ಮುಂಬೈ: ಶಿವಸೇನೆಯು ಈಗಲೂ ಬಾಳ್ ಠಾಕ್ರೆ ಅವರ ತತ್ವದ ಮೇಲೆ ನಡೆಯುತ್ತಿದೆ. ಇದರಿಂದಾಗಿ ಪಕ್ಷಕ್ಕೆ ಯಾರೂ ಹಿಂದುತ್ವವನ್ನು ಕಲಿಸುವ ಅಗತ್ಯವಿಲ್ಲ ಎಂದು ಸಂಸದ ಸಂಜಯ್ ರಾವತ್ ತಿಳಿಸಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಈಗಲೂ ಬಾಳ್ ಠಾಕ್ರೆ ಅವರ ತತ್ವಗಳ ಮೇಲೆಯೇ ನಡೆಯುತ್ತಿದ್ದೇವೆ. ಬಾಳಾ ಸಾಹೇಬರು ಧ್ವನಿವರ್ಧಕಗಳಲ್ಲಿ ಮತ್ತು ರಸ್ತೆಯಲ್ಲಿ ನಮಾಜ್ ಮಾಡುವ ವಿರುದ್ಧ ನಿಲುವನ್ನು ತೆಗೆದುಕೊಂಡಿದ್ದರು. ಅಧಿಕಾರಕ್ಕೆ ಬಂದ ನಂತರ ಅದನ್ನು ಕಾರ್ಯರೂಪಕ್ಕೆ ತಂದರು. ಯಾರೂ ಶಿವಸೇನೆಗೆ ಹಿಂದುತ್ವವನ್ನು ಕಲಿಸಬಾರದು. ಉದ್ಧವ್ ಠಾಕ್ರೆ ನೇತೃತ್ವದ ಮಹಾ ವಿಕಾಸ್ ಅಘಾಡಿ ಸರ್ಕಾರವು ಕಾನೂನು ಪ್ರಕಾರ ನಡೆಯುತ್ತಿದೆಯೇ ಹೊರತು ಯಾರದ್ದೂ ಅಲ್ಲ ಎಂದರು.
ಮಹಾರಾಷ್ಟ್ರದಲ್ಲಿ ಠಾಕ್ರೆ ಸರ್ಕಾರವಿದೆ. ರಾಜ್ಯದಲ್ಲಿ ಮಹಾವಿಕಾಸ್ ಅಘಾಡಿ ಸರ್ಕಾರವಿದ್ದರೂ ಅದನ್ನು ಉದ್ಧವ್ ಠಾಕ್ರೆ ನೇತೃತ್ವ ವಹಿಸಿದ್ದಾರೆ. ಅವರು ಬಾಳ್ ಠಾಕ್ರೆ ಅವರ ಪುತ್ರರಾಗಿದ್ದಾರೆ. ಆದ್ದರಿಂದ, ಅವರು ನಮಾಜ್ ಸಮಯದಲ್ಲಿ ರಸ್ತೆಗಳಲ್ಲಿ ಪ್ರಾರ್ಥನೆ ಮತ್ತು ಮಸೀದಿಗಳಲ್ಲಿ ಅಕ್ರಮ ಧ್ವನಿವರ್ಧಕಗಳ ಬಗ್ಗೆ ಸಲಹೆಯನ್ನು ತೆಗೆದುಕೊಳ್ಳಬೇಕಾಗಿಲ್ಲ ಎಂದು ಹೇಳಿದರು.
ಸುಳ್ಳು ಹಿಂದುತ್ವದ ಮುಖವನ್ನು ಇಟ್ಟುಕೊಂಡು ಶಿವಸೇನೆ ವಿರುದ್ಧ ಪಿತೂರಿ ಮಾಡುವವರನ್ನು ಜನರು ಗುರುತಿಸುವುದಿಲ್ಲ ಎಂದು ಬಿಜೆಪಿ ಹಾಗೂ ಎಂಎನ್ಎಸ್ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಪಿಎಸ್ಐ ಅಕ್ರಮ – ಮಾಜಿ ಸಿಎಂ ಪುತ್ರನ ವಿರುದ್ಧ ದೂರು
ಮಹಾರಾಷ್ಟ್ರದಲ್ಲಿ ಯಾವುದೇ ಧ್ವನಿವರ್ಧಕಗಳು ನಿಯಮವನ್ನು ಉಲ್ಲಂಘಿಸಿಲ್ಲ. ಸುಪ್ರೀಂ ಕೋರ್ಟ್ ನೀಡಿರುವ ಮಾರ್ಗಸೂಚಿಗಳ ಪ್ರಕಾರ ರಾಜ್ಯ ಸರ್ಕಾರವು ಕಾರ್ಯ ನಿರ್ವಹಿಸುತ್ತಿದೆ. ಎಲ್ಲಾ ಮಸೀದಿಗಳು ಧ್ವನಿವರ್ಧಕಗಳನ್ನು ಬಳಸಲು ಅನುಮತಿ ತೆಗೆದುಕೊಂಡಿದೆ. ಹಾಗಾದರೂ ಯಾರಾದರೂ ಕಾನೂನನ್ನು ಉಲ್ಲಂಘಿಸಿದರೆ ಅದನ್ನು ಸರ್ಕಾರ ನಿಭಾಯಿಸಲು ಸಮರ್ಥವಾಗಿದೆ ಎಂದು ತಿಳಿಸಿದರು.
ಎಂಎನ್ಎಸ್ ಮುಖ್ಯಸ್ಥ ರಾಜ್ ಠಾಕ್ರೆ ಅವರು ಶಿವಸೇನಾ ಮುಖ್ಯಸ್ಥ ಬಾಳ್ ಠಾಕ್ರೆ ಅವರ ಹಳೆಯ ವೀಡಿಯೋವನ್ನು ಟ್ವೀಟ್ ಮಾಡಿದ್ದರು. ಅದರಲ್ಲಿ ಬಾಳ್ ಠಾಕ್ರೆ ನಮ್ಮ ಪಕ್ಷವು ಅಧಿಕಾರಕ್ಕೆ ಬಂದ ದಿನ ರಸೆತಗಳಲ್ಲಿ ನಮಾಜ್ ಮಾಡುವುದನ್ನು ನಿಲ್ಲಿಸಲಾಗುವುದು ಹಾಗೂ ಮಸೀದಿಗಳಲ್ಲಿರುವ ಧ್ವನಿವರ್ಧಕಗಳನ್ನು ತೆಗೆದುಹಾಕಲಾಗುವುದು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಸಂಜಯ್ ರಾವತ್ ಪ್ರತಿಕ್ರಿಯೆ ನೀಡಿದ್ದಾರೆ. ಇದನ್ನೂ ಓದಿ: ಭ್ರಷ್ಟ, ಸುಲಿಗೆ ಸರ್ಕಾರಕ್ಕೆ ಜನ ಛೀ, ಥೂ ಅಂತ ಉಗಿಯುತ್ತಿದ್ದಾರೆ: ಸಿದ್ದರಾಮಯ್ಯ