ಬೆಂಗಳೂರು: ರೇಣುಕಾಚಾರ್ಯ ತಮ್ಮನ ಪುತ್ರನ ಸಾವು ಪ್ರಕರಣ ಸಂಬಂಧ ಎಲ್ಲ ಆಯಾಮಗಳಲ್ಲಿ ತನಿಖೆಗೆ ಸೂಚಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಅವರು ತಿಳಿಸಿದ್ದಾರೆ.
ರೇಣುಕಾಚಾರ್ಯ (Renukacharya) ತಮ್ಮನ ಪುತ್ರನ ಸಾವು ಪ್ರಕರಣ ಸಂಬಂಧ ಪೊಲೀಸ್ ತನಿಖೆಗೆ ರೇಣುಕಾಚಾರ್ಯ ಅವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಕುರಿತಂತೆ ಪ್ರತಿಕ್ರಿಯಿಸಿದ ಬೊಮ್ಮಾಯಿ ಅವರು, ನಿನ್ನೆಯೂ ರೇಣುಕಾಚಾರ್ಯ ಜೊತೆ ಮಾತನಾಡಿದ್ದೇನೆ. ನಿಮ್ಮ ಪ್ರಕಾರ ಏನೆಲ್ಲ ನಡೆದಿದೆ ಅಂತ ಮಾಹಿತಿ ಕೇಳಿದ್ದೇನೆ. ಇದರ ಬಗ್ಗೆ ಸೂಕ್ತವಾದ ನಿರ್ದೇಶನಗಳನ್ನು ಅಲ್ಲಿನ ಪೊಲೀಸರಿಗೆ, ಐಜಿ ಅವರಿಗೆ ಮಾಹಿತಿ ಕಳುಹಿಸಿಕೊಡುತ್ತೇನೆ ಅಂತ ಹೇಳಿದ್ದೇನೆ. ಪ್ರಕರಣ ಕುರಿತಂತೆ ತನಿಖೆ ಆಗಲಿ, ತನಿಖೆ ಬಳಿಕ ಸತ್ಯಾಂಶ ಹೊರಗೆ ಬರುತ್ತದೆ. ಎಲ್ಲ ಆಯಾಮಗಳಲ್ಲಿ ತನಿಖೆಗೆ ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ತಾಕತ್ ಇದ್ರೆ ನನ್ನನ್ನು ಮುಟ್ಟಿ, ಅದನ್ನು ಬಿಟ್ಟು ನನ್ನ ಮಗನನ್ನು ಬಲಿ ಪಡೆದಿದ್ದು ಸರಿಯಲ್ಲ – ರೇಣುಕಾಚಾರ್ಯ
ನಾಳೆಯಿಂದ ಮೂರು ದಿನ ಉಡುಪಿ, ಗದಗ್, ಹಾವೇರಿ, ಬೆಳಗಾವಿ ಜಿಲ್ಲೆಗಳಲ್ಲಿ ಜನ ಸಂಕಲ್ಪ ಯಾತ್ರೆ ಇರುತ್ತದೆ. ಮೂರು ದಿನ ನಿರಂತರ ಕಾರ್ಯಕ್ರಮಗಳಿರುತ್ತವೆ. ಜನ ಸಂಕಲ್ಪ ಯಾತ್ರೆ ಡಿಸೆಂಬರ್ವರೆಗೆ ನಡೆಯಲಿದೆ. ಯಾತ್ರೆಗೆ ಅಭೂತಪೂರ್ವ ಬೆಂಬಲ ಸಿಗುತ್ತಿದೆ. ನವೆಂಬರ್ 20ಕ್ಕೆ ಬಳ್ಳಾರಿಯಲ್ಲಿ ಎಸ್ಟಿ ಸಮಾವೇಶ ನಡೆಯಲಿದೆ. ನವೆಂಬರ್ 30 ರಂದು ಮೈಸೂರಿನಲ್ಲಿ ಎಸ್ಸಿ ಸಮಾವೇಶ ದೊಡ್ಡದಾಗಿ ಮಾಡುತ್ತೇವೆ ಎಂದಿದ್ದಾರೆ. ಇದನ್ನೂ ಓದಿ: ತಿರುಪತಿ ತಿಮ್ಮಪ್ಪ ಈಗ 10 ಟನ್ ಚಿನ್ನ, 15 ಸಾವಿರ ಕೋಟಿಯ ಒಡೆಯ
ಡಿಕೆಶಿ ಕಾಲದ ಪಾವಗಡ ಸೋಲಾರ್ ಪಾರ್ಕ್ ಯೋಜನೆಗೆ ಸಚಿವ ಸುನಿಲ್ ಕುಮಾರ್ ಶ್ಲಾಘನೆ ವಿಚಾರವಾಗಿ ಮಾತನಾಡಿದ ಅವರು, ಸುನೀಲ್ ಕುಮಾರ್ ಅವರು ಸೋಲಾರ್ ಪಾರ್ಕ್ ಬಗ್ಗೆ ಅಷ್ಟೇ ಹೊಗಳಿದ್ದಾರೆ. ಇದರಲ್ಲಿ ಯಾವುದೇ ಗೊಂದಲ ಬೇಡ. ಅಕ್ರಮ ನಡೆದಿರುವುದು ಸೋಲಾರ್ ಪಾರ್ಕ್ನಿಂದ ಅಲ್ಲ. ಸೋಲಾರ್ ಪವರ್ ಉತ್ಪಾದನೆಯನ್ನು ಖಾಸಗಿಯವರಿಗೆ ಲೈಸೆನ್ಸ್ ನೀಡಲಾಗಿದೆ. ಲೈಸೆನ್ಸ್ ಹಂಚಿಕೆಯಲ್ಲಿ ಅವ್ಯವಹಾರ ಆಗಿದೆ. ಕೇವಲ ಏಳು ಸೆಕೆಂಡ್ಗಳಲ್ಲಿ ಲೈಸೆನ್ಸ್ ಹಂಚುವ ಮೂಲಕ ಅವ್ಯವಹಾರ ನಡೆಸಲಾಗಿದೆ. ಈ ಅವ್ಯವಹಾರದ ಬಗ್ಗೆ ತನಿಖೆ ಮಾಡುತ್ತೇವೆ ಎಂದು ಸ್ಪಷ್ಟನೆ ನೀಡಿದ್ದಾರೆ.
ನವೆಂಬರ್ 11 ರಂದು ಪ್ರಧಾನಿ ನರೇಂದ್ರ ಮೋದಿಯವರು (Narendra Modi) ಬೆಂಗಳೂರಿಗೆ ಭೇಟಿ ನೀಡಲಿದ್ದು, ಮೂರು ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಲಿದ್ದಾರೆ. ಕೆಂಪೇಗೌಡರ 108 ಅಡಿ ಪುತ್ಥಳಿ ಅನಾವರಣ, ಏರ್ಪೋರ್ಟ್ ಟರ್ಮಿನಲ್ 2 ಉದ್ಘಾಟನಾ ಸಮಾರಂಭ, ದಕ್ಷಿಣ ಭಾರತದಲ್ಲಿ ಮೊದಲ ಹಾಗೂ ಭಾರತದ 5ನೇ ವಂದೇ ಭಾರತ್ ಎಕ್ಸ್ಪ್ರೆಸ್ಗೆ ಚಾಲನೆ ನೀಡಲಿದ್ದಾರೆ. ಬಳಿಕ ಸಾರ್ವಜನಿಕ ಸಭೆಯಲ್ಲಿ ಭಾಗಿಯಾಗಲಿದ್ದಾರೆ ಎಂದು ತಿಳಿಸಿದ್ದಾರೆ.