ದಾವಣಗೆರೆ: ಮೂಲ ಸೌಕರ್ಯ ಕಲ್ಪಿಸದ ಮಹಾನಗರ ಪಾಲಿಕೆ ವಿರುದ್ಧ ನಗರದ ಸ್ಮಾರ್ಟ್ ಸಿಟಿಯಲ್ಲಿನ ನಿವಾಸಿಗಳು ಕೋಪಗೊಂಡಿದ್ದು, ದಯವಿಟ್ಟು ಮತ ಕೇಳಲು ಬರಬೇಡಿ ಎಂದು ಮತದಾನ ಬಹಿಷ್ಕಾರ ಅಭಿಯಾನ ನಡೆಸುತ್ತಿದ್ದಾರೆ.
ಮಹಾನಗರ ಪಾಲಿಕೆಯ 18 ನೇ ವಾರ್ಡ್ ವಿನಾಯಕ ನಗರದ “ಎ” ಬ್ಲಾಕ್ ನಲ್ಲಿ 200 ಕ್ಕೂ ಹೆಚ್ಚು ಮನೆಗಳಿವೆ. ಅದರಲ್ಲಿ 100 ಕ್ಕೂ ಹೆಚ್ಚು ಮನೆಗಳ ಮುಂದೆ ಜನ ಮತದಾನ ಬಹಿಷ್ಕಾರದ ಪೋಸ್ಟರ್ ಹಾಕಿದ್ದಾರೆ.
20 ದಿನಗಳಿಗೊಮ್ಮೆ ಕುಡಿಯೋಕೆ ನೀರು ಬಿಡ್ತಾರೆ. ಅಲ್ಲದೇ ರಾತ್ರಿ ಬೀದಿ ದೀಪದ ವ್ಯವಸ್ಥೆ ಇಲ್ಲ, ರಸ್ತೆ ಗುಂಡಿಮಯವಾಗಿವೆ. ಹಾಗೂ ಸ್ವಚ್ಛತೆ ಅನ್ನೋದು ಮರೀಚಿಕೆಯಾಗಿದೆ. ಸಮಸ್ಯೆಯ ಬಗ್ಗೆ ಸಾಕಷ್ಟು ಬಾರಿ ಮನವಿ ಮಾಡಿದರೂ ಕೆಲಸ ಆಗದ ಹಿನ್ನೆಲೆಯಲ್ಲಿ ನಾವು ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ನಿವಾಸಿಗಳು ಹೇಳಿದ್ದಾರೆ.
ಮೂಲ ಸೌಕರ್ಯಕ್ಕೆ ಆಗ್ರಹಿಸಿ ಸತತ ಮೂರು ವರ್ಷಗಳಿಂದ ಹೋರಾಟ ನಡೆಸಿದರೂ ಅಲ್ಲಿನ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಜನರ ಸಮಸ್ಯೆ ಆಲಿಸದೇ ಅತ್ತ ತಿರುಗಿಯೂ ಕೂಡ ನೋಡುತ್ತಿಲ್ಲ. ಹಾಗಾಗಿ ಮೂಲ ಸೌಕರ್ಯ ಒದಗಿಸದ ಹೊರತು ಮತದಾನ ಮಾಡೋದಿಲ್ಲ ಅಂತ ಪಟ್ಟು ಹಿಡಿದು ನಿವಾಸಿಗಳು ಮತದಾನ ಬಹಿಷ್ಕಾರ ಅಭಿಯಾನವನ್ನು ಕೈಗೊಂಡಿದ್ದಾರೆ.