ಬೆಳಗಾವಿ: ಪಠ್ಯ ಪುಸ್ತಕದ ಪರಿಷ್ಕರಣೆಗೆ ಸಂಬಂಧಿಸಿ ಇತ್ತೀಚೆಗೆ ಭಾರೀ ಚರ್ಚೆಯಾಗುತ್ತಿದೆ. ಈ ಹಿನ್ನೆಲೆ ಕನ್ನಡದ ಹಲವು ಸಾಹಿತಿಗಳು, ಕವಿಗಳು ತಮ್ಮ ವಿಷಯಗಳನ್ನು ಪಠ್ಯದಿಂದ ತೆಗೆದು ಹಾಕುವಂತೆ ಸರ್ಕಾರಕ್ಕೆ ಪತ್ರ ಬರೆಯುತ್ತಿದ್ದಾರೆ. ಈಗ ಬೆಳಗಾವಿ ಕವಿ, ಲೇಖಕ ಹಾಗೂ ಹಿರಿಯ ಪತ್ರಕರ್ತ ಡಾ.ಸರಜೂ ಕಾಟ್ಕರ್ ಅವರು ಶಿಕ್ಷಣ ಸಚಿವ ಬಿ.ಸಿ.ನಾಗೇಶ್ ಅವರಿಗೆ ಪತ್ರ ಬರೆದಿದ್ದಾರೆ.
9ನೇ ತರಗತಿ ಕನ್ನಡ ತೃತೀಯ ಭಾಷಾ ವಿಷಯದ ಪುಸ್ತಕದಲ್ಲಿ ಅಳವಡಿಸಲಾಗಿರುವ ‘ಶಬ್ದಗಳು’ ಕವಿತೆಗೆ ನೀಡಿರುವ ಒಪ್ಪಿಗೆಯನ್ನು ಹಿಂಪಡೆಯುವುದಾಗಿ ಸರಜೂ ಕಾಟ್ಕರ್ ಅವರು ಬಿ.ಸಿ.ನಾಗೇಶ್ ಅವರಿಗೆ ಪತ್ರ ಬರೆಯುವ ಮೂಲಕ ತಿಳಿಸಿದ್ದಾರೆ.
ಪತ್ರದಲ್ಲಿ ಏನಿದೆ?
ಈಗಿನ ಪಠ್ಯ ಪುಸ್ತಕ ಪುನರ್ ರಚನಾ ಸಮಿತಿ ಮತ್ತು ಅದರ ನಿಲುವುಗಳ ಬಗ್ಗೆ ಸಾಕಷ್ಟು ಚರ್ಚೆ ಆಗುತ್ತಿದೆ. ವಿದ್ಯಾರ್ಥಿಗಳಲ್ಲಿ, ಶೈಕ್ಷಣಿಕ ಕ್ಷೇತ್ರದಲ್ಲಿ ಪಾಲಕರಲ್ಲಿ ಹಾಗೂ ಇಡೀ ಜನ ಸಮೂಹದಲ್ಲಿ ಒಂದು ರೀತಿಯ ಗೊಂದಲಕ್ಕೆ ಕಾರಣವಾಗಿದೆ. ಇದನ್ನೂ ಓದಿ: ಪಠ್ಯ ಪುಸ್ತಕದ ಪರಿಷ್ಕರಣೆ- ಅನುಮತಿ ಹಿಂತೆಗೆದುಕೊಂಡ ಮತ್ತಿಬ್ಬರು ಸಾಹಿತಿಗಳು
ಈ ಹಿಂದೆ 9ನೇ ತರಗತಿಯ ಕನ್ನಡ ತೃತೀಯ ಭಾಷೆ ಪಠ್ಯಪುಸ್ತಕದಲ್ಲಿ ನಾನು ರಚಿಸಿದ ‘ಶಬ್ದಗಳು’ ಎಂಬ ಕವಿತೆಯನ್ನು ಅಳವಡಿಸಿಕೊಳ್ಳಲಾಗಿತ್ತು. ನನ್ನ ನಂಬಿಕೆ ಮತ್ತು ಇಷ್ಟು ವರ್ಷಗಳ ಕಾಲದ ಬದ್ಧತೆಯ ಕಾರಣಕ್ಕಾಗಿ ನನ್ನ ಕವಿತೆಗೆ ಈ ಹಿಂದೆ ಕೊಟ್ಟಿರುವ ಒಪ್ಪಿಗೆಯನ್ನು ಹಿಂದೆ ಪಡೆಯುತ್ತಿದ್ದೇನೆ ಎಂದು ಉಲ್ಲೇಖಿಸಿದ್ದಾರೆ.