ಕೊಪ್ಪಳ: ಉಸ್ತುವಾರಿ ಬದಲಾವಣೆ ಬಗ್ಗೆ ಅನಾವಶ್ಯಕವಾಗಿ ಚರ್ಚೆ ಮಾಡೋದು ಅರ್ಥ ಇಲ್ಲ. ಮಂತ್ರಿಗಳು ಇಡೀ ರಾಜ್ಯದಲ್ಲಿ ಯಾವ ಜಿಲ್ಲೆ ಕೊಟ್ಟರೂ ಕೆಲಸ ಮಾಡಬೇಕೆಂದು ಗಣಿ ಸಚಿವ ಹಾಲಪ್ಪ ಆಚಾರ್ ಹೇಳಿದರು.
ಜಿಲ್ಲೆಯ ಕನಕಗಿರಿ ತಾಲೂಕಿನ ಮುಸಲಾಪೂರ ಗ್ರಾಮದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆಯಾ ಜಿಲ್ಲೆಯಲ್ಲಿ ಒಳ್ಳೆಯ ಕೆಲಸ ಮಾಡಬೇಕು. ಅನಾವಶ್ಯಕ ಚರ್ಚೆ ಮಾಡಬಾರದು. ಸರ್ಕಾರ ಜವಾಬ್ದಾರಿ ಕೊಟ್ಟಿದೆ. ಬೇರೆ ಜಿಲ್ಲೆಗೂ ಹೋಗಿ ಕೆಲಸ ಮಾಡಬೇಕೆಂದರು.
ಆನಂದ್ ಸಿಂಗ್ ಅಭಿಮಾನಿಗಳು ಅಲ್ಲೇ ಇರಬೇಕು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಅದು ಹೊಸದೇನಲ್ಲ. ಆದರೆ ಆನಂದ್ ಸಿಂಗ್ ಕೊಪ್ಪಳಕ್ಕೆ ಬರುತ್ತಾರೆ. ಇಲ್ಲಿ ಕೆಲಸ ಮಾಡುತ್ತಾರೆ. ಅದರಲ್ಲಿ ಯಾವ ಪ್ರಶ್ನೆ ಇಲ್ಲ ಎಂದ ಅವರು ನಾನು ಖುಷಿಯಿಂದ ಹೋಗುತ್ತಿದ್ದೇನೆ. ಇದರ ಬಗ್ಗೆ ಯಾವುದೇ ಅಸಮಾಧಾನ ಇಲ್ಲ ಎಂದು ಸ್ಪಷ್ಟಪಡಿಸಿದರು.
ಬಸನಗೌಡ ಯತ್ನಾಳ್ ಯಾವಾಗಲೂ ಸುದ್ದಿಯಲ್ಲಿ ಇರುತ್ತಾರೆ. ಅವರ ಬಗ್ಗೆ ನಾನು ಮಾತಾಡುವುದಿಲ್ಲ ಎಂದ ಅವರು, ಸಿದ್ದರಾಮಯ್ಯ ಅವರಿಗೆ ಅವರ ಪಕ್ಷದ ವಿಷಯವೇ ಗೊತ್ತಿಲ್ಲ. ಆದರೂ ಯಾಕೆ ನಮ್ಮ ಬಗ್ಗೆ ತಲೆ ಕೆಡಿಸಿಕೊಂಡಿದ್ದಾರೆ ಗೊತ್ತಾಗುತ್ತಿಲ್ಲ ಎಂದು ಬಿಜೆಪಿ ಶಾಸಕರು ಕಾಂಗ್ರೆಸ್ಗೆ ಸೇರುತ್ತಾರೆ ಎಂಬ ಹೇಳಿಕೆಗೆ ಟಾಂಗ್ ನೀಡಿದರು. ಇದನ್ನೂ ಓದಿ: ವರಿಷ್ಠರ ಸೂಚನೆ ಮೇರೆಗೆ ಜಿಲ್ಲಾ ಉಸ್ತುವಾರಿ ಹಂಚಿಕೆ: ಸೋಮಣ್ಣ
ಕಾಂಗ್ರೆಸ್ ಸರ್ಕಾರ ಇದ್ದಾಗ ಕೆಲವು ಶಾಸಕರು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿದರು. ಆಗಲೇ ಅವರಿಗೆ ಗೊತ್ತಾಗಲಿಲ್ಲ. ಈಗ ನಮ್ಮ ಬಗ್ಗೆ ಯಾಕೆ ಯೋಚನೆ ಮಾಡುತ್ತಾರೆ ಎನ್ನುವುದು ತಿಳಿಯುತ್ತಿಲ್ಲ ಎಂದು ವ್ಯಂಗ್ಯವಾಡಿದ ಅವರು 2023ರವರೆಗೂ ಬೊಮ್ಮಾಯಿ ಅವರೇ ಮುಖ್ಯಮಂತ್ರಿ ಆಗಿರುತ್ತಾರೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಬಿಜೆಪಿಯಲ್ಲಿ ಉಸ್ತುವಾರಿ ಸಚಿವರ ಕಿತ್ತಾಟ – ಮಾಧುಸ್ವಾಮಿ, ಸೋಮಣ್ಣ, ಎಂಟಿಬಿಗೆ ಅಸಮಾಧಾನ