ಶಿವಮೊಗ್ಗ: ಪಿಎಫ್ಐ ಮತ್ತು ಸಿಎಫ್ಐ ಸಂಘಟನೆಗಳು ನಿಷೇಧ ಆಗಿದ್ದರೂ, ಸಿಎಫ್ಐಗೆ ಸೇರುವಂತೆ ಗೋಡೆ ಬರಹ ಬರೆದಿರುವುದು ದುರದೃಷ್ಟಕರ ಎಂದು ಸಂಸದ ಬಿ.ವೈ. ರಾಘವೇಂದ್ರ (BY Raghavendra) ತಿಳಿಸಿದರು.
ಶಿವಮೊಗ್ಗದಲ್ಲಿ (Shivamogga) ಮಾಧ್ಯಮದವರ ಜೊತೆ ಮಾತನಾಡಿದ ಅವರು, ಶಿರಾಳಕೊಪ್ಪದಲ್ಲಿ ಸಿಎಫ್ಐ ಸಂಘಟನೆ ಸೇರುವಂತೆ ಆಗ್ರಹಿಸಿ ಕೆಲವು ಕಿಡಿಗೇಡಿಗಳು ಗೋಡೆ ಬರಹ ಬರೆದಿದ್ದಾರೆ. ಇಂತಹ ಕೃತ್ಯ ಮಾಡುವ ಸಂಘಟನೆಗಳನ್ನು ಸರ್ಕಾರ ನಿಷೇಧ ಮಾಡಿದೆ. ಪಿಎಫ್ಐ, ಸಿಎಫ್ಐ ಸಂಘಟನೆಯನ್ನು ಕೇಂದ್ರ ಸರ್ಕಾರ ಬ್ಯಾನ್ ಮಾಡಿತ್ತು. ಇದನ್ನು ಪ್ರಶ್ನಿಸಿ, ಕೆಲವರು ಕೋರ್ಟಿಗೂ ಹೋಗಿದ್ದರು. ಆದರೆ, ಕೋರ್ಟ್ ಸರ್ಕಾರದ ನಿರ್ಧಾರ ಸರಿಯಾಗಿದೆ ಎಂದು ಹೇಳಿದೆ ಎಂದರು.
ದೇಶ ವಿರೋಧಿ ಕೃತ್ಯ ಮಾಡುವವರ ವಿರುದ್ಧ ಕ್ರಮಕ್ಕೆ ಸರ್ಕಾರ ನಿರ್ಧರಿಸಿದೆ. ಈಗಲೂ ಕೂಡ ದೇಶ ವಿರೋಧಿ ಕೃತ್ಯಗಳು ಅಲ್ಲೊಂದು ಇಲ್ಲೊಂದು ನಡೀತಾ ಇದೆ. ಅದರ ಉದಾಹರಣೆಯೇ ಶಿರಾಳಕೊಪ್ಪದಲ್ಲಿ ನಡೆದ ಘಟನೆಯಾಗಿದೆ. ಶಿರಾಳಕೊಪ್ಪದ ಗೋಡೆ ಬರಹದ ಬಗ್ಗೆ ಪೊಲೀಸರು ಸುಮೋಟೋ ಕೇಸ್ ದಾಖಲಿಸಿಕೊಂಡಿದ್ದಾರೆ. ಇಂತಹದರ ವಿರುದ್ಧ ಸರ್ಕಾರ ಕ್ರಮ ಕೈಗೊಳ್ಳುತ್ತೆ. ಈವರೆಗೆ ಆಳ್ವಿಕೆ ನಡೆಸಿದವರು ಪೋಷಿಸಿದ ಪ್ರತಿಫಲವಾಗಿ ಇದೆಲ್ಲ ನಡೆಯುತ್ತಿದೆ ಎಂದರು. ಇದನ್ನೂ ಓದಿ: ಗುಜರಾತ್ ಚುನಾವಣೆ- ತಾಯಿಯ ಆಶೀರ್ವಾದ ಪಡೆದ ಮೋದಿ
ದೇಶವಿರೋಧಿ ಚಿಂತನೆಗಳನ್ನು ಮುಸ್ಲಿಂ ಸಮಾಜದ ಮುಖಂಡರೇ ಸರಿ ಮಾಡಬೇಕು. ದೇಶ ವಿರೋಧಿ ಚಟುವಟಿಕೆ ನಡೆಸುವವರಿಗೆ ಮುಸ್ಲಿಂ ಮುಖಂಡರೇ ಬುದ್ಧಿ ಹೇಳಿ ಸರಿ ಮಾಡಬೇಕು. ಇಲ್ಲದಿದ್ದರೆ ಸರ್ಕಾರ ಇಂತಹವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಿದೆ ಎಂದರು. ಇದನ್ನೂ ಓದಿ: ಶಾಲಾ ಪಠ್ಯದಲ್ಲಿ ಭಗವದ್ಗೀತೆ ಸೇರಿಸಬೇಕು: ವಿಶ್ವೇಶ್ವರ ಹೆಗಡೆ ಕಾಗೇರಿ