ಭೋಪಾಲ್: ಅತ್ಯಾಚಾರಕ್ಕೊಳಗಾಗಿದ್ದ 13 ವರ್ಷದ ದಲಿತ ಬಾಲಕಿಯನ್ನು (Dalit Girl) ರಾತ್ರಿ ಇಡೀ ಠಾಣೆಯಲ್ಲಿ ಇರಿಸಿಕೊಂಡು ಥಳಿಸಿದ ಘಟನೆ ಮಧ್ಯ ಪ್ರದೇಶದ (Madhya Pradesh) ಛತ್ತರ್ಪುರ ನಗರದಲ್ಲಿ ನಡೆದಿದ್ದು, ಘಟನೆಗೆ ಸಂಬಂಧಿಸಿದಂತೆ ಮೂವರು ಪೊಲೀಸ್ (Police) ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.
ಅತ್ಯಾಚಾರ ಸಂತ್ರಸ್ತೆಯನ್ನು ಪೊಲೀಸ್ ಠಾಣೆಯಲ್ಲಿ ಇರಿಸಿದ್ದಕ್ಕಾಗಿ ನಗರ ಕೋತ್ವಾಲಿ ಠಾಣೆಯ ಎಚ್ಎಸ್ಒ ಅನೂಪ್ ಯಾದವ್, ಸಬ್ ಇನ್ಸ್ಪೆಕ್ಟರ್ ಮೋಹಿನಿ ಶರ್ಮಾ ಮತ್ತು ಸಹಾಯಕ ಸಬ್ ಇನ್ಸ್ಪೆಕ್ಟರ್ (PSI) ಗುರುದತ್ ಶೇಷಾ ಅವರನ್ನು ಅಮಾನತುಗೊಳಿಸಲಾಗಿದೆ. ಜೊತೆಗೆ ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪಿ ಬಾಬು ಖಾನ್ ನನ್ನು ಸೆಪ್ಟೆಂಬರ್ 1ರಂದು ಐಪಿಸಿ ಸೆಕ್ಷನ್ ಹಾಗೂ ಪರಿಶಿಷ್ಟ ಜಾತಿ ಪಂಗಡಗಳ (SC-ST Act) ದೌರ್ಜನ್ಯ ತಡೆ ಕಾಯ್ದೆ ಹಾಗೂ ಪೋಕ್ಸೋ (POCSO) ಕಾಯ್ದೆ ಅಡಿಯಲ್ಲಿ ಬಂಧಿಸಲಾಗಿದೆ ಎಂದು ಛತ್ತರ್ಪುರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಸಚಿನ್ ಶರ್ಮಾ ತಿಳಿಸಿದ್ದಾರೆ. ಇದನ್ನೂ ಓದಿ: ನಿರ್ಮಾಣ ಹಂತದಲ್ಲಿದ್ದ 4 ಅಂತಸ್ತಿನ ಕಟ್ಟಡ ಕುಸಿತ – ಮೂವರ ದುರ್ಮರಣ
ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿ ಈ ಸಂಬಂಧ ದೂರು ನೀಡಿದ ನಂತರ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗಿದೆ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಪ್ರತಾಪ್ ಸಿಂಗ್ ಚೌಹಾಣ್ ಹೇಳಿದ್ದಾರೆ.
ದೂರಿನಲ್ಲಿ ಏನಿದೆ?: ಕಳೆದ ಆಗಸ್ಟ್ 27ರಂದು ಮಗಳು ಆಟವಾಡಲು ಮನೆಯಿಂದ ಹೊರಟಿದ್ದಳು ಮತ್ತೆ ಹಿಂದಿರುಗಿರಲಿಲ್ಲ. ಮರುದಿನ ಪತಿಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಅದಾದ ಬಳಿಕ ಆಗಸ್ಟ್ 30 ರಂದು ಮಗಳು ತನ್ನ ಮನೆಗೆ ವಾಪಸ್ಸಾದಳು. ಅದೇ ದಿನ ಬಾಬು ಖಾನ್ ಬಲವಂತವಾಗಿ ತನ್ನ ಮಗಳನ್ನ ಕರೆದೊಯ್ದು ಮೂರು ದಿನಗಳ ಕಾಲ ಬಾಲಕಿ ಮೇಲೆ ಅತ್ಯಾಚಾರವೆಸಗಿದ್ದಾನೆ ಎಂದು ಬಾಲಕಿ ತಾಯಿ ದೂರಿನಲ್ಲಿ ತಿಳಿಸಿದ್ದಾರೆ. ಇದನ್ನೂ ಓದಿ: ಸ್ಥಳೀಯ ಕಲಾವಿದರೊಂದಿಗೆ ನೃತ್ಯ ಮಾಡಿದ ಬಾಂಗ್ಲಾ ಪ್ರಧಾನಿ – ವೀಡಿಯೋ ವೈರಲ್
ಈ ಘಟನೆಗೆ ಸಂಬಂಧಿಸಿದಂತೆ ದೂರು ದಾಖಲಿಸಲು ಪೊಲೀಸ್ ಠಾಣೆಗೆ ಹೋದಾಗ ಇಬ್ಬರು ಪೊಲೀಸರು ನನ್ನ ಮಗಳಿಗೆ ಹೇಳಿಕೆ ಬದಲಾಯಿಸುವಂತೆ ಒತ್ತಡ ಹೇರಿದರು. ಅಲ್ಲದೇ ನನ್ನ ಮಗಳನ್ನು ಹಿಡಿದು ಥಳಿಸಿದರು. ಅಲ್ಲೇ ಇದ್ದ ಮತ್ತೊಬ್ಬ ಪೊಲೀಸ್ ಅಧಿಕಾರಿ ನನ್ನನ್ನು ಹೊರಗೆ ದಬ್ಬಿದರು. ಇಡೀ ರಾತ್ರಿ ನನ್ನ ಮಗಳನ್ನು ಠಾಣೆಯಲ್ಲೇ ಇರಿಸಿಕೊಂಡು ಥಳಿಸಿದರು. ಆಗಸ್ಟ್ 31 ರಂದು ಪೊಲೀಸ್ ಠಾಣೆಯಲ್ಲಿ ಇನ್ಸ್ಪೆಕ್ಟರ್ ಯಾದವ್ ಅವರನ್ನು ಕೇಸ್ ದಾಖಲಿಸುವಂತೆ ಕೇಳಿದಾಗ ನಮ್ಮನ್ನು ಹೆದರಿಸಿ ಓಡಿಸಿದರು. ಅಂತಿಮವಾಗಿ ಸೆಪ್ಟೆಂಬರ್ 1 ರ ಸಂಜೆ ಪೊಲೀಸರು ಆರೋಪಿಯ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಆದರೆ ಅಪಹರಣದ ಆರೋಪವನ್ನು ಎಫ್ಐಆರ್ನಲ್ಲಿ ಸೇರಿಸಿರಲಿಲ್ಲ. ಜೊತೆಗೆ ಬಾಲಕಿಯ ವಯಸ್ಸನ್ನು 13ರ ಬದಲಿಗೆ 17 ವರ್ಷ ಎಂದು ತೋರಿಸಲಾಗಿತ್ತು ಎಂದೂ ಸಂತ್ರಸ್ತೆಯ ತಾಯಿ ದೂರಿನಲ್ಲಿ ತಿಳಿಸಿದ್ದರು.