕ್ಷ್ಯದಿಂದ ಮಗಳು ಮೃತಪಟ್ಟಿದ್ದಾಳೆಂದು ಕುಟುಂಬದವರು ಆಸ್ಪತ್ರೆಯ ಮುಂದೆ ಯುವತಿಯ ಮೃತದೇಹವಿಟ್ಟು ಪ್ರತಿಭಟನೆ ಮಾಡಿರುವ ಘಟನೆ ನಗರದ ಮಿಯಾಪುರದಲ್ಲಿ ನಡೆದಿದೆ.
ಪೂಜಿತಾ(18) ಮೃತ ಯುವತಿ. ಈ ಘಟನೆ ಮಂಗಳವಾರ ನಡೆದಿದ್ದು, ಮದಿನಗುಡ ಅರ್ಚನಾ ಆಸ್ಪತ್ರೆಯ ಮುಂದೆ ಮೃತ ದೇಹವಿಟ್ಟುಕೊಂಡು ಪ್ರತಿಭಟನೆ ಮಾಡಿದ್ದರು.
ಮೃತ ಪೂಜಿತಾ ಕದ್ದನೂರ್ ಗ್ರಾಮದ ಪಾಂಡು ಮತ್ತು ಕವಿತಾ ದಂಪತಿಯ ಪುತ್ರಿಯಾಗಿದ್ದು, ಶ್ರೀಚೈತನ್ಯ ಕಾಲೇಜಿನಲ್ಲಿ ದ್ವಿತೀಯ ಪಿಯುಸಿ ವ್ಯಾಸಂಗ ಮಾಡುತ್ತಿದ್ದಳು. ಹೊಟ್ಟೆಯ ನೋವಿನಿಂದ ಬಳಲುತ್ತಿದ್ದ ಪೂಜಿತಾಳನ್ನು ಡಿಸೆಂಬರ್ 26 ರಂದು ಪಟಂನ್ಚೆರುವು ಸಾಯಿ ಗಣೇಶ್ ಆಸ್ಪತ್ರೆಗೆ ಕರೆದುಕೊಂಡು ಹೋಗಿ ದಾಖಲು ಮಾಡಿದ್ದರು. ಅಲ್ಲಿ ಈಕೆಯನ್ನು ಅರ್ಚನಾ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ವೈದ್ಯರು ಸಲಹೆ ನೀಡಿದರು. ಕೂಡಲೇ ಪೋಷಕರು ಅರ್ಚನಾ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಅದೇ ರಾತ್ರಿ ವೈದ್ಯರು ಅಪೆಂಡಿಕ್ಸ್ ಆಪರೇಷನ್ ಮಾಡಿದ್ದಾರೆ. ಎರಡು ದಿನಗಳ ನಂತರ ಮನೆಗೆ ಕರೆದುಕೊಂಡು ಹೋಗಿ ಎಂದು ವೈದ್ಯರು ಸೂಚಿಸಿದ್ದರು. ಆದರೆ ಸೋಮವಾರ ರಾತ್ರಿ ಮತ್ತೆ ಯುವತಿಗೆ ಆಪರೇಷನ್ ಮಾಡಿದ್ದಾನೆ. ಮಂಗಳವಾರ 11 ಗಂಟೆವರೆಗೂ ಉತ್ತಮವಾಗಿ ಚಿಕಿತ್ಸೆಗೆ ಸ್ಪಂದಿಸುತ್ತಿದ್ದ ಅರ್ಚನಾ ಆ ಬಳಿಕ ಸಾವನ್ನಪ್ಪಿದ್ದಳು. ಬಿಪಿ ಹೆಚ್ಚಾದ ವೇಳೆ ವೈದರು ಶಸ್ತ್ರಚಿಕಿತ್ಸೆ ನಡೆಸಿದ್ದೆ ತಮ್ಮ ಮಗಳ ಸಾವಿಗೆ ಕಾರಣ ಎಂದು ಪೋಷಕರು ಆರೋಪಿಸಿದ್ದಾರೆ. ಆದರೆ ವೈದ್ಯರು ಪೋಷಕರ ಆರೋಪವನ್ನು ಅಲ್ಲಗೆಳೆದಿದ್ದು, ಅಪೆಂಡಿಕ್ಸ್ ನ ಸೋಂಕು ಹೆಚ್ಚಾಗಿದ್ದ ಕಾರಣ ಯುವತಿ ಸಾವನ್ನಪ್ಪಿದ್ದಾಳೆ ಎಂದು ಹೇಳಿದ್ದಾರೆ. ಇದರಿಂದ ಆಕ್ರೋಶಗೊಂಡ ಪೋಷಕರು ಆಸ್ಪತ್ರೆಯ ಮುಂದೆ ಪ್ರತಿಭಟನೆ ಮಾಡಿದ್ದಾರೆ.
ಈ ಬಗ್ಗೆ ಮಾಹಿತಿ ತಿಳಿದು ಮಿಯಾಪುರ ಪೊಲೀಸರು ಸ್ಥಳಕ್ಕೆ ಬಂದು ಮೃತ ಯುವತಿಯ ಕುಟುಂಬದವರನ್ನು ಸಮಾಧಾನ ಮಾಡಿದ್ದಾರೆ. ಈ ಕುರಿತು ಮಿಯಾಪುರ ಪೊಲೀಸ್ ಠಾಣೆಯಲ್ಲಿ ವೈದ್ಯರ ವಿರುದ್ಧ ನಿರ್ಲಕ್ಷ್ಯದ ದೂರು ದಾಖಲಿಸಲಾಗಿದ್ದು, ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.