ಚಿಕ್ಕೋಡಿ: ನನಗೆ ರಾಜೀನಾಮೆ ನೀಡುವಂತೆ ಯಾವುದೇ ಆದೇಶ ಬಂದಿಲ್ಲ. ನನ್ನನ್ನ ಮಂತ್ರಿ ಸ್ಥಾನದಿಂದ ತೆಗೆಯುವುದಿಲ್ಲ ಎನ್ನುವ ವಿಶ್ವಾಸವಿದೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಖಾತೆ ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆ ನಿಪ್ಪಾಣಿ ತಾಲೂಕಿನ ಬಾಟ ನಾಗನೂರು ಗ್ರಾಮದಲ್ಲಿ ಪಬ್ಲಿಕ್ ಟಿವಿಗೆ ಹೇಳಿಕೆ ನೀಡಿರುವ ಅವರು, ಮಹಿಳಾ ಕೋಟದಿಂದ ಎರಡು ಬಾರಿ ಆಯ್ಕೆಯಾಗಿದ್ದೇನೆ ಜೊತೆಗೆ ಪಕ್ಷ ಸಂಘಟನೆ ಮಾಡಿದ್ದೇನೆ. ಆದರೂ ಹೈಕಮಾಂಡ್ ನಿರ್ಧಾರಕ್ಕೆ ಬದ್ಧವಾಗಿರುತ್ತೇನೆ ಎಂದಿದ್ದಾರೆ.
ಫೆಬ್ರವರಿ 6 ರಂದು ಸಂಪುಟ ವಿಸ್ತರಣೆಗೆ ಹೈಕಮಾಂಡ್ ಗ್ರೀನ್ ಸಿಗ್ನಲ್ ನೀಡಿದೆ. ಹೈಕಮಾಂಡ್ ಹಾಗೂ ಮುಖ್ಯಮಂತ್ರಿಗಳು ಎಲ್ಲರಿಗೂ ನ್ಯಾಯ ಕೊಡುತ್ತಾರೆ. 17 ಜನ ಶಾಸಕರ ತ್ಯಾಗದಿಂದಲೇ ನಮ್ಮ ಪಕ್ಷ ಅಧಿಕಾರಕ್ಕೆ ಬಂದಿದೆ. ಸಾಧ್ಯ ಅದಷ್ಟು ಎಲ್ಲರಿಗೂ ಸಮಾಧಾನ ಮಾಡುವ ಕೆಲಸ ಸಿಎಂ ಮಾಡುತ್ತಾರೆ. ಸಿಎಂ ಯಡಿಯೂರಪ್ಪ ಎಂದು ಮಾತಿಗೆ ತಪ್ಪುವುದಿಲ್ಲ. ಮಂತ್ರಿ ಸ್ಥಾನ ನೀಡದೆ ಇದ್ದರೂ ಬೇರೆ ನಿಗಮ ಮಂಡಳಿ ಸ್ಥಾನ ನೀಡಿ ಸಮಾಧಾನ ಮಾಡುತ್ತಾರೆ ಎಂದು ಜೊಲ್ಲೆ ಹೇಳಿದ್ದಾರೆ.
ಲಕ್ಷ್ಮಣ ಸವದಿ ಸೋತಿದ್ದರೂ ಡಿಸಿಎಂ ಆಗಿ ಮುಂದುವರಿಯುತ್ತಾರೆ ಎನ್ನುವ ವಿಶ್ವಾಸ ಇದೆ. ಅಲ್ಲದೆ ಸಂಪುಟ ವಿಸ್ತರಣೆ ಬಗ್ಗೆ ಯಡಿಯೂರಪ್ಪ ಸೇರಿದಂತೆ ಎಲ್ಲರಿಗೂ ಟೆನ್ಶನ್ ಇದೆ. ಅದನ್ನು ಯಡಿಯೂರಪ್ಪ ಅವರು ನಿಭಾಯಿಸಿಕೊಂಡು ಹೋಗುತ್ತಾರೆ ಎಂದು ಸಚಿವೆ ಜೊಲ್ಲೆ ವಿಶ್ವಾಸ ವ್ಯಕ್ತಪಡಿಸಿದರು.