ಕೊಪ್ಪಳ: ಶಿವಪುರ ಬಳಿ ಇರುವ ತುಂಗಭದ್ರಾ ನದಿಯ ನಡುಗಡ್ಡೆಯಲ್ಲಿ ಸಿಲುಕಿದ್ದ ಜಾನುವಾರುಗಳನ್ನು ಅಗ್ನಿಶಾಮಕ ದಳದ ಸಿಬ್ಬಂದಿ ರಕ್ಷಣೆ ಮಾಡಿದ್ದಾರೆ
ತುಂಗಭದ್ರಾ ಡ್ಯಾಂ ನಿಂದ ಒಂದು ಲಕ್ಷ ಕ್ಯೂಸೆಕ್ ಗೂ ಅಧಿಕ ಪ್ರಮಾಣದ ನೀರು ನದಿಗೆ ಬಿಡುಗಡೆ ಮಾಡಲಾಗಿದ್ದ ಕಾರಣ ನದಿ ದಾಟಲು ಆಗದೇ ನಡುಗಡ್ಡೆಯಲ್ಲಿ ಮೂಕಪ್ರಾಣಿಗಳು ಸಿಲುಕಿಕೊಂಡು ಮಳೆ ಚಳಿಗೆ ರೋಧಿಸುತ್ತಿದ್ದವು. ಸರಿಯಾಗಿ ಅವುಗಳಿಗೆ ಆಹಾರವಿಲ್ಲದೆ ನಿತ್ರಾಣಗೊಂಡಿದ್ದವು. ಈ ಹಿನ್ನೆಲೆ ಅಲ್ಲಿನ ಜಾನುವಾರು ಪಾಲಕರು ಕರೆ ಮಾಡಿ ತಮ್ಮ ಪರಿಸ್ಥಿತಿಯ ಬಗ್ಗೆ ಕೇಳಿಕೊಂಡಾಗ ಜಿಲ್ಲಾಧಿಕಾರಿಗಳು ಅವರ ರಕ್ಷಣೆಗೆ ಮುಂದಾಗಿದ್ದಾರೆ. ಇದನ್ನೂ ಓದಿ: ಅಕಾಲಿಕ ಮಳೆ – ಬಿಬಿಎಂಪಿ ಮುಖ್ಯ ಕಚೇರಿಯಲ್ಲಿ ಸಭೆ ಕರೆದ ಸಿಎಂ
ಅಗ್ನಿಶಾಮಕ ಸಿಬ್ಬಂದಿ ಬೋಟ್ ಮೂಲಕ ಜನರನ್ನು, ಜಾನುವಾರುಗಳನ್ನು ಮತ್ತು ಅವರ ಸಾಮಾಗ್ರಿಗಳನ್ನು ಸಾಗಿಸಿ ರಕ್ಷಿಸಿದ್ದಾರೆ.
ಈ ಕುರಿತು ಮಾತನಾಡಿದ ಜಾನುವಾರು ಪಾಲಕರು, ನಾವು 15 ದಿನಗಳ ಹಿಂದೆಯೇ ಆ ದಡಕ್ಕೆ ಹೋಗಿದ್ದೆವು. ನಾವು ಅಲ್ಲಿ ಹೋಗಿದ 10 ದಿನದ ಬಳಿಕ ಇಲ್ಲಿ ಪೂರ್ತಿಯಾಗಿ ನೀರು ತುಂಬಿಕೊಂಡಿದೆ. ಅದು ಅಲ್ಲದೇ ನಾವು ತೆಗೆದುಕೊಂಡು ಹೋಗಿದ್ದ ದಿನಸಿಗಳು ಸಹ ಖಾಲಿಯಾಗಿ, ಜಾನುವಾರುಗಳಿಗೂ ಮೇವಿನ ಸಮಸ್ಯೆ ಉಂಟಾಯಿತು. ಈ ಹಿನ್ನೆಲೆ ನಾವು ಕರೆ ಮಾಡಿ ರಕ್ಷಣೆ ಮಾಡುವಂತೆ ಮನವಿ ಮಾಡಿಕೊಂಡೆವು ಎಂದು ತಿಳಿಸಿದರು.
ಈ ವೇಳೆ ಸರಿಯಾದ ರಕ್ಷಣೆಯಿಲ್ಲದೇ ಕೆಲವು ಜಾನುವಾರುಗಳು ಮೃತಪಟ್ಟಿದ್ದು, ಇನ್ನುಳಿದ ಜಾನುವಾರುಗಳ ಚಿಕಿತ್ಸೆಗೆ ಪಶು ವೈದ್ಯರ ಅವಶ್ಯಕತೆ ಇದೆ ಎಂದು ತಿಳಿಸಿದ್ದೇವೆ ಎಂದರು. ಇದನ್ನೂ ಓದಿ: ನಡುಗಡ್ಡೆಯಲ್ಲಿ ಸಿಲುಕಿದ 500 ದನಕರುಗಳು – ಹಸುಗಳನ್ನು ಕಾಪಾಡುವಂತೆ ಡಿಸಿಗೆ ಮನವಿ