ಗದಗ: ಲಿಂಗೈಕ್ಯ ತೋಂಟದಾರ್ಯ ಸಿದ್ಧಲಿಂಗ ಶ್ರೀಗಳ ಜನ್ಮ ದಿನವನ್ನು ಭಾವೈಕ್ಯತಾ ದಿನ ಎಂದು ಘೋಷಿಸಿದ ಸಿಎಂ ಕ್ರಮವನ್ನು ದಿಂಗಾಲೇಶ್ವರ ಸ್ವಾಮೀಜಿ ತೀವ್ರವಾಗಿ ವಿರೋಧಿಸಿದ್ದಾರೆ.
ಆರ್ಎಸ್ಎಸ್ ಬಗ್ಗೆ, ಬ್ರಾಹ್ಮಣರ ಬಗ್ಗೆ ಬಾಯಿಗೆ ಬಂದಂತೆ ತೋಂಟದಾರ್ಯ ಶ್ರೀಗಳು ಮಾತನಾಡುತ್ತಿದ್ರು. ಜಾತಿ ಜಾತಿ ನಡ್ವೆ ತಂದಿಡ್ತಾ ಇದ್ರು. ಅಂಥವರ ಹೆಸರಲ್ಲಿ ಭಾವೈಕ್ಯ ದಿನ ಎಂದು ಘೋಷಿಸಿದ್ದು ತಪ್ಪು. ಸಿಎಂ ತಮ್ಮ ಹೇಳಿಕೆ ಹಿಂಪಡೆಯಬೇಕು ಎಂದು ದಿಂಗಾಲೇಶ್ವರ ಸ್ವಾಮೀಜಿ ಒತ್ತಾಯ ಮಾಡಿದ್ದಾರೆ. ಇದಕ್ಕೆ ಸಚಿವ ಸಿಸಿ ಪಾಟೀಲ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇಂತಹ ಆರೋಪ ಮಾಡೋದು ಸರಿಯಲ್ಲ. ದಿಂಗಾಲೇಶ್ವರರ ಮಠಕ್ಕೆ ಅನುದಾನ ಕೊಟ್ಟಿಲ್ಲ ಅಂತಾ ಹೀಗೆಲ್ಲಾ ಮಾತಾಡ್ತಾ ಇದ್ದಾರೆ. ನಿಮ್ಮ ಪೂರ್ವಾಶ್ರಮದ ಕತೆ ನಮಗೂ ಗೊತ್ತು. ಮೂರುಸಾವಿರ ಮಠದ ಗದ್ದುಗೆಯನ್ನು ತೋಳ್ಬಲದ ಮೂಲಕ ಏರಲು ನೋಡಿದ್ರಿ.. ನೀವು ಪೀಠದಲ್ಲಿದ್ದೀರಿ ಎಂಬ ಕಾರಣಕ್ಕೆ ಸ್ವಾಮೀಜಿ ಎಂದು ಒಪ್ಪಿದ್ದೀವಿ ಅಷ್ಟೇ ಎಂದು ಸಿಸಿ ಪಾಟೀಲ್ ವಾಗ್ದಾಳಿ ನಡೆಸಿದ್ದಾರೆ. ಇದಕ್ಕೆ ದಿಂಗಾಲೇಶ್ವರ ಶ್ರೀಗಳು ತಿರುಗೇಟು ನೀಡಿದ್ದಾರೆ. ವ್ಯಕ್ತಿ ವಿಚಾರಗಳ ಚರ್ಚೆಗೆ ವೇದಿಕೆ ನಿರ್ಮಾಣವಾಗಲಿ ಎಂದು ಸವಾಲ್ ಹಾಕಿದ್ದಾರೆ.
ಸ್ವಾಮೀಜಿ ಆರೋಪಕ್ಕೆ ಬಿಜೆಪಿ ಗರಂ: ಮಠಗಳ ಅನುದಾನಕ್ಕೂ 30 ಪರ್ಸೆಂಟ್ ಕಮೀಷನ್ ಕೊಡ್ಬೇಕಿದೆ ಎಂಬ ದಿಂಗಾಲೇಶ್ವರ ಸ್ವಾಮೀಜಿ ಆರೋಪ ಬಗ್ಗೆ ಪರ ವಿರೋಧದ ಮಾತುಗಳು ಕೇಳಿಬರುತ್ತಿವೆ. ಬೊಮ್ಮಾಯಿ ಸರ್ಕಾರದಲ್ಲಿ ಮಠಗಳಿಂದ 30% ಕಮೀಷನ್ ಪಡೆಯೋದು ಸರ್ವೇ ಸಾಮಾನ್ಯ ಆಗಿದೆ. ಕರ್ನಾಟಕ ಭ್ರಷ್ಟಾಚಾರದ ದುರ್ವಾಸನೆ ಎಲ್ಲೆಡೆಯೂ ಹಬ್ಬಿದೆ.. ಮುಖ್ಯಮಂತ್ರಿಗಳು ತನಿಖೆಗೆ ಆದೇಶ ನೀಡದೇ ಪುರಾವೆ ಕೇಳುತ್ತಾರೆ ಎಂದು ಕಾಂಗ್ರೆಸ್ ವಾಗ್ದಾಳಿ ನಡೆಸಿದೆ.
ಆದರೆ ಸ್ವಾಮೀಜಿ ಹೇಳಿಕೆಗೆ ಬಿಎಸ್ವೈ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಚಿವ ಸಿಸಿ ಪಾಟೀಲರಂತೂ ಸ್ವಾಮೀಜಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಉಡುಪಿಯ ಪಲಿಮಾರು ಶ್ರೀಗಳು, ದಿಂಗಾಲೇಶ್ವರ ಸ್ವಾಮೀಜಿ ಹೇಳಿಕೆಗೆ ವ್ಯತಿರಿಕ್ತ ಹೇಳಿಕೆ ನೀಡಿದ್ದಾರೆ. ಇದರ ಹಿಂದೆ ಬೇರೇನೋ ಇದೆ ಎಂಬ ಶಂಕೆ ವ್ಯಕ್ತಪಡಿಸಿದ್ದಾರೆ.