ಮಂಡ್ಯ: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಹೆಚ್.ಪಿ ಸ್ವರೂಪ್ (HP Swaroop) ಹಾಸನ ಕ್ಷೇತ್ರದಲ್ಲಿ ಭರ್ಜರಿ ಜಯ ಸಾಧಿಸಿದ ಬಳಿಕ ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿರುವ ಕಾಲಭೈರವೇಶ್ವರನ ಸನ್ನಿಧಿಗೆ ಬಂದು ದರ್ಶನ ಪಡೆದಿದ್ದಾರೆ. ನಂತರ ನಿರ್ಮಲಾನಂದನಾಥ ಶ್ರೀಗಳ (Nirmalanandanatha Swamiji) ಆಶೀರ್ವಾದ ಪಡೆದಿದ್ದಾರೆ.
ಆದಿಚುಂಚನಗಿರಿಗೆ ಬಂದ ಸ್ವರೂಪ್ ಮೊದಲು ಕಾಲಭೈರವೇಶ್ವರನ ದರ್ಶನ ಪಡೆದು ಬಳಿಕ ನಿರ್ಮಲಾನಂದನಾಥ ಶ್ರೀಗಳ ಆಶೀರ್ವಾದ ಪಡೆದ್ದಾರೆ. ತೀವ್ರ ಕೂತುಹಲ ಕೆರಳಿಸಿದ್ದ ಹಾಸನ ಕ್ಷೇತ್ರದಲ್ಲಿ ಸ್ವರೂಪ್ ಜಯಭೇರಿ ಬಾರಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಒಕ್ಕಲಿಗರ ಆರಾಧ್ಯ ದೈವವಾಗಿರುವ ಕಾಲಭೈರವೇಶ್ವರಸ್ವಾಮಿಗೆ ಸ್ವರೂಪ್ ನಮಸ್ಕರಿಸಿದರು. ಇದನ್ನೂ ಓದಿ: ಹಾಸನದಲ್ಲಿ ಗೆಲುವು ಸಾಧಿಸಿದ ಸ್ವರೂಪ್ – ಕರೆ ಮಾಡಿ ಶುಭಾಶಯ ತಿಳಿಸಿದ ಹೆಚ್ಡಿಡಿ
ಬಳಿಕ ಮಾತನಾಡಿದ ಸ್ವರೂಪ್, ನಿಖಿಲ್ (Nikhil Kumaraswamy) ಅವರ ಸೋಲು ನನಗೆ ವೈಯಕ್ತಿಕವಾಗಿ ಬೇಸರವಾಗಿದೆ. ಅವರು ಸೋಲಬಾರದಿತ್ತು, ರಾಮನಗರದ ಬಗ್ಗೆ ನನಗೆ ಗೊತ್ತಿಲ್ಲ ಹೀಗಾಗಿ ನಿಖಿಲ್ ಅವರು ಏಕೆ ಸೋತರು ಅನ್ನೋದು ಅರ್ಥವಾಗುತ್ತಿಲ್ಲ. ನಾನು ಹಾಗೂ ನನ್ನ ಹಾಸನದ ಜನತೆ ನಿಖಿಲ್ ಅವರ ಜೊತೆಗೆ ಇರುತ್ತೇವೆ. ನಮ್ಮ ಪಕ್ಷದ ನಾಯಕರ ಶ್ರಮದಿಂದ ನಾನು ಗೆಲುವು ಸಾಧಿಸಿದ್ದೇನೆ. ಹಾಸನದ ಎಲ್ಲ ಕಾರ್ಯಕರ್ತರು ಶ್ರಮಿಸಿದ್ದಾರೆ ಎಲ್ಲರಿಗೂ ನಾನು ಧನ್ಯವಾದ ಹೇಳುತ್ತೇನೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಹಾಸನದಲ್ಲಿ ಪ್ರೀತಂ ಗೌಡಗೆ ಸೋಲು – ಜಿಲ್ಲೆಯಲ್ಲಿ 2 ಸ್ಥಾನ ಗೆದ್ದ ಬಿಜೆಪಿ
ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲವಿಲ್ಲ, ಭವಾನಿ ಅಕ್ಕ ನನ್ನನ್ನ 3ನೇ ಮಗ ಅಂದಿದ್ದಾರೆ. ಕುಮಾರಣ್ಣ, ರೇವಣ್ಣ ಎಲ್ಲರೂ ನನಗೆ ಸಹಕಾರ ನೀಡಿದ್ದಾರೆ. ಮುಂದೆ ಅವರ ಸಹಕಾರದಿಂದ ಉತ್ತಮ ಕೆಲಸ ಮಾಡುತ್ತೇನೆ. ನಾವು ಯಾರೊಂದಿಗೂ ಒಪ್ಪಂದ ಮಾಡಿಕೊಂಡಿರಲಿಲ್ಲ. ಜೆಡಿಎಸ್ ಮತ ಜೆಡಿಎಸ್ಗೆ ಬಂದಿದೆ ಸೋಲಿನ ವಿಶ್ಲೇಷಣೆ ಮಾಡುವವರು ಒಪ್ಪಂದ ಹೇಳ್ತಾರೆ ಅಷ್ಟೇ ಎಂದು ಸ್ವರೂಪ್ ಎದುರಾಳಿಗಳಿಗೆ ತಿರುಗೇಟು ಕೊಟ್ಟಿದ್ದಾರೆ.