– ದೆಹಲಿಯ ಕೃಷ್ಣ ಮಠದಲ್ಲಿ ನೀರವ ಮೌನ
ನವದೆಹಲಿ: ಪೇಜಾವರ ಶ್ರೀಗಳು ತಮ್ಮ ಪೂಜೆಯಿಂದಲೇ ಸಾಕಷ್ಟು ಪ್ರಖ್ಯಾತಿ ಆಗಿದ್ದವರು. ದಿನದಲ್ಲಿ ಎಂತಹದ್ದೇ ಪ್ರಮುಖ ಕೆಲಸವಿದ್ದರೂ ಶ್ರೀಕೃಷ್ಣನ ಪೂಜೆ ತಪ್ಪಿಸಿಕೊಳ್ಳುತ್ತಿರಲಿಲ್ಲ. ಪೂಜೆಯ ಬಳಿಕವೇ ಕೆಲಸ ಮಾಡುವುದನ್ನು ರೂಢಿಸಿಕೊಂಡಿದ್ದರು.
ದೆಹಲಿಯ ಕೊರತೆಯುವ ಚಳಿಯಲ್ಲೂ ನಡುಗುತ್ತಾ ಪೇಜಾವರ ಶ್ರೀಗಳು ಮಠದಲ್ಲಿ ಪೂಜೆ ಮಾಡುತ್ತಿರುವ ವಿಡಿಯೋ ಈಗ ವೈರಲ್ ಆಗುತ್ತಿದೆ. ಕಳೆದ ಡಿಸೆಂಬರ್ 5 ರಂದು ದೆಹಲಿಯಲ್ಲಿ ರಾಜ್ಯದ ಸಂಸದರಿಗೆ ಸನ್ಮಾನ ಕಾರ್ಯಕ್ರಮ ಹಿನ್ನೆಲೆ ಪೇಜಾವರ ಶ್ರೀಗಳು ಮಠಕ್ಕೆ ಬಂದಿದ್ದರು. ಈ ವೇಳೆ ಬೆಳ್ಳಂಬೆಳಗ್ಗೆ ಕೊರತೆಯುವ ಚಳಿಯ ನಡುವೆ ಶ್ರೀಗಳು ಪೂಜೆ ಮಾಡುತ್ತಿದ್ದರು.
ತೀವ್ರ ಚಳಿಯ ಹಿನ್ನೆಲೆ ಮಠದ ಸಿಬ್ಬಂದಿ ಪೂಜೆ ತಡ ಮಾಡಿದ್ದರು. ಆದರೆ ಸ್ವಾಮೀಜಿಗಳು ಪ್ರತಿದಿನದ ಸಮಯದಂತೆ ಬೆಳಗ್ಗೆಯೇ ಪೂಜೆ ಮಾಡಲೇ ಬೇಕು ಎಂದು ಹಠ ಮಾಡಿ ಪೂಜೆಗೆ ವ್ಯವಸ್ಥೆ ಮಾಡಿಸಿದ್ದರು. ತಟ್ಟೆಯಲ್ಲಿ ಹನುಮಂತನ ಮೂರ್ತಿ ಇಟ್ಟು ಹೂವು ಹಾಕಿ ಪೂಜೆ ಮಾಡಿದ್ದರು. ಈ ವೇಳೆ ಕೊರೆಯುವ ಚಳಿಗೆ ಅವರ ಮೈ ನಡಗುತ್ತಿರುವುದು ವಿಡಿಯೋದಲ್ಲಿ ನೋಡಬಹುದು.
ನೀರವ ಮೌನ:
ಪೇಜಾವರ ಶ್ರೀಗಳ ನಿಧನ ಸುದ್ದಿ ಬೆನ್ನೆಲೆ ದೆಹಲಿ ಶ್ರೀಕೃಷ್ಣ ಮಠದಲ್ಲಿ ದುಃಖದ ಛಾಯೆ ಆವರಿಸಿದೆ. ಮಠದ ಭಕ್ತರು ಮೌನವಾಗಿದ್ದು ಶ್ರೀಗಳ ಅಂತಿಮ ದರ್ಶನಕ್ಕೆ ಬೆಂಗಳೂರಿಗೆ ತೆರಳುತ್ತಿದ್ದಾರೆ. ಸದ್ಯ ದೆಹಲಿಯ ಮಠದಲ್ಲಿ ಬೆರಳೆಣಿಕೆಯಷ್ಟು ಸಿಬ್ಬಂದಿಗಳಿದ್ದು ಎಲ್ಲರೂ ಮೌನಕ್ಕೆ ಶರಣರಾಗಿದ್ದಾರೆ.
ಶ್ರೀಗಳ ನಿಧನ ಹಿನ್ನೆಲೆ ಮಠದಲ್ಲಿ ಶಾಂತಿ ಮಂತ್ರ ಪಟಿಸಲಾಯಿತು ಮತ್ತು ಮೌನಚಾರಣೆ ಮಾಡುವ ಮೂಲಕ ಶ್ರೀಗಳ ಆತ್ಮಕ್ಕೆ ಶಾಂತಿ ಕೋರಲಾಗಿದೆ. ವಿದ್ಯಾರ್ಥಿ ದೆಸೆಯಿಂದ ಪೇಜಾವರ ಶ್ರೀಗಳ ಅನುಯಾಯಿಗಳಾಗಿದ್ದ ಭಕ್ತರದಲ್ಲಿ ದುಃಖ ಮಡುಗಟ್ಟಿತ್ತು. ಪಬ್ಲಿಕ್ ಟಿವಿ ಜೊತೆಗೆ ಅವರು ತಮ್ಮ ನೆನಪುಗಳನ್ನು ಹಂಚಿಕೊಂಡರು.
ದೆಹಲಿ ಶ್ರೀಕೃಷ್ಣ ಮಠದ ಭಕ್ತರೊಬ್ಬರು ಮಾತನಾಡಿ, ಶ್ರೀಗಳು ಅಗಲಿಕೆ ದುಃಖ ತಂದಿದೆ. ಅವರು ಅನೇಕ ವಿದ್ಯಾರ್ಥಿ ನಿಯಲಗಳನ್ನು ಕಟ್ಟಿಸಿ ವಿದ್ಯೆ ಹಾಗೂ ಅನ್ನದಾನ ಮಾಡಿದ್ದಾರೆ. ಅನೇಕ ಗ್ರಂಥಗಳನ್ನು ರಚಿಸಿ ಸಂಸ್ಕೃತವನ್ನು ಸಾಮಾನ್ಯರಿಗೂ ಅರ್ಥವಾಗಲು ಶ್ರಮಿಸಿದರು. ಅನೇಕ ಪಂಡಿತರನ್ನು ಶ್ರೀಗಳು ನಾಡಿಗೆ ಕೊಟ್ಟಿದ್ದಾರೆ.
ಪೇಜಾವರ ಶ್ರೀಗಳು ಭಕ್ತರ ಅನುಕೂಲಕ್ಕಾಗಿ ದೆಹಲಿಯ ವಸಂತ್ ಕುಂಜ್ನಲ್ಲಿ ಶ್ರೀಕೃಷ್ಣ ಮಠವನ್ನು 2003 ರಲ್ಲಿ ನಿರ್ಮಿಸಿದ್ದರು. ದೇಶದ ಬೇರೆ ಬೇರೆ ಕಡೆಯಿಂದ ಬರುವ ಭಕ್ತರಿಗೆ ಅನುಕೂಲ ಆಗುವ ನಿಟ್ಟಿನಲ್ಲಿ ವಾಸ್ತವ್ಯಕ್ಕೂ ವ್ಯವಸ್ಥೆ ಮಾಡಲಾಗಿದೆ. 2010ರಲ್ಲಿ ಮಠದ ಅಂಗಳದಲ್ಲೇ ಶ್ರೀಕೃಷ್ಣ ದೇವಸ್ಥಾನ ಕಟ್ಟಿ ಮೂರ್ತಿ ಪ್ರತಿಷ್ಠಾಪನೆ ಮಾಡಿದ್ದರು.