ಹುಬ್ಬಳ್ಳಿ: ನಾವು ಗಣೇಶೋತ್ಸವವನ್ನು ಸ್ವಾಗತಿಸಲ್ಲ. ಹುಬ್ಬಳ್ಳಿ ಆಯುಕ್ತರ ವಿರುದ್ಧ ಕ್ರಿಮಿನಲ್ ಕೇಸ್ ಹಾಕುತ್ತೇವೆ. ಹೈಕೋರ್ಟ್ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸುವುದಾಗಿ ಅಂಜುಮನ್ ಸಂಸ್ಥೆಯ ಅಧ್ಯಕ್ಷ ಯುಸೂಫ್ ಸವಣೂರ ಹೇಳಿದ್ದಾರೆ.
ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು, 200 ವರ್ಷಗಳಿಂದ ಗಣೇಶೋತ್ಸವ ವಿಚಾರ ಬಂದೇ ಇರಲಿಲ್ಲ. ಈಗ ಮುನ್ನೆಲೆಗೆ ಬಂದಿದ್ದು ಯಾಕೆ ಎಂದು ಪ್ರಶ್ನಿಸಿದರು.
ಗಣೇಶೋತ್ಸವ ವಿಚಾರವಾಗಿ ಮೇಯರ್ ಅವರು ಸಮಿತಿ ರಚನೆ ಮಾಡಿದ್ದರು. ಅದರಲ್ಲಿ ಮೂವರು ಬಿಜೆಪಿ ಹಾಗೂ ಇಬ್ಬರು ಕಾಂಗ್ರೆಸ್ ಪಾಲಿಕೆ ಸದಸ್ಯರಿದ್ದರು. ಉಳಿದ ಜೆಡಿಎಸ್, ಎಂಐಎಂ ಹಾಗೂ ಪಕ್ಷೇತರ ಸದಸ್ಯರನ್ನ ಅವರು ಸಮಿತಿಯಲ್ಲಿ ಹಾಕಿರಲಿಲ್ಲ ಎಂದು ದೂರಿದರು. ಇದನ್ನೂ ಓದಿ: ಹುಬ್ಬಳ್ಳಿ ಈದ್ಗಾದಲ್ಲಿ ಬೆಳ್ಳಂಬೆಳಗ್ಗೆ ಗಣೇಶ ಮೂರ್ತಿ ಪ್ರತಿಷ್ಠಾಪನೆ
ಈ ಹಿಂದೆ ಬಸವರಾಜ್ ಶೆಟ್ಟರ್ ಎಂಬುವವರು ಈದ್ಗಾ ಮೈದಾನದಲ್ಲಿ ಚಾಂಗ ದೇವ ಜಾತ್ರೆ ಮಾಡಲು ಅನುಮತಿಗೆ ಕೇಳಿದ್ದು ಅರ್ಜಿ ಹಾಕಿದ್ದರು. ನಮಾಜ್ ಆದ ಮೇಲೆ ಜಾತ್ರೆಗೆ ಅವಕಾಶ ಕೇಳಿದ್ದನ್ನ ಜಿಲ್ಲಾ ಹಾಗೂ ಹೈಕೋರ್ಟ್ ವಜಾ ಮಾಡಿದೆ. ಇಲ್ಲಿ ವಾಣಿಜ್ಯ ಮಳಿಗೆ ಇತ್ತು. ಕೋರ್ಟ್ ಆದೇಶದಂತೆ ಆ ಕಟ್ಟಡವನ್ನು ನೆಲಸಮ ಮಾಡಿದ್ದೇವೆ ಎಂದು ಹೇಳಿದರು. ಇದನ್ನೂ ಓದಿ: ಸ್ವಾತಂತ್ರ್ಯ ಬಂದ ಮೇಲೂ ಗಣೇಶೋತ್ಸವಕ್ಕೆ ಪರದಾಡುತ್ತಿದ್ದೇವೆ: ಮುತಾಲಿಕ್
ಈಗ ವಿಶೇಷ ಸಭೆ ಮಾಡಿ ಗಣೇಶೋತ್ಸವ ಮಾಡಲು ಅವಕಾಶಕ್ಕಾಗಿ ಸಮಿತಿ ಮಾಡಿದ್ದಾರೆ. ಆ ಈದ್ಗಾ ಒಪ್ಪಂದದಲ್ಲಿ ಬೇರೆ ಉದ್ದೇಶಕ್ಕಾಗಿ ಮೈದಾನವನ್ನು ಬಳಕೆ ಮಾಡುವಂತಿಲ್ಲ. ಹೈಕೋರ್ಟ್ನಲ್ಲಿ ಈ ಬಗ್ಗೆ ವಾದ ವಿವಾದ ನಡೆದಾಗ ಹುಬ್ಬಳ್ಳಿ ಪಾಲಿಕೆ ಆಯುಕ್ತರು ಆಗಲೇ ಗಣೇಶೋತ್ಸವಕ್ಕೆ ಜಾಗ ಕೊಡಲಾಗಿದೆ ಎಂದು ಆದೇಶ ಪ್ರತಿ ನೀಡಿದ್ದಾರೆ ಎಂದು ಹೇಳಿದರು.
1990 ಪ್ರಕಾರ ಆದೇಶದ ಪ್ರಕಾರ ಪಾಲಿಕೆಯಿಂದ ನ್ಯಾಯಾಂಗ ನಿಂದನೆ ಆಗಿದೆ. ಹೀಗಾಗಿ ಪಾಲಿಕೆ ಆಯುಕ್ತರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ಹಾಕುತ್ತೇವೆ. ಈ ಹಬ್ಬ ಮಾಡುವ ಮೊದಲೇ ಪ್ರಹ್ಲಾದ್ ಜೋಶಿ, ಜಗದೀಶ್ ಶೆಟ್ಟರ್, ಬಸವರಾಜ್ ಹೊರಟ್ಟಿ ಹಾಗೂ ಪ್ರಸಾದ ಅಬ್ಬಯ್ಯಗೆ ಕರೆದು ಸಭೆ ಮಾಡಬಹುದಿತ್ತು. ಅಂಜುಮನ್ ಸಂಸ್ಥೆಯವರನ್ನು ಕರೆದು ಮೂರು ಸಾವಿರಮಠದಲ್ಲಿ ಸಭೆ ಮಾಡಬಹುದಿತ್ತು ಎಂದರು.
ನಾವು ಗಣೇಶೋತ್ಸವವನ್ನು ಸ್ವಾಗತ ಮಾಡುವುದಿಲ್ಲ. ಹೈಕೋರ್ಟ್ ಆದೇಶವನ್ನು ಸ್ವಾಗತ ಮಾಡುತ್ತೇವೆ. ಕೋರ್ಟ್ ಆದೇಶವನ್ನು ಎಲ್ಲರೂ ಪಾಲನೆ ಮಾಡಬೇಕು. ನಾವು ಮಾಡುತ್ತೇವೆ ಎಂದು ಅವರು ಹೇಳಿದರು.