ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಸ್ವಾತಂತ್ರ್ಯ ಹೋರಾಟದ ಕೊನೆಯಕೊಂಡಿಯಾಗಿದ್ದ ಅಂಕೋಲಾದ ಶತಾಯಿಷಿ ವೆಂಕಣ್ಣ ಬೊಮ್ಮಯ್ಯ ನಾಯಕ ಅಸ್ತಂಗತರಾಗಿದ್ದಾರೆ.
ವೆಂಕಣ್ಣ ನಾಯಕ ಅವರು ಬ್ರಿಟಿಷರ ವಿರುದ್ಧ ಅಸಹಕಾರ ಚಳವಳಿ, ಜಂಗಲ್ ಸತ್ಯಾಗ್ರಹ, ಹುಲ್ಲುಬನ್ನಿ ಸತ್ಯಾಗ್ರಹ, ಉಪ್ಪಿನ ಸತ್ಯಾಗ್ರಹ, ಉಳುವರೆ ಜಂಗಲ್ ಸುಡುವ ಕಾರ್ಯದಲ್ಲಿ ಭಾಗವಹಿಸಿದ್ದರು. ಸ್ವಾತಂತ್ರ್ಯ ಹೋರಾಟದಲ್ಲಿ ನಿರಂತರವಾಗಿ ಭಾಗಿಯಾಗಿದ್ದ ಇವರು 1942ರ ಮೇ 12 ರಿಂದ 1943ರ ಜೂನ್ 7ರವರೆಗೆ ನಾಸಿಕ್ ಸೆಂಟ್ರಲ್ ಜೈಲ್ನಲ್ಲಿ ಶಿಕ್ಷೆ ಅನುಭವಿಸಿದ್ದರು.
ಸ್ವಾತಂತ್ರ್ಯ ನಂತರದಲ್ಲಿ ಸಾಮಾಜಿಕ ಹಾಗೂ ಸಹಕಾರಿ ಕ್ಷೇತ್ರದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಸೇವಾ ಸಹಕಾರಿ ಸಂಘ ತಳಗದ್ದೆಯ ಸಂಸ್ಥಾಪನಾ ಅಧ್ಯಕ್ಷರಾಗಿ ಸೇವಾ ಸಹಕಾರಿ ಸಂಘ ಸೂರ್ವೆಯ ಅಧ್ಯಕ್ಷರಾಗಿ, ತಾಲೂಕಾ ಕೃಷಿ ಹುಟ್ಟುವಳಿ ಮಾರಾಟ ಸಹಕಾರಿ ಸಂಘದ ನಿರ್ದೇಶಕರಾಗಿ ಹೀಗೆ ಹಲವು ಕಡೆಗಳಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇದನ್ನೂ ಓದಿ: ಮಹಾಮಳೆಗೆ ನಲುಗಿದ ರಾಜ್ಯ ರಾಜಧಾನಿ- 100ಕ್ಕೂ ಹೆಚ್ಚು ಮನೆಗೆ ನುಗ್ಗಿದ ನೀರು, ಕೆರೆಯಂತಾದ ರಸ್ತೆಗಳು
ಮೃತರು ಪತ್ನಿ ಪಾರ್ವತಿ, ಮೂರು ಗಂಡು ಮತ್ತು ಮೂರು ಹೆಣ್ಣು ಮಕ್ಕಳು ಸೇರಿದಂತೆ ಅಪಾರ ಬಂಧು-ಬಳಗವನ್ನು ಅಗಲಿದ್ದಾರೆ. ವೆಂಕಣ್ಣ ಬೊಮ್ಮಯ್ಯ ನಾಯಕ ಅವರ ಅಂತ್ಯಕ್ರಿಯೆಯು ಅಂಕೋಲದ ಸೂರ್ವೆಯಲ್ಲಿ ನಡೆಯಲಿದ್ದು, ಅಧಿಕಾರಿಗಳು ಮತ್ತು ಸಾರ್ವಜನಿಕರು ಪಾಲ್ಗೊಳ್ಳಲಿದ್ದಾರೆ. ಇದನ್ನೂ ಓದಿ: ಜಮೀರ್ `ಗಣೇಶ’ ಅಸ್ತ್ರ – ಇಷ್ಟು ದಿನ ಇಲ್ಲದ್ದು ಈಗ್ಯಾಕೆ? ಶಾಸಕರ ನಡೆಗೆ ಸ್ಥಳೀಯರಿಂದ ಆಕ್ರೋಶ