ರಾಯಚೂರು: 40% ಕಮಿಷನ್ ತನಿಖೆ ಪಾರದರ್ಶಕವಾಗಿ ನಡೆದರೆ ರಾಜ್ಯದ 90% ಸಚಿವರು ರಾಜೀನಾಮೆ ಕೊಡಬೇಕಾಗುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಾಜಿ ಸಚಿವ ಈಶ್ವರಪ್ಪರನವರ ವಿರುದ್ಧ ಭ್ರಷ್ಟಾಚಾರದ ಪ್ರಕರಣ ದಾಖಲಾಗಬೇಕು. ಹೈಕೋರ್ಟ್ ನ್ಯಾಯಾಧೀಶರ ನೇತೃತ್ವದಲ್ಲಿ ಪ್ರಕರಣ ತನಿಖೆಯಾಗಬೇಕು ಎಂದು ಒತ್ತಾಯಿಸಿದರು.
ನಮ್ಮ ಪಕ್ಷವನ್ನು ಒಳಗೊಂಡು ಎಲ್ಲರ ವಿರುದ್ಧವೂ ತನಿಖೆಯಾಗಲಿ. ಉಪ್ಪು ತಿಂದವರು ಎಲ್ಲರೂ ನೀರು ಕುಡಿಯಲೇ ಬೇಕು. ರಾಜ್ಯ ಸರ್ಕಾರದಲ್ಲಿ ಯಾವುದೇ ಖರೀದಿ, ಕಾಮಗಾರಿಗೆ 40% ಕಮಿಷನ್ ಇಲ್ಲದೆ ಕೆಲಸವಾಗಲ್ಲ. ಗುತ್ತಿಗೆದಾರರ ಸಂಘದ ಅಧ್ಯಕ್ಷರು ಪ್ರಧಾನಿಗೆ ಪತ್ರ ಬರೆದರೂ ಏನೂ ಕೆಲಸವಾಗಿಲ್ಲ ಎಂದು ಕಿಡಿಕಾರಿದರು.
ಸಂತೋಷ ಸಾವಿಗೆ ಮುನ್ನ ಸ್ಪಷ್ಟವಾಗಿ ತನ್ನ ಸಾವಿಗೆ ಈಶ್ವರಪ್ಪನವರೇ ಕಾರಣ ಎಂದು ಹೇಳಿದ್ದಾನೆ. ಆದರೆ ಬಿಜೆಪಿ ಸರ್ಕಾರ ಈ ಪ್ರಕರಣ ಮುಚ್ಚಿಹಾಕಲು, ಈಶ್ವರಪ್ಪರನ್ನ ರಕ್ಷಿಸಲು ಮುಂದಾಗಿದೆ. ಭ್ರಷ್ಟಾಚಾರ ನಿಗ್ರಹದ ಕಠಿಣ ಕಾನೂನು ಅಡಿ ಈಶ್ವರಪ್ಪರನ್ನ ಬಂಧಿಸಬೇಕು. ಬಿಜೆಪಿ ಕಾರ್ಯಕರ್ತ ಗುತ್ತಿಗೆದಾರರೇ ಕಮಿಷನ್ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದರು.
ಕೋಮು ಗಲಭೆಯಾದರೆ ಕಾಂಗ್ರೆಸ್ಗೆ ನಷ್ಟವಾಗುತ್ತದೆ. ಬಿಜೆಪಿ ಕೋಮು ಗಲಭೆ ಸೃಷ್ಟಿಸಿ ಲಾಭಮಾಡಿಕೊಳ್ಳುತ್ತದೆ. ಕಾನೂನು ಎಲ್ಲೆಲ್ಲಿ ಉಲ್ಲಂಘನೆಯಾಗುತ್ತೆ ಅಲ್ಲಿ ಕ್ರಮ ತೆಗೆದುಕೊಳ್ಳಬೇಕು. ಸರಿಯಾದ ಕ್ರಮ ತೆಗೆದುಕೊಳ್ಳದಿದ್ದರೆ ಗಲಭೆಗಳು ಆಗುತ್ತವೆ, ಸಮಸ್ಯೆಗಳು ಹೆಚ್ಚಾಗುತ್ತವೆ ಎಂದು ತಿಳಿಸಿದರು. ಇದನ್ನೂ ಓದಿ: ಸರ್ಕಾರಕ್ಕೆ ಪರ್ಸೆಂಟೇಜ್ ಕೊಟ್ಟು ಮಠ ಕಟ್ಟುವ ಅಗತ್ಯವಿಲ್ಲ: ನಿರಂಜನಪುರಿ ಶ್ರೀ
ಪಿಎಸ್ಐ ನೇಮಕಾತಿಯಲ್ಲಿ ಭ್ರಷ್ಟಾಚಾರವಾಗಿದೆ. ತಾತ್ಕಾಲಿಕ ಪಟ್ಟಿ ತಡೆಹಿಡಿದು ತನಿಖೆ ನಡೆಸಬೇಕು ಎಂದು ಒತ್ತಾಯ ಮಾಡಿದ್ದೆವು. ಈಗ ಕಣ್ಣು ಒರೆಸುವ ತಂತ್ರ ಮಾಡಿ ಸಿಐಡಿಗೆ ಕೊಟ್ಟಿದ್ದಾರೆ. ಭ್ರಷ್ಟಾಚಾರದಲ್ಲಿ ನಂ.1 ಎನ್ನುವ ಕೀರ್ತಿ ಬಿಜೆಪಿಗೆ ಸಲ್ಲುತ್ತದೆ. ಮಠ, ದೇವಾಲಯಗಳಿಗೆ ನೀಡುವ ಅನುದಾನದಲ್ಲೂ 30% ಕಮಿಷನ್ ನೀಡಬೇಕಿದೆ. ಸ್ವಾಮೀಜಿಗಳು ಈ ಕಮಿಷನ್ ದಂಧೆ ಬಗ್ಗೆ ಆರೋಪ ಮಾಡುತ್ತಿದ್ದಾರೆ ಎಂದರು. ಇದನ್ನೂ ಓದಿ: ನಾಲ್ಕನೇ ಅಲೆ ಬಂದಿಲ್ಲ, ಪ್ರಕರಣ ಹೆಚ್ಚಳದಿಂದ ಮುನ್ನೆಚ್ಚರಿಕೆ ಅಗತ್ಯ: ಸುಧಾಕರ್
ಬಿಜೆಪಿ ಮೂರು ವರ್ಷದ ಸಾಧನೆ ಬಗ್ಗೆ ಶ್ವೇತ ಪತ್ರ ಹೊರಡಿಸಲಿ. ಎಷ್ಟು ಅನುದಾನ ಖರ್ಚು ಮಾಡಿದ್ದೀರಿ, ಎಷ್ಟು ಹುದ್ದೆ ತುಂಬಿದ್ದೀರಿ, ಎಷ್ಟು ಉದ್ಯಮ ರಾಜ್ಯಕ್ಕೆ ಬಂದವು. ರಾಜ್ಯ ಎಷ್ಟರ ಮಟ್ಟಿಗೆ ಅಭಿವೃದ್ಧಿಯಾಗಿದೆ ಎನ್ನುವ ವಿಚಾರವೇ ಇಲ್ಲ. ಭ್ರಷ್ಟಾಚಾರ, ಜಾತಿ, ಧರ್ಮ ಒಡೆಯುವ ಕೆಲಸ ಮಾತ್ರ ಸರ್ಕಾರ ಮಾಡುತ್ತಿದೆ. ಭ್ರಷ್ಟ ಸರ್ಕಾರವನ್ನ ಕಿತ್ತುಹೊಗೆಯಬೇಕು ಎಂದು ಆಗ್ರಹಿಸಿದರು.