– ಬೆಳಗಾವಿ ಬ್ರದರ್ಸ್ ದೊಡ್ಡವರು, ಪ್ರೀತಿ ಜಾಸ್ತಿ ಇರುತ್ತೆ
– ಸತೀಶ್ ಜಾರಕಿಹೋಳಿ ಅವರು ದೊಡ್ಡವರು, ಸಾಹುಕಾರರು
ಬೆಂಗಳೂರು: ಲೋಕಸಭಾ ಚುನಾವಣೆಯ ಮತದಾನದ ಬೆನ್ನಲ್ಲೇ ರಾಜ್ಯದಲ್ಲಿ ಉಪಚುನಾವಣೆ ಕಾವು ಹೆಚ್ಚಾಗಿದ್ದು, ಇತ್ತ ಕಾಂಗ್ರೆಸ್ ಪಕ್ಷದಲ್ಲಿ ನಾಯಕರ ನಡುವಿನ ವೈಮನಸ್ಸು ಹೊರ ಬಹಿರಂಗವಾಗುತ್ತಿದೆ. ಇಂದು ಸಚಿವ ಡಿಕೆ ಶಿವಕುಮಾರ್ ಅವರು ಸಚಿವ ಸತೀಶ್ ಜಾರಕಿಹೊಳಿ ಅವರ ಚುನಾವಣಾ ಕುರಿತ ಆಕ್ಷೇಪಕ್ಕೆ ವ್ಯಂಗ್ಯವಾಡಿ ಟಾಂಗ್ ಕೊಟ್ಟಿದ್ದಾರೆ.
ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಇಂದು ನಾನು ಉಪಚುನಾವಣೆ ಜವಾಬ್ದಾರಿ ಹಿನ್ನೆಲೆಯಲ್ಲಿ ಕುಂದಗೋಳಕ್ಕೆ ತೆರಳಬೇಕಿತ್ತು. ಆದರೆ ಐಟಿ ಪ್ರಕರಣದ ಸಂಬಂಧ ವಿಚಾರಣೆ ಇರುವುದರಿಂದ ನ್ಯಾಯಾಲಯಕ್ಕೆ ಹಾಜರಾಗಿದ್ದು, ನಾಳೆಯೂ ನ್ಯಾಯಾಲಯಕ್ಕೆ ಹೋಗಬೇಕು ಎಂದು ವಿವರಿಸಿದರು.
ಇದೇ ವೇಳೆ ಶಿವಮೊಗ್ಗದಲ್ಲಿ ಮಧು ಬಂಗಾರಪ್ಪ ಅವರೇ ಗೆಲುವು ಪಡೆಯುತ್ತಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಮಂಡ್ಯ ಸೇರಿದಂತೆ ಹಲವು ಕ್ಷೇತ್ರಗಳ ಚುನಾವಣಾ ಸಮೀಕ್ಷೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ಇಂತಹ ಸಮಿಕ್ಷೆಗಳನ್ನು ನೋಡಿ ನೋಡಿ ನನ್ನ ಕೂದಲು ಬೆಳ್ಳಗಾಗಿದೆ ಎಂದು ವ್ಯಂಗ್ಯವಾಡಿದರು.
ಉತ್ತರ ಕರ್ನಾಟಕದತ್ತ ಡಿಕೆಶಿ: ಮೈಸೂರು ಪ್ರಾಂತ್ಯದ ರಾಜಕೀಯದಿಂದ ಡಿಕೆ ಶಿವಕುಮಾರ್ ಉತ್ತರ ಕರ್ನಾಟಕಕ್ಕೆ ಹೆಚ್ಚು ಪ್ರಾಮುಖ್ಯತೆ ನೀಡುತ್ತಿದ್ದಾರೆ ಎಂಬ ಅನುಮಾನ ಮಾಡಿದೆ. ಇತ್ತ ಕುಂದಗೋಳ ಕ್ಷೇತ್ರದ ಉಸ್ತುವಾರಿಯನ್ನಾಗಿ ಹೈಕಮಾಂಡ್ ಡಿಕೆಶಿ ಅವರನ್ನು ನೇಮಕ ಮಾಡಿರುವುದಕ್ಕೆ ಸತೀಶ್ ಜಾರಕಿಹೊಳಿ ಸೇರಿದಂತೆ, ಆ ಭಾಗದ ಹಲವು ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕುರಿತಂತೆ ಪ್ರತಿಕ್ರಿಯೆ ನೀಡಿದ ಡಿಕೆಶಿವಕುಮಾರ್ ಅವರು, ಸತೀಶ್ ಜಾರಕಿಹೋಳಿ ಅವರು ದೊಡ್ಡವರು, ಸಾಹುಕಾರ್ ಇದ್ದಾರೆ. ನಾಯಕರು ಯಾರೇ ಆಗಲಿ ಇನ್ನೊಬ್ಬರ ಬಗ್ಗೆ ಜಾಸ್ತಿ ಏಕೆ ಮಾತನಾಡುತ್ತಾರೆ ಅಂದರೆ, ಅವರಿಗೆ ನಮ್ಮ ಮೇಲೆ ಜಾಸ್ತಿ ಪ್ರೀತಿ ಇರುತ್ತದೆ. ಆದ್ದರಿಂದಲೇ ಅವರು ನನ್ನನ್ನು ನೆನೆಸಿಕೊಳ್ಳುತ್ತಾರೆ. ಅಲ್ಲದೇ ಅವರು ನಾಯಕರು ನಾವು ಸಾಮಾನ್ಯ ಪ್ರಜೆಗಳು. ಪಕ್ಷ ನೀಡಿದ ಜವಾಬ್ದಾರಿಯನ್ನಷ್ಟೇ ನಾನು ನಿರ್ವಹಿಸುತ್ತಿದ್ದೇನೆ ಎಂದರು. ಇದೇ ಸಮಯದಲ್ಲಿ ರಮೇಶ್ ಜಾರಕಿಹೊಳಿ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ರಮೇಶ್ ಜಾರಕಿಹೋಳಿ ಬೆಂಗಳೂರಿನಲ್ಲಿ ಇದ್ದಾರಾ? ಇದ್ದರೆ ಅವರೊಂದಿಗೆ ಮಾತನಾಡುತ್ತೇನೆ. ಬೆಂಗಳೂರಲ್ಲೇ ಇದ್ದರೆ ಕಾಲ್ ಮಾಡಿ ಮಾತನಾಡುತ್ತೇನೆ ಎಂದು ವ್ಯಂಗ್ಯವಾಗಿ ನಕ್ಕು ಸುಮ್ಮನಾದರು.
ಸಚಿವ ಶಿವಳ್ಳಿ ಅವರು ನಾನು ಉತ್ತಮ ಸ್ನೇಹಿತರು. ಅವರನ್ನು ಸೋನಿಯಾ ಗಾಂಧಿ ಅವರ ಬಳಿ ಕರೆದುಕೊಂಡು ಹೋಗಿ ಪಕ್ಷಕ್ಕೆ ಸೇರ್ಪಡೆ ಮಾಡಿದ್ದು ನಾನು. ಪಕ್ಷ ನೀಡಿದ ಜವಾಬ್ದಾರಿಯನ್ನು ನಿರ್ವಹಿಸಲು ನನ್ನ ಕುಟುಂಬಕ್ಕೆ ನಾನು ಅನ್ಯಾಯ ಮಾಡುತ್ತಿದ್ದೇನೆ. ಕುಟುಂಬದೊಂದಿಗೆ ಪ್ರವಾಸ ಮಾಡುವ ನಿರ್ಧಾರ ಮಾಡಿದ್ದೆ. ಆದರೆ ಪಕ್ಷ ಹೆಚ್ಚಿನ ಜವಾಬ್ದಾರಿ ನೀಡಿದ ಪರಿಣಾಮ ನಾನು ಕಾರ್ಯನಿರ್ವಹಿಸುತ್ತಿದ್ದೇನೆ. ನನಗೆ ಯಾರು ವಿರೋಧಿಗಳು ಇಲ್ಲ, ಎಲ್ಲರೂ ನನ್ನ ಸ್ನೇಹಿತರೇ ಎಂದರು.