ಉಡುಪಿ: ಕರಾವಳಿಯ ಉಸೇನ್ ಬೋಲ್ಟ್ ಎಂದು ಕಂಬಳ ಕ್ಷೇತ್ರದಲ್ಲಿ ಹೆಸರವಾಸಿಯಾಗಿದ್ದ ಶ್ರೀನಿವಾಸ್ ಗೌಡ ವಿರುದ್ಧ ನಕಲಿ ದಾಖಲೆ ಸೃಷ್ಟಿಸಿರುವ ಆರೋಪದಡಿ ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ಕ್ರಿಮಿನಲ್ ಕೇಸ್ ದಾಖಲಾಗಿದೆ.
ಕಂಬಳ ಓಟಗಾರ ಶ್ರೀನಿವಾಸ ಗೌಡ, ಕಂಬಳ ಹಿರಿಯ ತೀರ್ಪುಗಾರ ಗುಣಪಾಲ್ ಕಡಂಬ ಮತ್ತು ಲೇಸರ್ ಬೀಮ್ ಮಾಲಕ ರತ್ನಾಕರ್ ನಕಲಿ ದಾಖಲೆ ಸೃಷ್ಟಿಸಿ ವಂಚನೆ ಮಾಡಿರುವ ಆರೋಪ ಹೊರಿಸಿ ಕಂಬಳ ಕೋಣಗಳ ಯಜಮಾನ ಲೋಕೇಶ್ ಶೆಟ್ಟಿ ಮುಚ್ಚೂರು ಮೂಡಬಿದಿರೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಇದನ್ನೂ ಓದಿ: ಸಿನಿಮಾಗಾಗಿ ಕಂಬಳದ ಕೋಣ ಓಡಿಸಿದ ರಿಯಲ್ ಹೀರೋ ಶ್ರೀನಿವಾಸ್ ಗೌಡ
ತೀರ್ಪುಗಾರ ಗುಣಪಾಲ್ ಕಡಂಬ ಸ್ವಾರ್ಥ ಸಾಧನೆಗೆ ಕಂಬಳ ದುರುಪಯೋಗ ಮಾಡಿದ್ದಾರೆ. ಸ್ವಂತ ಲಾಭಕ್ಕಾಗಿ ಜಿಲ್ಲಾ ಕಂಬಳ ಸಮಿತಿಯಲ್ಲಿ ಆಕ್ರಮ ಪ್ರವೇಶ ಮಾಡಿದ್ದಾರೆ. ಕಂಬಳ ಕೂಟದ ಸಭೆಗಳಲ್ಲಿ ಮೈಕ್ ಹಿಡಿದು ತಾನೋರ್ವ ಮಹಾಸಾಧಕ, ನನ್ನಿಂದಲೇ ಕಂಬಳ ಉಳಿದಿದೆ ಎಂದು ಸಾರ್ವಜನಿಕರಲ್ಲಿ ಬಿಂಬಿಸಿ ಇದನ್ನು ತಮ್ಮ ಸ್ವಾರ್ಥ ಸಾಧನೆಗೆ ಬಳಸುತ್ತಿದ್ದಾರೆ. ಉಸೇನ್ ಬೋಲ್ಟ್ ದಾಖಲೆ ಉಡೀಸ್ ಅಂತಾ ನಕಲಿ ದಾಖಲೆ ಸೃಷ್ಟಿಸಲಾಗಿದೆ. ಇದನ್ನೇ ನೆಪವಾಗಿ ಸಾರ್ವಜನಿಕ ಹಾಗೂ ಸರ್ಕಾರದ ಹಣ ವಂಚಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಬಗ್ಗೆ ಪೊಲೀಸರು ಸೂಕ್ತ ತನಿಖೆ ನಡೆಸದೇ ಇದ್ದರೆ ನ್ಯಾಯಾಲಯದಲ್ಲಿ ಖಾಸಗಿ ದಾವೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ. ಇದನ್ನೂ ಓದಿ: ಚಾಕ್ಲೆಟ್ ಕವರ್ ನುಂಗಿ 6 ವರ್ಷದ ಬಾಲಕಿ ಸಾವು
2020ರ ಫೆ.1 ರಂದು ದಕ್ಷಿಣ ಕನ್ನಡ ಜಿಲ್ಲೆಯ ಐಕಳದಲ್ಲಿ ನಡೆದ ಕಂಬಳದ ಓಟದಲ್ಲಿ 145.5 ಮೀ. ದೂರವನ್ನು 13.63 ಸೆಕೆಂಡ್ಗಳಲ್ಲಿ ಕ್ರಮಿಸುವ ಮೂಲಕ ಶ್ರೀನಿವಾಸ್ ಗೌಡ ಕೂಟ ದಾಖಲೆ ಬರೆದಿದ್ದರು. ಈ ಸಾಧನೆ ದೇಶದ ಗಮನ ಸೆಳೆದಿತ್ತು. ಅಲ್ಲದೆ ಕಂಬಳ ಗದ್ದೆಯಲ್ಲಿ ಕೋಣಗಳೊಂದಿಗೆ 100 ಮೀ. ದೂರವನ್ನು 9.55 ಸೆಕೆಂಡ್ಗಳಲ್ಲಿ ಕ್ರಮಿಸುವ ಮೂಲಕ ದಾಖಲೆ ಬರೆದಿದ್ದರು. ಈ ಸಾಧನೆಯಿಂದ ಉಸೇನ್ ಬೋಲ್ಟ್ ಅವರ 100 ಮೀ. ಓಟದ ದಾಖಲೆ 9.58 ಉಡೀಸ್ ಆಗಿತ್ತು.