ಬೆಂಗಳೂರು: ಭ್ರಷ್ಟಾಚಾರದ ಬಗ್ಗೆ ಮಾತನಾಡಲು ಕಾಂಗ್ರೆಸ್ ಅವರಿಗೆ ನೈತಿಕತೆ ಇಲ್ಲ. ಕಾಂಗ್ರೆಸ್ನ ಇನ್ನೊಂದು ಮುಖವೇ ಭ್ರಷ್ಟಾಚಾರ ಎಂದು ಹೊನ್ನಾಳಿ ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ.
ದಾವಣಗೆರೆಯಲ್ಲಿ ಸಿದ್ದರಾಮೋತ್ಸವ ಸಮಾವೇಶ ನಡೆಯಲಿರುವ ವಿಚಾರವಾಗಿ ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಸಿದ್ದರಾಮೋತ್ಸವ ಮಾಡುತ್ತಿರುವುದು ಅವರ ವೈಯಕ್ತಿಕ ವಿಚಾರ. ಆದರೆ ಸಿದ್ದರಾಮಯ್ಯ ಈ ನೆಪದಲ್ಲಿ ಸಿಎಂ ಅವರ ಬಗ್ಗೆ ನಮ್ಮ ನಾಯಕರ ಬಗ್ಗೆ ಮಾತನಾಡುವುದು ಸರಿಯಲ್ಲ ಎಂದು ಗಡುಗಿದ್ದಾರೆ. ಇದನ್ನೂ ಓದಿ: ಒಟ್ಟಿಗೆ SSLC ಪರೀಕ್ಷೆ ಬರೆದಿದ್ದ 53ರ ತಾಯಿ, ಇಬ್ಬರು ಮಕ್ಕಳು ಪಾಸ್
ಸಚಿವ ಸಂಪುಟ ವಿಸ್ತರಣೆ ವಿಳಂಬ ವಿಚಾರವಾಗಿ ಪ್ರತಿಕ್ರಿಯಿಸಿದ ಅವರು, ರಾಜಕಾರಣದಲ್ಲಿ ಯಾರೂ ಸನ್ಯಾಸಿಗಳಲ್ಲ. ಗ್ರಾಮ ಪಂಚಾಯಿತಿ ಸದಸ್ಯ ಆಗಿರುವವನು ಅಧ್ಯಕ್ಷ ಆಗಲು ಬಯಸುತ್ತಾನೆ. ಹಾಗೆಯೇ ಶಾಸಕರು ಸಚಿವರಾಗಲು ಬಯಸುವುದು ಸಹಜ. ನಮ್ಮ ಪಕ್ಷದಲ್ಲಿ ಬೇರೆ, ಬೇರೆ ಕಾರಣಕ್ಕೆ ಸಚಿವ ಸಂಪುಟ ವಿಸ್ತರಣೆ ವಿಳಂಬವಾಗಿದೆ. ಆದರೆ ಈಗ ಚುನಾವಣಾ ಕಾಲ. ಶಾಸಕರು ತಮ್ಮ, ತಮ್ಮ ಕ್ಷೇತ್ರಗಳ ಕಡೆ ಹೆಚ್ಚು ಗಮನ ಹರಿಸಿದ್ದಾರೆ. ಅಲ್ಲದೇ ಹೈಕಮಾಂಡ್ ಏನೇ ನಿರ್ಧಾರ ಮಾಡಿದರೂ ನಾವು ಬದ್ಧರಾಗಿರುತ್ತೇವೆ. ಸದ್ಯ ಸಂಪುಟದಲ್ಲಿ ಐದು ಸ್ಥಾನಗಳು ಖಾಲಿ ಇವೆ. ಈ ಹಿಂದೆಯೇ ಆ ಐದು ಸ್ಥಾನ ತುಂಬಿಸಿಕೊಂಡಿದ್ದರೆ ಸಂಘಟನೆ ಇನ್ನಷ್ಟು ಆಗುತ್ತಿತ್ತು. ಹೊಸ ಮುಖಗಳಿಗೆ ಸಂಪುಟದಲ್ಲಿ ಆದ್ಯತೆ ಕೊಡಬೇಕಿತ್ತು. ಹಾಲಿ ಸಚಿವರಿಗೆ ಹೆಚ್ಚುವರಿ ಕೊಡದೇ ಹೊಸಬರನ್ನು ಸಚಿವರಾಗಿ ಮಾಡಬೇಕಿತ್ತು. ಆದರೆ ಈಗ ವಿಳಂಬವಾಗಿದೆ. ಈ ಬಗ್ಗೆ ನಾನು ಹೆಚ್ಚು ಮಾತಾಡಲು ಇಷ್ಟಪಡುವುದಿಲ್ಲ. ದೇಶದಲ್ಲಿ, ರಾಜ್ಯದಲ್ಲಿ ಸಂಘಟನೆ ಬಲಿಷ್ಠವಾಗಿದೆ. ಮುಂದೆಯೂ ನಾವೇ ಅಧಿಕಾರಕ್ಕೆ ಬರುತ್ತೇವೆ ಎಂದಿದ್ದಾರೆ.
ಬೊಮ್ಮಾಯಿ ಮತ್ತು ಆರಗ ಜ್ಞಾನೇಂದ್ರ ರಾಜೀನಾಮೆಗೆ ಕಾಂಗ್ರೆಸ್ ಆಗ್ರಹ ವಿಚಾರವಾಗಿ ಮಾತನಾಡಿದ ಅವರು, ಕಾಂಗ್ರೆಸ್ಗೆ ನೈತಿಕತೆ ಇಲ್ಲ. ಸಿದ್ದರಾಮಯ್ಯ ಕಾಲದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ಆಗಿತ್ತು. ಹಾಸಿಗೆ ದಿಂಬು ಭ್ರಷ್ಟಾಚಾರ, ರೀಡು ಭ್ರಷ್ಟಾಚಾರ. ಹೀಗೆ ಸಾಲು, ಸಾಲು ಭ್ರಷ್ಟಾಚಾರ ಆಗಿತ್ತು. ಆದರೀಗ ಅವರಿಗೆ ಬೊಮ್ಮಾಯಿಯನ್ನು ರಾಜೀನಾಮೆ ಕೇಳುವ ನೈತಿಕತೆ ಇಲ್ಲ ಎಂದು ಕಿಡಿಕಾರಿದ್ದಾರೆ. ಇದನ್ನೂ ಓದಿ: ಉದ್ಧವ್ಗೆ ಮತ್ತೆ ಶಾಕ್ – ಶಿವಸೇನೆಯ 64 ಪಾಲಿಕೆ ಸದಸ್ಯರು ಶಿಂಧೆ ಬಣಕ್ಕೆ ಸೇರ್ಪಡೆ
ಈಗ ಸಂಪುಟ ವಿಸ್ತರಣೆ ಮಾಡಿದರೆ, ಸಚಿವರು ವಿಧಾನಸೌಧದ ಮೂರನೇ ಮಹಡಿಗೆ ಸೀಮಿತವಾಗಿರುತ್ತಾರೆ. ಸಚಿವರಾದ ಮೇಲೆ ತಿಳಿಯುವುದು ಬಹಳ ಇರುತ್ತದೆ. ವಿಭಾಗವಾರು ಕಮಿಟಿ ಮಾಡಬೇಕಾಗುತ್ತದೆ. ಅನೇಕ ಶಾಸಕರು ಸಂಪುಟ ವಿಸ್ತರಣೆಗೆ ಅಪೇಕ್ಷೆ ಪಟ್ಟಿದ್ದರು. ಆದರೆ ಈಗ ಚುನಾವಣೆ ಹತ್ತಿರ ಬರುತ್ತಿದೆ. ಹಾಗಾಗಿ ಶಾಸಕರು ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ಅಭಿವೃದ್ಧಿಗಾಗಿ ಕ್ಷೇತ್ರದಲ್ಲಿ ಇದ್ದಾರೆ. ಒಬ್ಬರಿಗೆ ಎರಡು ಮೂರು ಖಾತೆಗಳ ಜವಾಬ್ದಾರಿ ನೀಡಿದ್ದಾರೆ. ಅದನ್ನು ಬದಲಾವಣೆ ಮಾಡಬಹುದಿತ್ತು. ಆದರೆ ಆಗಲಿಲ್ಲ. ಅದರ ಬಗ್ಗೆ ನಾನು ಹೆಚ್ಚು ಹೇಳಲ್ಲ. ವೈಯಕ್ತಿಕವಾಗಿ ಸಚಿವರ ಬಗ್ಗೆ ಮಾತನಾಡುವುದಿಲ್ಲ. ಒಂದೆರಡು ಸಚಿವರು ಕೆಲಸ ಮಾಡಿಲ್ಲ ಅಂತ ಸರ್ಕಾರ ಸಂಘಟನೆ ಮೇಲೆ ಏನು ವ್ಯತ್ಯಾಸ ಆಗಲ್ಲ. ನಾವು ಮತ್ತೆ ಅಧಿಕಾರಕ್ಕೆ ಬರುತ್ತೇವೆ. ಈಗ ಸರಿಯಾಗಿ ಕೆಲಸ ಮಾಡಿಲ್ಲ ಅಂದರೆ ಮುಂದೆ ಅವರಿಗೆ ತೊಂದರೆಯಾಗುತ್ತದೆ. ಎಲ್ಲವನ್ನೂ ಹೈಕಮಾಂಡ್ ನೋಡುತ್ತಿರುತ್ತದೆ.