ಬೆಂಗಳೂರು: ಹೊಸಕೋಟೆ ವಿಧಾನಸಭಾ ಕ್ಷೇತ್ರದ ಅನರ್ಹ ಶಾಸಕ ಎಂಟಿಬಿ ನಾಗರಾಜ್ ಮತದಾರರಿಗೆ ದಸರಾ ಗಿಫ್ಟ್ ನೀಡಿದ್ದಾರೆ.
ಇಂದು ತಮ್ಮ ಹುಟ್ಟುಹಬ್ಬ ಆಚರಣೆ ಹೆಸರಿನಲ್ಲಿ ಹೊಸಕೋಟೆ ತಾಲೂಕಿನ ತಾವರೆಕರೆ ಮತ್ತು ಶಿವನಾಪುರದಲ್ಲಿ ಗ್ರಾಮದಲ್ಲಿ ಸೀರೆ, ಕಂಬಳಿ ವಿತರಣೆ ಮಾಡಿದ್ದಾರೆ. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರಿಗೂ ಬಾಡೂಟದ ವ್ಯವಸ್ಥೆಯನ್ನು ಮಾಡಿದ್ದರು. ಇನ್ನು ಉಚಿತವಾಗಿ ಸಿಗುತ್ತಿದ್ದ ಕಂಬಳಿ ಮತ್ತು ಸೀರೆ ಪಡೆಯಲು ಜನರು ಮುಗಿಬಿದ್ದಿದ್ದರು. ಉಪ ಚುನಾವಣೆ ಸಮೀಪದ ಬೆನ್ನಲ್ಲೇ ಭರ್ಜರಿ ಉಡುಗೊರೆಗಳನ್ನು ನೀಡುವ ಮೂಲಕ ಮತದಾರರನ್ನು ಅನರ್ಹ ಶಾಸಕರು ಸೆಳೆಯುವ ಪ್ರಯತ್ನದಲ್ಲಿದ್ದಾರೆ.
ಈ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಎಂಟಿಬಿ ನಾಗರಾಜ್, ನಾನು ಕ್ಷೇತ್ರದ ಮತದಾರರಿಗೆ ಯಾವುದೇ ಅಸೆ ಆಮಿಷಗಳನ್ನು ನೀಡಿಲ್ಲ. ಕ್ಷೇತ್ರದ ಜನರಿಗೆ ಎಂಟಿಬಿ ನಾಗರಾಜ್ ಅಂದ್ರೆ ಏನು ಅಂತಾ ಗೊತ್ತಿದೆ. ಇಂದು ಅವರೇ ಒಟ್ಟಾಗಿ ಸೇರಿ ಹುಟ್ಟುಹಬ್ಬ ಆಚರಿಸಿದರು. ನನ್ನ ಅಭಿವೃದ್ಧಿ ಕೆಲಸಗಳನ್ನು ಜನರು ನೋಡಿದ್ದಾರೆ ಎಂದು ತಿಳಿಸಿದರು.
ಅನರ್ಹ ಶಾಸಕರು ಉಪ ಚುನಾವಣೆಗೆ ಸಿದ್ಧತೆ ನಡೆಸಿಕೊಂಡಿದ್ದು, ಕ್ಷೇತ್ರದಲ್ಲಿ ಸಾಲು ಸಾಲು ಕಾರ್ಯಕ್ರಮದಲ್ಲಿ ತೊಡಗಿಕೊಳ್ಳುತ್ತಿದ್ದಾರೆ. ಈ ಹಿಂದೆ ಚಿಕ್ಕಬಳ್ಳಾಪುರರ ಅನರ್ಹ ಶಾಸಕ ಕೆ.ಸುಧಾಕರ್ ಸಹ ಇದೇ ರೀತಿ ಉಡುಗೊರೆಗಳನ್ನು ನೀಡಿದ್ದರು.