ವಿಜಯಪುರ: ಯೋಗ ದಿನದಂದೂ ವಿಜಯಪುರ ಬಿಜೆಪಿಯಲ್ಲಿ ಭಿನ್ನಮತ ಸ್ಫೋಟವಾಗಿದೆ. ಐತಿಹಾಸಿಕ ಗೋಲಗುಮ್ಮಟದಲ್ಲಿ ನಡೆದ ಅಂತಾರಾಷ್ಟ್ರೀಯ ಯೋಗ ದಿನಾಚರಣೆಗೆ ಮಾಜಿ ಕೇಂದ್ರ ಸಚಿವ, ಸಂಸದ ರಮೇಶ್ ಜಿಗಜಿಣಗಿ ಗೈರಾಗಿದ್ದರು.
ಹಾಲಿ ಕೇಂದ್ರ ಸಚಿವರು ಬಂದಿದ್ದರೂ ಯೋಗ ದಿನಾಚರಣೆಯಿಂದ ರಮೇಶ್ ಜಿಗಜಿಣಗಿ ಹಾಗೂ ಟೀಮ್ ಗೈರಾಗಿತ್ತು. ಶಾಸಕ ಯತ್ನಾಳ್ ಹಾಗೂ ಸಂಸದ ರಮೇಶ್ ಜಿಗಜಿಣಗಿ ಮಧ್ಯೆ ಇರುವ ಭಿನ್ನಮತ ಹಿನ್ನೆಲೆ ಸರ್ಕಾರದಿಂದ ಆಯೋಜಿಸಿದ್ದ ಯೋಗ ದಿನಾಚರಣೆಗೆ ಸಂಸದ ರಮೇಶ್ ಜಿಗಜಿಣಗಿ ಗೈರಾಗಿದ್ದಾರೆ ಎಂಬ ಚರ್ಚೆ ಜಿಲ್ಲೆಯಲ್ಲಿ ನಡೆಯುತ್ತಿದೆ. ಇದನ್ನೂ ಓದಿ: ಮುಂಬೈನಲ್ಲಿ ಮಠದ ಶಿಷ್ಯರೊಂದಿಗೆ ಯೋಗ ಮಾಡಿದ ಪೇಜಾವರ ಶ್ರೀ
ಸರ್ಕಾರಿ ಯೋಗ ದಿನಾಚರಣೆಗೆ ಗೈರಾದ ಸಂಸದ ರಮೇಶ್ ಜಿಗಜಿಣಗಿ ನಗರದ ಗಗನ ಮಹಲ್ ಆವರಣದಲ್ಲಿ ಬಿಜೆಪಿಯಿಂದ ಪ್ರತ್ಯೇಕ ಯೋಗ ದಿನಾಚರಣೆ ಆಚರಿಸಿದರು. ಯತ್ನಾಳ್ ವಿರೋಧಿ ಬಣದಿಂದ ಪ್ರತ್ಯೇಕ ಯೋಗ ದಿನಾಚರಣೆ ಆಯೋಜನೆ ಮಾಡಲಾಗಿತ್ತು. ಇದನ್ನೂ ಓದಿ: ಎಲ್ಲ ಮದರಸಾಗಳಲ್ಲಿ ಯೋಗ ದಿನ ಆಚರಿಸಬೇಕು: ಯುಪಿ ಸರ್ಕಾರ ಆದೇಶ
ಕೇಂದ್ರ ಸಚಿವ ಭಗವಂತ ಖೂಬಾ, ಸಚಿವ ಉಮೇಶ್ ಕತ್ತಿ, ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಭಾಗಿಯಾದ ಯೋಗ ದಿನಾಚರಣೆಯಿಂದ ರಮೇಶ್ ಜಿಗಜಿಣಗಿ ದೂರ ಉಳಿದಿದ್ದು, ಇದೀಗ ಚರ್ಚೆಗೆ ಗ್ರಾಸವಾಗಿದೆ. ಬಿಜೆಪಿಯಿಂದ ಆಯೋಜಿಸಿದ್ದ ಯೋಗ ಕಾರ್ಯಕ್ರಮದಲ್ಲಿ ಸಂಸದ ರಮೇಶ್ ಜಿಗಜಿಣಗಿಗೆ ಮಾಜಿ ಸಚಿವ ಅಪ್ಪಾಸಾಹೇಬ ಪಟ್ಟಣಶೆಟ್ಟಿ, ಅರುಣ್ ಶಹಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಎಸ್ಆರ್ ಪಾಟೀಲ್ ಕೂಚಬಾಳ ಸಾಥ್ ನೀಡಿದ್ದಾರೆ.