ಬೆಂಗಳೂರು: ಚಿಟ್ ಫಂಡ್ ಮಾಡಿ ಜನರನ್ನು ವಂಚನೆ ಮಾಡುತ್ತಿದ್ದ ಮಹಿಳೆಯನ್ನು ರಾಜಾಜಿನಗರ ಪೊಲೀಸರು ಬಂಧಿಸಿದ್ದಾರೆ.
ಲಕ್ಷ್ಮೀವಾಣಿ ಬಂಧಿತ ವಂಚಕಿ. ವಾರಿಧಿ ಚಿಟ್ ಫಂಡ್ ಮಾಡುತ್ತಿದ್ದ ಲಕ್ಷ್ಮೀವಾಣಿ ಜನರನ್ನು ವಂಚಿಸಿ ಹಣ ಸಂಗ್ರಹಣೆ ಮಾಡುತ್ತಿದ್ದಳು. ಈ ಹಿನ್ನೆಲೆ ಸಾರ್ವಜನಿಕರು ದೂರು ನೀಡಿದ್ದು, ಅದರ ಆಧಾರದ ಮೇಲೆ ಪೊಲೀಸರು ಲಕ್ಷ್ಮೀವಾಣಿಯನ್ನು ಬಂಧಿಸಿದ್ದಾರೆ.
ಏನಿದು ಪ್ರಕರಣ?
ಲಕ್ಷ್ಮೀವಾಣಿ ಮೊದಲು ಲಗ್ಗೆರೆಯಲ್ಲಿ ವಾರಿಧಿ ಚಿಟ್ ಫಂಡ್ ಪ್ರೈ.ಲಿ. ಪ್ರಾರಂಭಿಸಿದ್ದು, ನಂತರ ರಾಜಾಜಿನಗರದಲ್ಲಿ ಮತ್ತೊಂದು ಬ್ರಾಂಚ್ ಓಪನ್ ಮಾಡಿದ್ದಳು. ಈಕೆ ತನ್ನ ಗಂಡನನ್ನೆ ಮ್ಯಾನೆಜಿಂಗ್ ಡೈರೆಕ್ಟರ್ ಮಾಡಿಕೊಂಡು ಚಿಟ್ ಫಂಡ್ ಕಂಪನಿ ಓಪನ್ ಮಾಡಿದ್ದಳು. ಅಲ್ಲದೇ ಈ ಕಂಪನಿಗೆ ಉದ್ಯೋಗಿಗಳನ್ನ ನೇಮಕ ಮಾಡಿಕೊಂಡಿದ್ದಳು. ಇದನ್ನೂ ಓದಿ: ರಿಯಲ್ ಎಸ್ಟೇಟ್ ಉದ್ಯಮಿ ಕೊಲೆ: ಆರೋಪಿ ಮೇಲೆ ಫೈರಿಂಗ್
ಚಿಟ್ ಫಂಡ್ ಉದ್ಯೋಗಿಗಳನ್ನು ಡೈರೆಕ್ಟರ್ ಎಂದು ಬಂದ ಜನರಿಗೆ ಪರಿಚಯ ಮಾಡಿಸ್ತಿದ್ಳು. ಅದನ್ನು ನಂಬುತ್ತಿದ್ದ ವೃದ್ಧರು ತಮ್ಮ ಜೀವನದ ಪೆನ್ಷನ್ ಹಣವನ್ನು ಲಕ್ಷ್ಮೀವಾಣಿ ಚಿಟ್ ಫಂಡ್ಗೆ ಹಾಕುತ್ತಿದ್ದರು. ಆದರೆ ಈಕೆ ಜನರನ್ನು ವಂಚಿಸಿ ಹಣವನ್ನು ತೆಗೆದುಕೊಂಡು ಮೋಸ ಮಾಡುತ್ತಿದ್ದಳು.
ಈ ಹಿನ್ನೆಲೆ ಲಕ್ಷ್ಮೀವಾಣಿ ವಿರುದ್ಧ ಸಾರ್ವಜನಿಕರು ರಾಜಾಜಿನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದರು. ಪ್ರಸ್ತುತ ಆರೋಪಿ ಲಕ್ಷ್ಮೀವಾಣಿಯನ್ನು ಪೊಲೀಸರು ಬಂಧಿಸಿದ್ದಾರೆ.