ಬಾಲಿವುಡ್ ಖ್ಯಾತ ನಿರ್ದೇಶಕ ಅನುರಾಗ್ ಕಶ್ಯಪ್ ಸುಮ್ಮನೆ ಇರುವಂತಹ ಜಾಯಮಾನದವರೇ ಅಲ್ಲ. ಬಹುಶಃ ಅವರಿಗೆ ವಿವಾದ ಮಾಡಿಕೊಳ್ಳದೇ ಇದ್ದರೆ ನಿದ್ದೆಯೇ ಬರುವುದಿಲ್ಲ ಅನಿಸುತ್ತದೆ. ಹಾಗಾಗಿ, ಆಗಾಗ್ಗೆ ವಿವಾದಿತ ಮಾತುಗಳನ್ನು ಆಡುತ್ತಲೇ ಇರುತ್ತಾರೆ. ಇದೀಗ ತಾಪ್ಸಿ ಪನ್ನು ಮುಖ್ಯ ಭೂಮಿಕೆಯ ದೋಬಾರಾ ಸಿನಿಮಾಗೆ ಇವರು ನಿರ್ದೇಶನ ಮಾಡಿದ್ದು, ಸದ್ಯ ಅದು ಬಿಡುಗಡೆ ಕೂಡ ಆಗಲಿದೆ.
ದೋಬಾರಾ ಸಿನಿಮಾವನ್ನು ಜನರಿಗೆ ತಲುಪಿಸಲೇಬೇಕು ಎಂದು ಹಠ ತೊಟ್ಟಿರುವ ಅನುರಾಗ್ ಕಶ್ಯಪ್ ಮತ್ತು ತಾಪ್ಸಿ ಪನ್ನು, ಕಾಲಿಗೆ ಚಕ್ರಕಟ್ಟಿಕೊಂಡು ಪ್ರಚಾರ ಮಾಡುತ್ತಿದ್ದಾರೆ. ಹಲವಾರು ಊರುಗಳಿಗೆ ಮತ್ತು ಮಾಧ್ಯಮಗಳ ಮುಂದೆ ಬಂದು ಸಿನಿಮಾ ಬಗ್ಗೆ ಪ್ರಚಾರ ಮಾಡುತ್ತಿದ್ದಾರೆ. ಮಾಧ್ಯಮವೊಂದರಲ್ಲಿ ಪ್ರಚಾರಾರ್ಥವಾಗಿ ನಡೆದ ಸಂದರ್ಶನದಲ್ಲಿ ಕಶ್ಯಪ್ ಎಡವಟ್ಟು ಮಾಡಿಕೊಂಡಿದ್ದಾರೆ. ಇದನ್ನೂ ಓದಿ:`ಅರ್ಜುನ್ ರೆಡ್ಡಿ’ ಚಿತ್ರದ ನಂತರ ಕರಣ್ ಜೋಹರ್ ಚಿತ್ರವನ್ನು ವಿಜಯ್ ತಿರಸ್ಕರಿಸಿದ್ದೇಕೆ?
ಸಂದರ್ಶಕರು ರಣವೀರ್ ಸಿಂಗ್ ಬೆತ್ತೆಲೆ ಫೋಟೋ ಬಗ್ಗೆ ಪ್ರಶ್ನೆ ಮಾಡಿದಾಗ, ಅದರ ಪರವಾಗಿ ಕಶ್ಯಪ್ ಮಾತನಾಡುತ್ತಾರೆ. ಅದರಲ್ಲಿ ತಪ್ಪೇನೂ ಇಲ್ಲವೆಂದು ಹೇಳುತ್ತಾರೆ. ಆದರೆ, ಅದನ್ನು ಪನ್ನು ಒಪ್ಪಿಕೊಳ್ಳುವುದಿಲ್ಲ. ಆಗ ಕಶ್ಯಪ್, ‘ ಈ ತಾಪ್ಸಿಗೆ ಹುಡುಗರನ್ನು ಕಂಡರೆ ಹೊಟ್ಟೆ ಉರಿ, ಈಕೆಯ ಸ್ತನಗಳಿಗಿಂತ ನನ್ನವು ದೊಡ್ಡದಿವೆ’ ಎಂದು ಕಾಮೆಂಟ್ ಮಾಡುತ್ತಾರೆ. ಈ ಮಾತನ್ನು ಕೇಳಿ ತಾಪ್ಸಿ ಶಾಕ್ ಆಗುತ್ತಾರೆ.
ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಕಶ್ಯಪ್ ಅವರು ಆಡಿದ ಮಾತಿಗೆ ನಾನಾ ರೀತಿಯಲ್ಲಿ ಅಭಿಮಾನಿಗಳು ಕಾಮೆಂಟ್ ಮಾಡುತ್ತಿದ್ದಾರೆ. ಕೆಲವರು ಸರಿಯಾಗಿಯೇ ಹೇಳಿದ್ದೀಯಾ ಅಂದರೆ, ಇನ್ನೂ ಕೆಲವರು ಕಶ್ಯಪ್ ಮಾತಿಗೆ ಉಗಿದಿದ್ದಾರೆ. ಇನ್ನೂ ಕೆಲವರಂತೂ ಇದೊಂದು ಸಿನಿಮಾ ಪ್ರಚಾರದ ಗಿಮಿಕ್ ಎಂದು ಆಡಿಕೊಳ್ಳುತ್ತಿದ್ದಾರೆ.