ಹಾವೇರಿ: ಜಿಲ್ಲೆಯ ಹಿರೇಕೆರೂರು ತಾಲೂಕಿನಲ್ಲಿನ ರಾಜಕೀಯ ಬೆಳವಣಿಗೆಗಳಿಂದ ಬೇಸತ್ತು ಬಿಜೆಪಿಗೆ (BJP) ಮಾಜಿ ಶಾಸಕ ಯು.ಬಿ.ಬಣಕಾರ (UB Banakar) ಗುಡ್ ಬೈ ಹೇಳಿದ್ದಾರೆ.
ಬಿಜೆಪಿಯ ಪ್ರಾಥಮಿಕ ಸದಸ್ಯತ್ವ, ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ (BS Yediyurappa) ಅವರ ಆಪ್ತರಾಗಿದ್ದ ಯು.ಬಿ.ಬಣಕಾರ ಈಗ ರಾಜೀನಾಮೆ ನೀಡಿದ್ದಾರೆ.
ಯು.ಬಿ. ಬಣಕಾರ ಎರಡು ಬಾರಿ ಹಿರೇಕೆರೂರಿನ ಕ್ಷೇತ್ರದ ಶಾಸಕರಾಗಿದ್ದರು. 1994ರಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಬಣಕಾರ ಗೆಲುವು ಸಾಧಿಸಿದ್ದರು. 2013ರಲ್ಲಿ ಯಡಿಯೂರಪ್ಪ ಸ್ಥಾಪನೆ ಮಾಡಿದ್ದ ಕೆಜೆಪಿ ಪಕ್ಷದಿಂದ ಸ್ಪರ್ಧಿಸಿ ಬಣಕಾರ ಗೆಲುವು ಸಾಧಿಸಿದ್ದರು. ಹಿರೇಕೆರೂರು ಕ್ಷೇತ್ರದ ಉಪಚುನಾವಣೆಯಲ್ಲಿ ಬಿ.ಸಿ.ಪಾಟೀಲ್ಗೆ ಬಿಜೆಪಿ ಟಿಕೆಟ್ ಬಿಟ್ಟುಕೊಟ್ಟಿದ್ದರು. ಈಗ ಇ-ಮೇಲ್ ಮೂಲಕ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೆ, ಉಗ್ರಾಣ ನಿಗಮದ ಅಧ್ಯಕ್ಷ ಸ್ಥಾನ ಹಾಗೂ ವೀರಶೈವ ಲಿಂಗಾಯತ ಅಭಿವೃದ್ಧಿ ನಿಗಮದ ನಿರ್ದೇಶಕ ಸ್ಥಾನಕ್ಕೂ ರಾಜೀನಾಮೆ ನೀಡಿದ್ದಾರೆ.
ಸದ್ಯ ಬೆಂಗಳೂರಿನ ನಿವಾಸದಲ್ಲಿರುವ ಬಣಕಾರ ಉಳಿದುಕೊಂಡಿದ್ದು, ನಾಳೆ ಉಗ್ರಾಣ ನಿಗಮದ ಕಚೇರಿಯಲ್ಲಿ ಬೀಳ್ಕೊಡುಗೆ ಸಮಾರಂಭ ಆಯೋಜನೆ ಮಾಡಲಾಗಿದೆ. ನವಂಬರ್ 11 ರಂದು ಹಿರೇಕೆರೂರಿಗೆ ಆಗಮಿಸಿ ಅಭಿಮಾನಿಗಳ ಜೊತೆ ಬಣಕಾರ ಚರ್ಚೆ ನಡೆಸಲಿದ್ದಾರೆ. ಚುನಾವಣೆಗೆ ನಿಲ್ಲುವ ಬಗ್ಗೆ ಹಾಗೂ ನಿಲ್ಲುವುದಾದರೆ ಯಾವ ಪಕ್ಷದಿಂದ ನಿಲ್ಲಬೇಕು, ಹೇಗೆ ಎಂಬುದರ ಕುರಿತು ನನ್ನ ಜನರ ಜೊತೆ ಚರ್ಚಿಸಿ ನಿರ್ಧಾರ ಕೈಗೊಳ್ಳೋದಾಗಿ ಬಣಕಾರ ತಿಳಿಸಿದ್ದಾರೆ. ಇದನ್ನೂ ಓದಿ: ಜಿ20 ಲೋಗೋದಲ್ಲಿ ಉದ್ದೇಶಪೂರ್ವಕವಾಗಿ ಬಿಜೆಪಿ ತನ್ನ ಲೋಗೋ ತುರುಕಿದೆ: ಕಾಂಗ್ರೆಸ್ ಕಿಡಿ
ಯು.ಬಿ.ಬಣಕಾರ ಕಾಂಗ್ರೆಸ್ ಪಕ್ಷಕ್ಕೆ ಹೋಗಲಿದ್ದಾರೆ ಎನ್ನುವ ಚರ್ಚೆ ಕೂಡಾ ಕ್ಷೇತ್ರದಲ್ಲಿ ನಡೆಯುತ್ತಿದೆ. ಯು.ಬಿ.ಬಣಕಾರ ಯಾವ ನಿರ್ಧಾರ ಕೈಗೊಳ್ಳುತ್ತಾರೆ ಅನ್ನೋದು ಕಾದು ನೋಡಬೇಕಾಗಿದೆ. ಇದನ್ನೂ ಓದಿ: ರಾಹುಲ್ ಗಾಂಧಿ ವಿದೇಶಿ ತಳಿ, ಜಾರಕಿಹೊಳಿಯನ್ನು ಉಚ್ಛಾಟಿಸಿ: ಯತ್ನಾಳ್