ಬೆಂಗಳೂರು: ಐಎಎಸ್, ಐಪಿಎಎಸ್ ಹುದ್ದೆಯ ಕನಸು ಕಾಣುತ್ತಿರುವ ಕರ್ನಾಟಕದ ಪ್ರತಿಭಾವಂತ ಬಡ ವಿದ್ಯಾರ್ಥಿಗಳಿಗೆ ಗುಡ್ನ್ಯೂಸ್. ಡಾ.ರಾಜ್ ಕುಮಾರ್ ಹೆಸರಿನಲ್ಲಿ ಸಿವಿಲ್ ಸರ್ವಿಸ್ ಅಕಾಡೆಮಿ ಸ್ಥಾಪಿಸಲು ರಾಜ್ ಕುಟುಂಬ ಮುಂದಾಗಿದೆ.
ಪ್ರೆಸ್ ಕ್ಲಬ್ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ರಾಘವೇಂದ್ರ ರಾಜ್ಕುಮಾರ್, ದೇಶ ನಮ್ಮ ಕುಟುಂಬಕ್ಕೆ ಎಲ್ಲವನ್ನು ನೀಡಿದೆ. ಅದ್ದರಿಂದ ಈಗ ನಾವು ದೇಶಕ್ಕೆ ಸೇವೆ ಸಲ್ಲಿಸಲು ರಾಜ್ ಹೆಸರಿನಲ್ಲಿ ಸಿವಿಲ್ ಸರ್ವಿಸ್ ಅಕಾಡೆಮಿ ಸ್ಥಾಪಿಸಲು ನಿರ್ಧರಿಸಿದ್ದೇವೆ ಎಂದು ಅವರು ತಿಳಿಸಿದರು.
ಕರ್ನಾಟಕದಿಂದ ಸಿವಿಲ್ ಸರ್ವೀಸ್ ಗೆ ಆಯ್ಕೆಯಾಗುವವರ ಸಂಖ್ಯೆ ತುಂಬಾ ವಿರಳವಾಗಿದೆ. ನಮ್ಮ ವಿದ್ಯಾರ್ಥಿಗಳು ದೂರದ ರಾಜ್ಯಕ್ಕೆ ಹೋಗಿ ತರಬೇತಿ ಪಡೆಯುವ ಸ್ಥಿತಿ ಇರುವ ಕಾರಣ ನಮ್ಮ ರಾಜ್ಯದಲ್ಲೇ ತರಬೇತಿ ನೀಡಲು ಈ ಅಕಾಡೆಮಿ ಸ್ಥಾಪನೆ ಮಾಡುತ್ತಿದ್ದೇವೆ ಎಂದು ಅವರು ಹೇಳಿದರು.
ನಮ್ಮ ಕೇಂದ್ರದಿಂದ ಅಭ್ಯರ್ಥಿಗಳಿಗೆ ಬೇರೆ ಕೇಂದ್ರಗಳಿಗಿಂತ ಶೇ.50ರಿಂದ ಶೇ.60 ರಷ್ಟು ಕಡಿಮೆ ವೆಚ್ಚದಲ್ಲಿ ತರಬೇತಿ ನೀಡಲಾಗುವುದು. ಮಾರ್ಚ್ 5 ರಂದು ಸಿಎಂ ಸಿದ್ದರಾಮಯ್ಯ ನವರು ಅಧಿಕೃತವಾಗಿ ಅಕಾಡೆಮಿಗೆ ಚಾಲನೆ ನೀಡಲಿದ್ದು, ಏಪ್ರಿಲ್ 24ರಿಂದ ತರಗತಿಗಳು ಆರಂಭವಾಗಲಿದೆ. ನುರಿತ ಶಿಕ್ಷಕರಿಂದ ವಿದ್ಯಾರ್ಥಿಗಳಿಗೆ ತರಬೇತಿ ನೀಡಲಾಗುವುದು ಎಂದು ರಾಘವೇಂದ್ರ ರಾಜ್ ಕುಮಾರ್ ಕೇಂದ್ರದ ಬಗ್ಗೆ ಮಾಹಿತಿ ನೀಡಿದರು.