ಕಾರವಾರ: ಉತ್ತರ ಕನ್ನಡ (Uttara Kannada) ಜಿಲ್ಲೆಯ ಕರಾವಳಿ ಭಾಗದಲ್ಲಿ ಈ ಹಿಂದಿನಿಂದಲೂ ಸ್ಯಾಟ್ಲೈಟ್ ಫೋನ್ (Satellite Phone) ಆಕ್ಟೀವ್ ಆಗಿದ್ದು ಕೇಂದ್ರದ ಗುಪ್ತದಳ, ಸ್ಥಳೀಯ ಪೊಲೀಸರಿಗೆ (Police) ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಅದಕ್ಕಾಗಿ ಕೋಸ್ಟ್ ಗಾರ್ಡ್ನ (Coast Guard) ಭದ್ರತಾ ಶಕ್ತಿಯನ್ನ ಮತ್ತಷ್ಟು ಹೆಚ್ಚಿಸಲು ಭಾರತ ಸರ್ಕಾರ ಯೋಜನೆ ರೂಪಿಸಿದೆ ಎಂದು ಭಾರತೀಯ ತಟರಕ್ಷಕ ಪಡೆಯ ಪಶ್ಚಿಮ ವಲಯ ಕಮಾಂಡರ್ ಮನೋಜ್ ಬಾಡ್ಕರ್ ತಿಳಿಸಿದ್ದಾರೆ.
ಕಾರವಾರದ (Karwar) ಕೋಸ್ಟ್ಗಾರ್ಡ್ ಕಚೇರಿಗೆ ಆಗಮಿಸಿದ್ದ ಮನೋಜ್ ಬಾಡ್ಕರ್ ಈ ಕುರಿತು ಪ್ರತಿಕ್ರಿಯಿಸಿದ್ದಾರೆ. ಕೋಸ್ಟ್ ಗಾರ್ಡ್ನ ಭದ್ರತಾ ಶಕ್ತಿ ಮತ್ತಷ್ಟು ಹೆಚ್ಚಿಸಲು ಕೇಂದ್ರ ಸರ್ಕಾರ (Central Government) ಯೋಜನೆ ರೂಪಿಸಿದೆ. ಅದಕ್ಕಾಗಿ ಕೋಸ್ಟಲ್ ಸೆಕ್ಯುರಿಟಿ ಮೆಕ್ಯಾನಿಸಂ ರೂಪಿಸಲಾಗಿದೆ. ಇದರಲ್ಲಿ ಕೋಸ್ಟ್ ಚೈನ್ ಆ್ಯಪ್ ಸ್ಟಾಟಿಸ್ಟಿಕ್ಸ್ ಚೈನ್ ಸೆನ್ಸಾರ್ ಇದೆ. 30 ನಾಟಿಕಲ್ ಮೈಲ್ನಲ್ಲಿ ಒಂದೊಂದು ರೆಡಾರ್ ಇದೆ. ಅಲ್ಲಿ ಸಿಸಿ ಕ್ಯಾಮೆರಾ ಕೂಡ ಇರುತ್ತದೆ. ಯಾವುದೇ ಬೋಟ್ಗಳು ರೆಡಾರ್ ಹತ್ತಿರ ಬರುತ್ತಿದ್ದಂತೆ ಗೊತ್ತಾಗುತ್ತದೆ. ಇದು ಸಮುದ್ರದಲ್ಲಿ (Sea) ಭದ್ರತಾ ದೃಷ್ಟಿಯಿಂದ ಮತ್ತಷ್ಟು ಉಪಯೋಗವಾಗುತ್ತದೆ. 200 ನಾಟಿಕಲ್ ಮೈಲಿವರೆಗೆ ಸಮುದ್ರದಲ್ಲಿ ಪೆಟ್ರೋಲ್ ಚೈನ್ (Petrol Chain) ಸಹ ಇದೆ ಎಂದು ವಿವರಿಸಿದ್ದಾರೆ.
5ಕ್ಕೂ ಹೆಚ್ಚು ಸ್ಯಾಟ್ಲೈಟ್ ಫೋನ್ ವಶ:
ತೈಮೋರ್ ಸ್ಯಾಟ್ಲೈಟ್ ಫೋನ್ಗಳನ್ನ (Satellite Phone) ಎಲ್ಲಾ ದೇಶಗಳಲ್ಲಿ ಉಪಯೋಗಿಸಲು ಅವಕಾಶವಿದೆ. ಆದರೇ ನಮ್ಮ ದೇಶದಲ್ಲಿ ಮಾತ್ರ ನಿಷೇಧವಿದೆ. ಹೀಗಾಗಿ ವಿದೇಶದಿಂದ ಬಂದ ಹಡಗುಗಳು ಭಾರತದ ಗಡಿ ಪ್ರವೇಶಿಸಿದ ನಂತರ ಈ ಫೋನ್ಗಳನ್ನ ಸೀಲ್ಡ್ ಮಾಡಿ ಇಡಬೇಕು. ಕೆಲವು ಬಾರಿ ಗೊತ್ತಿಲ್ಲದೇ ಉಪಯೋಗಿಸುತ್ತಾರೆ. ಇಂತಹ 5ಕ್ಕೂ ಹೆಚ್ಚು ಸ್ಯಾಟ್ಲೈಟ್ ಫೋನ್ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.
ಕರಾವಳಿ ಪ್ರದೇಶದಲ್ಲಿ ಪ್ರತಿ 30 ಮೈಲಿಗೆ ಒಂದು ರೆಡಾರ್ ಹಾಕಲಾಗಿದೆ. ಇದರೊಂದಿಗೆ ಕ್ಯಾಮೆರಾ (Camera) ಅಳವಡಿಸಲಾಗಿದೆ. ಅಂಕೋಲ ತಾಲೂಕಿನ ಬೇಲಿಕೇರಿ ಬಂದರಿನಲ್ಲಿ ರೆಡಾರ್ (Redar) ಹಾಕುತ್ತೇವೆ. ಮೀನುಗಾರರು ಸಮುದ್ರದ ಭದ್ರತಾ ದೃಷ್ಟಿಯಿಂದ ಕಣ್ಣು, ಕಿವಿ ಇದ್ದಂತೆ. ಮೀನುಗಾರರ ರಕ್ಷಣೆಗಾಗಿ ನಾವು ಕೆಲಸ ಮಾಡುತ್ತೇವೆ. ಈ ವರ್ಷದಲ್ಲಿ ಕೋಸ್ಟ್ ಗಾರ್ಡ್ ವಲಯದಲ್ಲಿ 720 ಜನರ ಜೀವ ರಕ್ಷಣೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಕಾರವಾರದಲ್ಲಿ ಕೋಸ್ಟ್ ಗಾರ್ಡ್ಗೆ ಸಂಬಂಧಿಸಿದ ಸ್ವಂತ ಕಟ್ಟಡವಿಲ್ಲ. ಹಾಗಾಗಿ ಕಡಲ ತೀರದಲ್ಲೇ ಸ್ವಂತ ಕಟ್ಟಡ ನಿರ್ಮಾಣ ಮಾಡಲು ಪ್ರಯತ್ನಿಸುತ್ತಿದ್ದೇವೆ. ಆದರೆ ಇದಕ್ಕೆ ಮೀನುಗಾರರ ವಿರೋಧವಿದ್ದು, ಮನವೊಲಿಸುವ ಪ್ರಯತ್ನವೂ ನಡೆಯುತ್ತಿದೆ. ಈಗಾಗಲೇ ಅಮದಳ್ಳಿಯಲ್ಲಿ 26 ಎಕರೆ ಪ್ರದೇಶ ಖರೀದಿ ಮಾಡಿದ್ದು, 2 ವರ್ಷಗಳಲ್ಲಿ ಕಟ್ಟಡ ಕಾಮಗಾರಿ ಮುಗಿಯಲಿದೆ ಎಂದು ತಿಳಿಸಿದ್ದಾರೆ.