ನಾಳೆಯಿಂದ ಪ್ರತಿಷ್ಠಿತ ಕೇನ್ಸ್ ಚಲನಚಿತ್ರೋತ್ಸವ ಪ್ರಾರಂಭವಾಗಲಿದ್ದು, ಅದರಲ್ಲಿ ಪಾಲ್ಗೊಳ್ಳಲು ಬಾಲಿವುಡ್ ನಿಂದ ಅನೇಕ ತಾರೆಯರು ವಿಮಾನ ಏರಿದ್ದಾರೆ. ಆದರೆ, ಅಕ್ಷಯ್ ಕುಮಾರ್ ಮಾತ್ರ ಕೇನ್ಸ್ ನಿಂದ ದೂರ ಉಳಿಯುವುದಾಗಿ ತಿಳಿಸಿದ್ದಾರೆ. ಎರಡನೇ ಬಾರಿಗೆ ಅಕ್ಷಯ್ ಕುಮಾರ್ ಅವರಿಗೆ ಕೊರೋನಾ ಪಾಸಿಟಿವ್ ಆಗಿದ್ದು, ಹಾಗಾಗಿ ತಾವು ಕೇನ್ಸ್ ನಲ್ಲಿ ಪಾಲ್ಗೊಳ್ಳುತ್ತಿಲ್ಲ ಎಂದು ಅಕ್ಷಯ್ ಟ್ವಿಟ್ ಮಾಡಿದ್ದಾರೆ. ಇದನ್ನೂ ಓದಿ: ದೊಡ್ಮನೆ ಕುಡಿ ಯುವರಾಜ್ ಎದುರು ವಿಲನ್ ಆಗಿ ಡಾಲಿ!
ಕಳೆದ ವರ್ಷ ಏಪ್ರಿಲ್ ನಲ್ಲಿ ಅಕ್ಷಯ್ ಕುಮಾರ್ ಅವರಿಗೆ ಕೋವಿಡ್ ಪಾಸಿಟಿವ್ ಆಗಿತ್ತು. ಮನೆಯಲ್ಲೇ ಅವರು ಕ್ವಾರಂಟೈನ್ ಆಗಿ ಚಿಕಿತ್ಸೆ ಪಡೆದುಕೊಂಡು ಗುಣಮುಖರಾಗಿದ್ದರು. ಈಗ ಮತ್ತೆ ಅವರನ್ನು ಕೊರೋನಾ ಕಾಡಿದೆ. ನಿನ್ನೆಯಷ್ಟೇ ಅವರಿಗೆ ಕೋವಿಡ್ ಪಾಸಿಟಿವ್ ಧೃಡಪಟ್ಟಿದ್ದು, ಅದನ್ನು ಟ್ವಿಟ್ ಮೂಲಕ ಅಭಿಮಾನಿಗಳ ಜತೆ ಹಂಚಿಕೊಂಡಿದ್ದಾರೆ. ತಮ್ಮ ಸಂಪರ್ಕದಲ್ಲಿ ಇದ್ದವರು ಪರೀಕ್ಷೆ ಮಾಡಿಸಿಕೊಳ್ಳುವಂತೆ ಮನವಿ ಮಾಡಿಕೊಂಡಿದ್ದಾರೆ.
ಟ್ವಟ್ ನಲ್ಲಿ ಬೇಸರ ವ್ಯಕ್ತ ಪಡಿಸಿರುವ ಅಕ್ಷಯ್ ಕುಮಾರ್, “ಕೇನ್ಸ್ ಚಿತ್ರೋತ್ಸವದಲ್ಲಿ ಭಾರತದ ಚಿತ್ರಗಳನ್ನು ನೋಡಲು ಉತ್ಸುಕನಾಗಿದ್ದೆ. ಹೆಮ್ಮೆಯಿಂದಲೇ ಈ ಬಾರಿಯ ಕೇನ್ಸ್ ನಲ್ಲಿ ಭಾಗಿಯಾಗಲು ಸಿದ್ಧತೆ ಮಾಡಿಕೊಂಡಿದ್ದೆ. ಆದರೆ, ಕೋವಿಡ್ ನಿಂದಾಗಿ ಅದೆಲ್ಲವೂ ನಿರಾಸೆ ಆಗಿದೆ. ನಿರಾಸೆಯಿಂದಲೇ ಈ ಸುದ್ದಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಬೇಕಾಗಿದೆ’ ಎಂದು ಅವರು ಟ್ವಿಟರ್ ನಲ್ಲಿ ಬರೆದುಕೊಂಡಿದ್ದಾರೆ. ಇದನ್ನೂ ಓದಿ:`ಫಿದಾ’ ಬ್ಯೂಟಿ ಸಾಯಿ ಪಲ್ಲವಿಗೆ ಕನ್ನಡ ಹೇಳಿಕೊಟ್ಟ ಶೀತಲ್ ಶೆಟ್ಟಿ
ದೀಪಿಕಾ ಪಡುಕೋಣೆ, ಐಶ್ವರ್ಯ ರೈ, ಪೂಜಾ ಹೆಗ್ಡೆ, ಪ್ರಿಯಾಂಕಾ ಚೋಪ್ರಾ, ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ ಸೇರಿದಂತೆ ಹಲವು ತಾರೆಯರು ಈ ಕೇನ್ಸ್ ಚಿತ್ರೋತ್ಸವದಲ್ಲಿ ಭಾಗಿಯಾಗುತ್ತಿದ್ದು, ನಾಳೆಯಿಂದ ನಡೆಯುವ ಚಿತ್ರೋತ್ಸವದ ಹಲವು ಕಾರ್ಯಕ್ರಮಗಳಲ್ಲಿ ಭಾರತೀಯ ಸಿನಿಮಾ ರಂಗದ ಹಲವು ತಾರೆಯರು ಭಾಗಿಯಾಗಲಿದ್ದಾರೆ.
ಸಿನಿ ತಾರೆಯರ ನೇತೃತ್ವವನ್ನು ಕೇಂದ್ರ ಸಚಿವ ಅನುರಾಗ್ ಠಾಕೂರ್ ವಹಿಸಲಿದ್ದು, ಈ ಬಾರಿ ಚಲನಚಿತ್ರೋತ್ಸವದಲ್ಲಿ ಕನ್ನಡ ಮೂಲದ ನಟಿ, ಬಾಲಿವುಡ್ ತಾರೆ ದೀಪಿಕಾ ಪಡುಕೋಣೆ ಅವರು ತೀರ್ಪುಗಾರರ ಸ್ಥಾನ ತುಂಬಿದ್ದಾರೆ. ಇಂಥದ್ದೊಂದ ಗೌರವಕ್ಕೆ ಪಾತ್ರವಾದ ಮೊದಲ ಕನ್ನಡ ಮೂಲದ ನಟಿ ಇವರಾಗಿದ್ದಾರೆ.