ಚೆನ್ನೈ: ಯುವಕನೊಬ್ಬ ತನ್ನ ಕೈಯನ್ನು ಸೀಳಿಕೊಂಡು ಪ್ರಿಯತಮೆಗೆ ತನ್ನ ರಕ್ತವನ್ನು ಕೊನೆಯ ಉಡುಗೊರೆಯಾಗಿ ಕೊಟ್ಟಿರುವ ಘಟನೆ ತಮಿಳುನಾಡಿನ ನಂಗನಲ್ಲೂರಿನಲ್ಲಿ ನಡೆದಿದೆ.
ಈ ಘಟನೆ ಬುಧವಾರ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಕೈ ಸೀಳಿಕೊಂಡ ಪಾಗಲ್ ಪ್ರೇಮಿಯನ್ನು ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಕುಮಾರೆಸಾ ಪಾಂಡಿಯನ್ ಎಂದು ಗುರುತಿಸಲಾಗಿದೆ. ತನ್ನ ಗೆಳತಿ ನನ್ನ ಜೊತೆ ಮಾತನಾಡುತ್ತಿಲ್ಲ ಎಂಬ ಕಾರಣಕ್ಕೆ ಈ ಹುಚ್ಚು ಸಾಹಸಕ್ಕೆ ಕೈ ಹಾಕಿ ಮೃತಪಟ್ಟಿದ್ದಾನೆ.
ಪಾಂಡಿಯನ್ ಕಳೆದ ಕೆಲ ವರ್ಷಗಳಿಂದ ಯುವತಿಯನ್ನು ಪ್ರೀತಿ ಮಾಡುತ್ತಿದ್ದ. ಆದರೆ ಕೆಲ ದಿನಗಳಿಂದ ಯಾವುದೋ ಕಾರಣಕ್ಕೆ ಯುವತಿ ಆತನ ಜೊತೆ ಮಾತನಾಡುವುದನ್ನು ಬಿಟ್ಟಿದ್ದಾಳೆ ಮತ್ತು ಅವನ ನಂಬರ್ ನ್ನು ಬ್ಲಾಕ್ ಮಾಡಿದ್ದಾಳೆ. ಇದರಿಂದ ಮನನೊಂದ ಆತ ಕೆಲ ದಿನಗಳಿಂದ ಖಿನ್ನತೆಗೆ ಒಳಗಾಗಿದ್ದ. ಇದೇ ಕಾರಣದಿಂದ ಪಾಂಡಿಯನ್ ಜನರ ಜೊತೆ ಸ್ನೇಹಿತ ಜೊತೆ ಮಾತನಾಡದೇ ಖಿನ್ನತೆಯಿಂದ ಬಳಲುತ್ತಿದ್ದ ಎಂದು ಅವರ ಸ್ನೇಹಿತರು ಹೇಳಿದ್ದಾರೆ.
ಹೀಗೆ ಖಿನ್ನತೆಗೆ ಒಳಗಾಗಿದ್ದ ಪಾಂಡಿಯನ್ ಮಂಗಳವಾರ ತನ್ನ ಸ್ನೇಹಿತ ಮುತ್ತುಗೆ ಕರೆಮಾಡಿ ಭೇಟಿಯಾಗಲು ಹೇಳಿದ್ದಾನೆ. ಇಬ್ಬರು ಒಂದು ಸ್ಥಳದಲ್ಲಿ ಭೇಟಿಯಾಗಿ ಮದ್ಯಪಾನ ಮಾಡಿದ್ದಾರೆ. ಆಗ ಪಾಂಡಿಯನ್ ತನ್ನ ಗೆಳತಿಯ ಬಗ್ಗೆ ಮಾತನಾಡಲು ಪ್ರಾರಂಭಿಸಿದ್ದಾನೆ. ಈ ನಡುವೆ ಬಿಯರ್ ಬಾಟಲ್ನ್ನು ಒಡೆದು ಆದರ ಗಾಜಿನಿಂದ ತನ್ನ ಕೈಯನ್ನು ಚುಚ್ಚಿದ್ದಾನೆ.
ಇದನ್ನು ತಡೆಯಲು ಹೋದ ಸ್ನೇಹಿತನಿಗೆ ಅದೇ ಬಾಟಲ್ ಹಿಡಿದು ಬೆದರಿಕೆ ಹಾಕಿದ್ದಾನೆ. ನಂತರ ಕೈಯಿಂದ ಬರುತ್ತಿದ್ದ ರಕ್ತವನ್ನು ಅಲ್ಲೇ ಇದ್ದ ಮದ್ಯದ ಬಾಟಲಿಗೆ ಅದನ್ನು ತುಂಬಿಸಿ, ಬಾಟಲಿಯನ್ನು ಸ್ನೇಹಿತ ಮುತ್ತುಗೆ ಕೊಟ್ಟು ಇದನ್ನು ತೆಗೆದುಕೊಂಡು ಹೋಗಿ ನನ್ನ ಗೆಳತಿಗೆ ಕೊಡು ಮತ್ತು ಇದು ನನ್ನ ಕೊನೆಯ ಗಿಫ್ಟ್ ಎಂದು ಹೇಳು ಎಂದು ಹೇಳಿದ್ದಾನೆ.
ರಕ್ತಸ್ರಾವದ ನಂತರ ಕುಸಿದು ಬಿದ್ದ ಪಾಂಡಿಯನ್ ಅನ್ನು ಮುತ್ತು ಕ್ರೋಮ್ಪೇಟ್ನ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಬಂದಿದ್ದಾನೆ. ಈ ವೇಳೆ ಮತ್ತೆ ಎಚ್ಚರಗೊಂಡ ಪಾಂಡಿಯನ್ ವೈದ್ಯರಿಗೆ ಚಿಕಿತ್ಸೆ ನೀಡಲು ಬಿಡದೇ ಅಲ್ಲೂ ತನ್ನ ಕೋಪ ತೋರಿಸಿದ್ದಾನೆ. ಈ ವೇಳೆ ತೀವ್ರ ರಕ್ತಸ್ರಾವಗೊಂಡು ಪಾಂಡಿಯನ್ ಬುಧವಾರ ಬೆಳಗ್ಗೆ ಸುಮಾರು 1.30ರ ಸುಮಾರಿಗೆ ಸಾವನ್ನಪ್ಪಿದ್ದಾನೆ ಎಂದು ಪೊಲೀಸರು ಹೇಳಿದ್ದಾರೆ.
ಈ ಸಂಬಂಧ ಶಂಕರ್ ನಗರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಹೆಚಿನ ತನಿಖೆ ಮಾಡುತ್ತಿದ್ದಾರೆ.