– ಮಹಾರಾಷ್ಟ್ರದಲ್ಲಿ ಮನೆಯೊಂದು, ಎರಡು ಬಾಗಿಲು
– ಜೆಎನ್ಯು ಹೋರಾಟದ ವಿರುದ್ಧ ಕಿಡಿ
ಮುಂಬೈ: ಸಿದ್ಧಾಂತಗಳನ್ನು ಬದಿಗೊತ್ತಿ ಮೈತ್ರಿ ಮಾಡಿಕೊಂಡಿರುವ ಮಹಾರಾಷ್ಟ್ರದಲ್ಲಿ ಕಾಂಗ್ರೆಸ್ ಜವಾಹರ್ ಲಾಲ್ ನೆಹರು ವಿವಿ ಹೋರಾಟಕ್ಕೆ ಬೆಂಬಲ ಸೂಚಿಸಿದರೆ ಶಿವಸೇನೆ ತುಕುಡೆ ತುಕಡೆ ಗ್ಯಾಂಗ್ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದೆ.
ತನ್ನ ಮುಖವಾಣಿ ಸಾಮ್ನಾದಲ್ಲಿ ಬರೆದ ಸಂಪಾದಕೀಯದಲ್ಲಿ,”ಅಖಂಡ ಭಾರತದ ಕಲ್ಪನೆಯನ್ನು ಕನಸನ್ನು ವಿನಾಯಕ ದಾಮೋದರ್ ಸಾವರ್ಕರ್ ಹೊಂದಿದ್ದರು. ಯಾರೆಲ್ಲ ತುಕಡೆ ತುಕಡೆ ಘೋಷಣೆ ಕೂಗುತ್ತಿದ್ದಾರೋ ಅವರಿಗೆಲ್ಲ ‘ಅಖಂಡ ಭಾರತ’ದ ನಕ್ಷೆಯೊಂದಿಗೆ ಕಪಾಳಮೋಕ್ಷ ಮಾಡಬೇಕು” ಎಂದು ಬರೆದಿದೆ.
ದೇಶ ವಿರುದ್ಧ ಘೋಷಣೆ ಕೂಗುವ ವಿರುದ್ಧ ಸರ್ಕಾರ ಸಿಟ್ಟಾಗಿದ್ದು ನಿಜ. ದೇಶದ ವಿರುದ್ಧವೇ ಧ್ವನಿ ಎತ್ತುತ್ತಿರುವ ಇವರಿಗೆ ಸರಿಯಾಗಿ ಕಪಾಳಮೋಕ್ಷ ಮಾಡಬೇಕು. ಕಪಾಳಮೋಕ್ಷಕ್ಕೆ ಇವರು ನಿಜವಾಗಿಯೂ ಅರ್ಹರು ಎಂದು ಬರೆದುಕೊಂಡಿದೆ.
ಈ ವೇಳೆ ಸೇನೆಯ ಜನರಲ್ ಮನೋಜ್ ಮುಕುಂದ್ ನರಾವಣೆ ನೀಡಿದ್ದ ಹೇಳಿಕೆಯನ್ನು ಶಿವಸೇನೆ ಸ್ವಾಗತಿಸಿದ್ದು, ಭಾರತ ಸರ್ಕಾರ ಪಾಕ್ ಆಕ್ರಮಿತ ಕಾಶ್ಮೀರವನ್ನು ವಶಪಡಿಸಿಕೊಳ್ಳಲು ಆದೇಶ ನೀಡಬೇಕೆಂದು ಆಗ್ರಹಿಸಿದೆ.
ಅಖಂಡ ಭಾರತ ಸಾವರ್ಕರ್ ಅವರ ಕಲ್ಪನೆಯಾಗಿದ್ದು, ಒಂದು ವೇಳೆ ಸರ್ಕಾರ ಪಿಓಕೆ ವಶಪಡಿಸಿಕೊಳ್ಳುವಂತೆ ಅದೇಶ ನೀಡಿದರೆ ಅದು ಸಾರ್ವಕರ್ ಅವರಿಗೆ ಗೌರವ ನೀಡಿದಂತಾಗುತ್ತದೆ. ಅಷ್ಟೇ ಅಲ್ಲದೇ ಕೇಂದ್ರ ಸರ್ಕಾರ ‘ತುಕಡೆ ತುಕಡೆ ಗ್ಯಾಂಗ್’ ಸದಸ್ಯರನ್ನು ಶಿಕ್ಷಿಸಬೇಕೆಂದು ಹೇಳಿದೆ.
ಶನಿವಾರ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಜನರಲ್ ನರಾವಣೆ, ಜಮ್ಮು ಕಾಶ್ಮೀರದ ಗಡಿ ನಿಯಂತ್ರಣ ಭಾಗದಲ್ಲಿ ಪಾಕಿಸ್ತಾನ ತಂಟೆ ಮಾಡಿದರೆ ಸುಮ್ಮನೆ ಇರುವುದಿಲ್ಲ. ಜಮ್ಮು ಕಾಶ್ಮೀರ ಸೇರಿದಂತೆ ಪಾಕಿಸ್ತಾನ ಆಕ್ರಮಿಸಿಕೊಂಡಿರುವ ಕಾಶ್ಮೀರದ ಕೆಲವು ಪ್ರದೇಶಗಳನ್ನು ವಶಪಡಿಸಿಕೊಳ್ಳಲು ನಾವು ಸಿದ್ಧರಿದ್ದೇವೆ. ಈ ಬಗ್ಗೆ ಸಂಸತ್ತಿನಲ್ಲಿ ನಿರ್ಣಯವಾಗಬೇಕು. ಪಾಕ್ ಆಕ್ರಮಿತ ಕಾಶ್ಮೀರ ಮೇಲೆ ದಾಳಿ ನಡೆಸಿ ಎಂದು ಸರ್ಕಾರ ನಿರ್ದೇಶನ ನೀಡಿದರೆ ಒಂದು ಕ್ಷಣವನ್ನು ವ್ಯರ್ಥ ಮಾಡದೇ ಮುನ್ನುಗುತ್ತೇವೆ ಎಂದು ಹೇಳಿದ್ದರು.