ಲಕ್ನೋ: ಉತ್ತರ ಪ್ರದೇಶ ಶಿಯಾ ಸೆಂಟ್ರಲ್ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ವಾಸಿಂ ರಿಜ್ವಿ ಇಸ್ಲಾಂ ಧರ್ಮವನ್ನು ತೊರೆದು ಹಿಂದೂ ಧರ್ಮಕ್ಕೆ ಮತಾಂತರಗೊಂಡಿದ್ದಾರೆ.
ಸೋಮವಾರ ದಾಸ್ನಾ ದೇವಸ್ಥಾನದ ಮಹಂತ್ ನರಸಿಂಹ ಆನಂದ ಸರಾವತಿ ಅವರು ರಿಜ್ವಿ ಅವರಿಗೆ ಔಪಚಾರಿಕವಾಗಿ ಹಿಂದೂ ಧರ್ಮದ ದೀಕ್ಷೆಯನ್ನು ನೀಡಿದ್ದಾರೆ.
ಹಿಂದೂ ಧರ್ಮವನ್ನು ಸ್ವೀಕರಿಸಿರುವ ರಿಜ್ವಿ ಅವರಿಗೆ ಜಿತೇಂದ್ರ ನಾರಾಯಣ ಸಿಂಗ್ ತ್ಯಾಗಿ ಎಂಬ ಹೆಸರನ್ನು ನಾಮಕರಣ ಮಾಡಲಾಗಿದೆ. ಈ ವೇಳೆ ಮಾತನಾಡಿದ ಅವರು, ಹಿಂದೂ ಧರ್ಮ ವಿಶ್ವದ ಶುದ್ಧ ಧರ್ಮವಾಗಿದೆ. 1992 ರಲ್ಲಿ ಬಾಬರಿ ಮಸೀದಿಯನ್ನು ಧ್ವಂಸಗೊಳಿಸಿದ ದಿನ ಡಿಸೆಂಬರ್ 6. ಹೀಗಾಗಿ ಈ ಪವಿತ್ರ ದಿನದಂತೆ ಹಿಂದೂ ಧರ್ಮಕ್ಕೆ ಮತಾಂತರವಾಗಲು ಆಯ್ಕೆ ಮಾಡಿಕೊಂಡಿದ್ದೆ. ಇಂದಿನಿಂದ ನಾನು ಹಿಂದೂ ಧರ್ಮಕ್ಕಾಗಿ ಕೆಲಸ ಮಾಡುತ್ತೇನೆ. ಮುಸ್ಲಿಮರ ಮತಗಳು ಯಾವ ಪಕ್ಷಕ್ಕೂ ಹೋಗುವುದಿಲ್ಲ. ಅವರು ಕೇವಲ ಹಿಂದೂಗಳನ್ನು ಸೋಲಿಸಲು ತಮ್ಮ ಮತಗಳನ್ನು ಚಲಾಯಿಸುತ್ತಾರೆ ಎಂದು ಹೇಳಿದ್ದಾರೆ
ಈಗಾಗಲೇ ರಿಜ್ವಿ ಉಯಿಲು ಬರೆದಿದ್ದಾರೆ. ತನ್ನ ಮೃತ ದೇಹವನ್ನು ಸಾಂಪ್ರದಾಯಿಕ ಹಿಂದೂ ಸಂಪ್ರದಾಯದ ಪ್ರಕಾರ ಅಂತ್ಯಸಂಸ್ಕಾರ ಮಾಡಬೇಕು ಮತ್ತು ಮರಣದ ನಂತರ ಹೂಳಬಾರದು. ಗಾಜಿಯಾಬಾದ್ನ ದಾಸ್ನಾ ದೇವಸ್ಥಾನದ ಹಿಂದೂ ಧರ್ಮದರ್ಶಿ ನರಸಿಂಹ ಆನಂದ ಸರಾವತಿ ಅವರು ಅಂತ್ಯಸಂಸ್ಕಾರ ನಡೆಸಬೇಕು ಎಂದು ಉಲ್ಲೇಖಿಸಿದ್ದಾರೆ. ಇದನ್ನೂ ಓದಿ: ನಾನು ಇನ್ನು ಮುಂದೆ ಕಣ್ಣೀರು ಹಾಕಲ್ಲ: ಎಚ್ಡಿಕೆ
ಈ ಹಿಂದೆ ಭಯೋತ್ಪಾದನೆ ಮತ್ತು ಜಿಹಾದ್ಗೆ ಪ್ರಚೋದನೆ ನೀಡುತ್ತದೆ ಎಂದು ಆರೋಪಿಸಿ ಕುರಾನ್ನಿಂದ 26 ಸಾಲನ್ನು ತೆಗೆದು ಹಾಕುವಂತೆ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರದಿಂದ ದೇಶದೆಲ್ಲೆಡೆ ಚರ್ಚೆಗೆ ಕಾರಣವಾಗಿದ್ದರು. ಸುಪ್ರೀಂ ಕೋರ್ಟ್ ಅರ್ಜಿಯನ್ನು ಕ್ಷುಲ್ಲಕವೆಂದು ಪರಿಗಣಿಸಿ 50 ಸಾವಿರ ರೂ. ದಂಡವನ್ನು ಹಾಕಿ ಕುರಾನ್ನಿಂದ ಯಾವುದೇ ಸಾಲನ್ನು ತೆಗೆಯುವುದಿಲ್ಲ ಎಂದು ಹೇಳಿತ್ತು. ಸುಪ್ರೀಂ ಕೋರ್ಟ್ ಆದೇಶದ ಬಳಿಕ ವಾಸಿಂ ರಿಜ್ವಿ 26 ಸಾಲನ್ನು ಕೈಬಿಟ್ಟು ಹೊಸ ಕುರಾನ್ ರಚಿಸಿದ್ದರು. ಇದನ್ನೂ ಓದಿ: ಸೇನಾ ವಾಹನಗಳಿಗೆ ಬೆಂಕಿ ಹಚ್ಚಿದ್ದಕ್ಕೆ ಆತ್ಮ ರಕ್ಷಣೆಗೆ ಗುಂಡಿನ ದಾಳಿ
ಈ ಹಿಂದೆ ವಿಡಿಯೋ ಬಿಡುಗಡೆ ಮಾಡಿದ್ದ ರಿಜ್ವಿ, ಹಲವಾರು ಮೂಲಭೂತ ಇಸ್ಲಾಮಿಕ್ ಸಂಘಟನೆಗಳು ತನ್ನ ಹತ್ಯೆಗೆ ಸಂಚು ರೂಪಿಸಿವೆ. ನನಗೆ ಜೀವ ಬೆದರಿಕೆ ಹಾಕಿದ್ದಾರೆ ಎಂದು ತಿಳಿಸಿದ್ದರು.