ತುಮಕೂರು: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಅವರು, ನಾಲ್ಕು ತಲೆಮಾರಿಗೆ ಬೇಕಾಗುವಷ್ಟು ಸಂಪಾದನೆ ಮಾಡಿದ್ದಾರೆ ಎಂದು ಹೇಳಿರೋದು ಕಾಂಗ್ರೆಸ್ಸಿಗರಿಗೆ ಅಲ್ಲ ಎಂದು ಮಾಜಿ ಸಿಎಂ ವೀರಪ್ಪ ಮೊಯ್ಲಿ ಸಮರ್ಥಿಸಿಕೊಂಡಿದ್ದಾರೆ.
ಕಾಂಗ್ರೆಸ್ ಪ್ರತಿಭಟನೆಯಲ್ಲಿ ಭಾಗಿಯಾಗಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡುತ್ತಾ ರಮೇಶ್ ಕುಮಾರ್ ವಿವಾದಾತ್ಮಕ ಹೇಳಿಕೆಗೆ ಪ್ರತಿಕ್ರಿಯಿಸಿ, ಅವರ ಹೇಳಿಕೆಗೆ ಅವರೇ ಸ್ಪಷ್ಟೀಕರಣ ಕೊಟ್ಟಿದ್ದಾರೆ. ನಾಲ್ಕು ತಲೆಮಾರಿಗೆ ಬೇಕಾಗುವಷ್ಟು ಸಂಪಾದನೆ ಮಾಡಿದ್ದಾರೆ ಎಂದು ಹೇಳಿರೋದು ಕಾಂಗ್ರೆಸ್ಸಿಗರಿಗೆ ಅಲ್ಲ. ಬದಲಾಗಿ ಕಾಂಗ್ರೆಸ್ ಆಡಳಿತದಲ್ಲಿ ಅಭಿವೃದ್ಧಿಯ ಫಲವನ್ನ ಅನುಭವಿಸಿದ್ದ ದೇಶದ ಜನರಿಗೆ ಹೇಳಿದ್ದು. ಅವರು ನಮ್ಮ ಶ್ರೇಷ್ಠ ನಾಯಕರು. ಅದರ ಬಗ್ಗೆ ನಾನೇನು ಮಾತನಾಡಲ್ಲ ಎಂದು ತಿಳಿಸಿದರು. ಇದನ್ನೂ ಓದಿ: 3-4 ತಲೆಮಾರಿಗೆ ಆಗುವಷ್ಟು ಮಾಡಿಕೊಂಡಿದ್ದೇವೆ, ಈಗ ಋಣ ತೀರಿಸುವ ಸಮಯ ಬಂದಿದೆ: ರಮೇಶ್ ಕುಮಾರ್
ನಾನು ಸಿಎಂ ಆಕಾಂಕ್ಷಿ ಅಲ್ಲ. ನಾನು ಮುಖ್ಯಮಂತ್ರಿ ಆಗಿದ್ದೀನಿ,ಕೇಂದ್ರ ಸಚಿವ ಆಗಿದ್ದೀನಿ. ನನಗೆ ತೃಪ್ತಿ ಇದೆ. ಕಾಂಗ್ರೆಸ್ಸನ್ನು ಬಲಪಡಿಸೋ ಕೆಲಸ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ಅವರು ಮಾಡಬೇಕು. ಸಿಎಂ ಆಕಾಂಕ್ಷಿಗಳ ಬಗ್ಗೆ ಈಗ ಚರ್ಚೆ ಏನಿಲ್ಲ. 2023ಕ್ಕೆ ಕಾಂಗ್ರೆಸ್ ಖಂಡಿತಾ ಅಧಿಕಾರಕ್ಕೆ ಬರುತ್ತೆ. ಹೈಕಮಾಂಡ್ ಹಾಗೂ ಶಾಸಕರು ಯಾರನ್ನ ಸೂಚಿಸುತ್ತಾರೆ ಅವರು ಸಿಎಂ ಆಗ್ತಾರೆ ಎಂದು ಹೇಳಿದರು.