ಬೆಂಗಳೂರಿನ ರಾಜಾಜಿನಗರದ (Rajajinagar) ಡಾ.ರಾಜ್ ಕುಮಾರ್ ರಸ್ತೆ ಅಂದಾಕ್ಷಣ ಅಲ್ಲಿ ರವಿಚಂದ್ರನ್ ಮನೆ ನೆನಪಾಗುತ್ತದೆ. ಖ್ಯಾತ ನಿರ್ಮಾಪಕರೂ, ರವಿಚಂದ್ರನ್ ಅವರ ತಂದೆಯವರೂ ಆದ ವೀರಸ್ವಾಮಿ (Veeraswamy) ಅವರಿಂದ ರವಿಚಂದ್ರನ್ ಪುತ್ರರ ತನಕ ಈ ಮನೆಯೇ ಕುಟುಂಬಕ್ಕೆ ನೆರಳಾಗಿದೆ. ಒಂದು ಕಾಲದಲ್ಲಿ ಅದು ಸಿನಿಮಾ ಇಂಡಸ್ಟ್ರಿಯ ಪ್ರಮುಖ ಸ್ಥಳವೂ ಆಗಿತ್ತು. ಅನೇಕ ಸಿನಿದಿಗ್ಗಜರು ಆ ಮನೆಗೆ ಬಂದಿದ್ದೂ ಇದೆ. ಇಂತಹ ಮನೆಯನ್ನು ರವಿಚಂದ್ರನ್ ತೊರೆದಿದ್ದಾರೆ.
ರವಿಚಂದ್ರನ್ (Ravichandran) ಆ ಮನೆಯಲ್ಲಿ ಇಲ್ಲ ಎಂಬ ವಿಷಯ ವಾರದಿಂದ ಗಾಂಧಿನಗರದಲ್ಲಿ ಗಿರಿಕಿ ಹೊಡೆಯುತ್ತಿತ್ತು. ಕೆಲವರು ಆ ಮನೆಯನ್ನು ಮಾರಿದರು ಎಂದು ಹೇಳಿದರೆ, ಇನ್ನೂ ಕೆಲವರು ವಾಸ್ತು ಕಾರಣಕ್ಕಾಗಿ ಬಿಟ್ಟಿದ್ದಾರೆ ಎಂದೂ ಮಾತನಾಡಿಕೊಳ್ಳುತ್ತಿದ್ದರು. ರಿಪೇರಿ ಕಾರಣಕ್ಕಾಗಿ ಬೇರೆ ಮನೆಗೆ ಶಿಫ್ಟ್ ಆಗಿದ್ದಾರೆ ಎಂದೂ ಹೇಳಲಾಗಿತ್ತು. ಆದರೆ, ರವಿಚಂದ್ರನ್ ಅವರೇ ನಿನ್ನೆ ಬನಾರಸ್ ಸಿನಿಮಾದ ಟೀಸರ್ ಬಿಡುಗಡೆಗೂ ಮುನ್ನ, ಕೆಲ ಮಾಧ್ಯಮ ಸ್ನೇಹಿತರ ಮುಂದೆ ವಾಸ್ತವ ತೆರೆದಿಟ್ಟಿದ್ದಾರೆ.
ಅಸಲಿಯಾಗಿ ರವಿಚಂದ್ರನ್ ಸಂಪೂರ್ಣವಾಗಿ ಮನೆ ತೊರೆದಿಲ್ಲ. ಆದರೆ, ಹೊಸ ಮನೆಗೆ ಶಿಫ್ಟ್ ಆಗಿದ್ದು ನಿಜ ಎಂದಿದ್ದಾರೆ. ಮಗನ ಮದುವೆಯ ನಂತರ ಹೊಸ ಮನೆಗೆ ಹೋಗುವುದು ಎಂದು ಮೊದಲೇ ನಿರ್ಧಾರವಾಗಿತ್ತು. ಹಾಗಾಗಿ ಹೊಸ ಮನೆಗೆ ಹೋಗಿದ್ದೇವೆ. ಹಳೆ ಮನೆಯಲ್ಲೂ ನಾನು ಇರುತ್ತೇನೆ. ಸಿನಿಮಾ ಸಂಬಂಧಿ ಕೆಲಸಗಳನ್ನು ಇಲ್ಲಿಯೇ ಮಾಡುತ್ತಿದ್ದೇನೆ. ಹೊಸಕೆರೆ ಹಳ್ಳಿಯಲ್ಲಿರುವ ಅಪಾರ್ಟ್ಮೆಂಟ್ ನಲ್ಲಿ ಸದ್ಯ ರವಿಚಂದ್ರನ್ ವಾಸವಾಗಿದ್ದಾರೆ.
ಹೊಸ ಮನೆಗೆ ಶಿಫ್ಟ್ ಆಗಬೇಕು ಎನ್ನುವುದು ಹಲವು ವರ್ಷಗಳಿಂದ ನಡೆಯುತ್ತಲೇ ಇತ್ತು. ಅಮ್ಮನಿಗಾಗಿ ಹಳೆ ಮನೆಯಲ್ಲೇ ಇದ್ದೆವು. ಮನೋರಂಜನ್ (Manoranjan) ಮದುವೆ ನಂತರ ಹೋಗುವ ಕುರಿತು ಪ್ಲ್ಯಾನ್ ಮಾಡಲಾಗಿತ್ತು. ಅದರಂತೆಯೇ ಇದೀಗ ಹೊಸ ಮನೆಗೆ ಶಿಫ್ಟ್ ಆಗಿರುವುದಾಗಿ ರವಿಚಂದ್ರನ್ ತಿಳಿಸಿದ್ದಾರೆ. ಈ ಮೂಲಕ ಹರಡಿರುವ ಗಾಸಿಪ್ ಗೆ ತೆರೆ ಎಳೆದಿದ್ದಾರೆ.