ಮುಂಬೈ: ಹಿರಿಯ ಆಟಗಾರರ ಅನುಪಸ್ಥಿತಿಯಲ್ಲೂ ತಮಗೆ ನೀಡಿದ ಅವಕಾಶವನ್ನು ಸದ್ಬಳಕೆ ಮಾಡಿಕೊಂಡ ಯುವ ಆಟಗಾರರಿಗೆ ಹಾಗೂ ತಂಡಕ್ಕೆ ಗೆಲುವಿನ ಶ್ರೇಯಸ್ಸು ದೊರೆಯಬೇಕು ಎಂದು ಟೀಂ ಇಂಡಿಯಾ ತಂಡದ ಕೋಚ್ ರಾಹುಲ್ ದ್ರಾವಿಡ್ ಸಂತಸ ವ್ಯಕ್ತಪಡಿಸಿದರು.
ಇಂದು ನಡೆದ ಟೆಸ್ಟ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಭರ್ಜರಿ ಗೆಲುವು ಸಾಧಿಸುವ ಮೂಲಕ ಭಾರತ ಸರಣಿಯನ್ನು ತನ್ನದಾಗಿಸಿಕೊಂಡಿತ್ತು. ಈ ಬಗ್ಗೆ ಮಾತನಾಡಿದ ಅವರು, ಕಾನ್ಪುರ್ದಲ್ಲಿ ನಡೆದ ಟೆಸ್ಟ್ ಸಂದರ್ಭದಲ್ಲಿ ಗೆಲುವಿನ ಸನಿಹ ಇದ್ದೆವು. ಆದರೆ ಅದೂ ಸಾಧ್ಯವಾಗಿರಲಿಲ್ಲ. ಆದರೆ ಇಂದಿನ ಗೆಲುವು ತಂಡಕ್ಕೆ ಸಲ್ಲಬೇಕು ಎಂದರು.
ಪ್ರಮುಖ ಆಟಗಾರರು ಟೆಸ್ಟ್ ಸರಣಿಗೆ ಅಲಭ್ಯರಾಗಿದ್ದರು. ಆದರೆ, ಯುವ ಆಟಗಾರರು ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡಿದ್ದಾರೆ. ನಿನ್ನೆ ಜಯಂತ್ ಯಾದವ್ ಅಂದುಕೊಂಡತೆ ಬೌಲಿಂಗ್ ಮಾಡಲು ಸಾಧ್ಯವಾಗಲಿಲ್ಲ. ಆದರೆ ಇಂದು ಬೆಳಿಗ್ಗೆ ಅವರು ಉತ್ತಮ ಪ್ರದರ್ಶನ ನೀಡಿ 4 ವಿಕೆಟ್ ಪಡೆದುಕೊಂಡಿದ್ದಾರೆ ಎಂದು ತಿಳಿಸಿದರು.
ತಂಡದಲ್ಲಿರುವ ಯುವ ಆಟಗಾರರಾದ ಶ್ರೇಯಸ್ ಅಯ್ಯರ್, ಮಯಾಂಕ್, ಅಕ್ಷರ್ ಪಟೇಲ್, ಜಯಂತ್ ಯಾದವ್ ಅವರು ಟೆಸ್ಟ್ ಕ್ರಿಕೆಟ್ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿರುವುದನ್ನು ನೋಡಿ ಖುಷಿಯಾಗುತ್ತದೆ. ಹಿರಿಯ ಆಟಗಾರರ ಅನುಪಸ್ಥಿತಿಯಲ್ಲಿ ನಾವು ಪಂದ್ಯವನ್ನು ಗೆಲ್ಲಿಸುತ್ತೇವೆ ಎಂಬ ಭರವಸೆಯನ್ನು ಯುವ ಆಟಗಾರರು ಮೂಡಿಸಿದ್ದಾರೆ ಎಂದು ಹೇಳಿದರು.
ಇದೇ ವೇಳೆ ಡಿಕ್ಲೇರ್ ಕುರಿತು ಮಾತನಾಡಿದ ದ್ರಾವಿಡ್, ನಾವು ಅದರ ಬಗ್ಗೆ ಹೆಚ್ಚು ಯೋಚಿಸಲು ಸಮಯವಿರಲಿಲ್ಲ. ಅಲ್ಲದೆ, ಈ ಸಮಯದಲ್ಲಿ ಯುವ ಆಟಗಾರರು ಆಡಲು ಕಾಯುತ್ತಿದ್ದರು. ಇದು ಅವರಿಗೆ ವಿಭಿನ್ನ ಪಿಚ್ನಲ್ಲಿ ಆಡಲು ಸಹಾಯವಾಗಿದೆ ಎಂದರು. ಇದನ್ನೂ ಓದಿ: 372 ರನ್ ಗಳ ಭರ್ಜರಿ ಜಯ – ಸರಣಿ ಜಯಿಸಿದ ಭಾರತ
ರಾಹುಲ್ ದ್ರಾವಿಡ್ ಅವರು ಕೋಚ್ ಆದ ಚೊಚ್ಚಲ ಸರಣಿಯಲ್ಲೇ ಭರ್ಜರಿ ಗೆಲುವನ್ನು ಸಾಧಿಸಿದ್ದಾರೆ. ಪಂದ್ಯ ಶ್ರೇಷ್ಠ ಮಯಾಂಕ್ ಅಗರ್ವಾಲ್ ಪಡೆದುಕೊಂಡಿದ್ದರೆ, ಸರಣಿ ಶ್ರೇಷ್ಠ ಪ್ರಶಸ್ತಿಯನ್ನು ಆರ್ ಅಶ್ವಿನ್ ತಮ್ಮದಾಗಿಸಿಕೊಂಡಿದ್ದಾರೆ. ಇದನ್ನೂ ಓದಿ: ವಿಜಯ್ ಸೇತುಪತಿ ಜೊತೆ ನಟಿಸಲು ಸೈ ಎಂದ ಸ್ವೀಟಿ