ಬೆಂಗಳೂರು: ಪೇಜಾವರ ಶ್ರೀಗಳ ಆಗಲಿಕೆಯಿಂದ ಕರ್ನಾಟಕ ರಾಜ್ಯ ಬಡವಾಗಿದೆ ಎಂದು ಶಾಸಕ ಎಚ್ ಕೆ ಪಾಟೀಲ್ ಸಂತಾಪ ಸೂಚಿಸಿದ್ದಾರೆ.
ಇಂದು ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಮಾತನಾಡಿದ ಅವರು, ಪೇಜಾವರ ವಿಶ್ವೇಶತೀರ್ಥ ಶ್ರೀಗಳ ಆಗಲಿಕೆ ನಮಗೆ ಬಹಳ ಅಘಾತ ತಂದಿದೆ. ಪೂಜ್ಯರು ರಾಷ್ಟ್ರದ ಖ್ಯಾತ ಸಂತರು. ದೇಶದಲ್ಲಿ ಯಾವುದೇ ಕ್ಲಿಷ್ಟಕರ ಸಮಸ್ಯೆ ಇರಲಿ, ಧರ್ಮ ವೇದಾಂತದ ವಿಚಾರದಲ್ಲಿ ದಿಟ್ಟತನ ತೋರಿದ ಶ್ರೀಗಳು ಇಂದು ನಮ್ಮನ್ನು ಆಗಲಿದ್ದಾರೆ ಎಂದು ತಿಳಿಸಿದರು.
ಸಮಾನತೆ ಸದ್ಭಾವನೆ ಪ್ರಾರ್ಥನೆ ಮೂಲಕ ಎಲ್ಲರ ಮನ ಗೆದ್ದಂತಹವರು ಶ್ರೀಗಳು. ಆದರೆ ಅವರನ್ನು ಕಳೆದುಕೊಂಡು ಕರ್ನಾಟಕ ರಾಜ್ಯ ಇಂದು ಬಡವಾಗಿದೆ. ನಮ್ಮ ತಂದೆ ಕಾಲದಿಂದಲೂ ಕುಟುಂಬದ ಜೊತೆಗೆ ಶ್ರೀಗಳ ನಂಟಿದೆ. ಸ್ವಾಮೀಜಿಯವರ ಆಶೀರ್ವಾದ ಹಾಗೂ ಮಾರ್ಗದರ್ಶನದಿಂದಲೇ ನಾನು ಈ ಮಟ್ಟಕ್ಕೆ ಬೆಳೆದಿದ್ದೇನೆ. ಯಾರೇ ಆಗಲಿ ಶ್ರೀಗಳು ಅವರಿಗೆ ಸರಿಯಾದ ಮಾರ್ಗದರ್ಶನ ಕೊಡುತ್ತಿದ್ದರು. ಈಗ ಅವರ ಮಾರ್ಗದರ್ಶನದಲ್ಲಿ ನಾವು ನಡೆಯುವ ಮೂಲಕ ಅವರ ಆತ್ಮಕ್ಕೆ ನಾವು ಶಾಂತಿ ತರುವ ಕೆಲಸ ಮಾಡಬೇಕಿದೆ ಎಂದರು.