ಶಿವಮೊಗ್ಗ: ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಸಂಬಂಧ ರಾಷ್ಟ್ರ ಹಾಗೂ ರಾಜ್ಯದಲ್ಲಿ ಭಾರೀ ಗದ್ದಲ ಎದ್ದಿದ್ದು, ಪಟ್ಟಭದ್ರ ಹಿತಾಸಕ್ತಿಗಳು ಗಲಭೆ ನಡೆಸುತ್ತಿವೆ ಎಂದು ಸಂಸದ ಬಿ.ವೈ.ರಾಘವೇಂದ್ರ ಆರೋಪಿಸಿದ್ದಾರೆ.
ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪೊಲೀಸ್ ಇಲಾಖೆಯನ್ನು ಗುರಿಯನ್ನಾಗಿಸಿ ದಾಳಿ ನಡೆಸಲಾಗುತ್ತಿದೆ. ಪೌರತ್ವ ಮಸೂದೆ ಕಾಯ್ದೆಯಾಗಿ ಹೊರಬಂದ ನಂತರ ಕೆಲ ರಾಜಕೀಯ ಪಕ್ಷಗಳ ಪಿತೂರಿಯಿಂದ ಗಲಭೆಗಳು ನಡೆಯುತ್ತಿವೆ ಎಂದರು.
ಪಾಕಿಸ್ತಾನ, ಬಾಂಗ್ಲಾದೇಶದ ಜನತೆಗೆ ಪೌರತ್ವ ನೀಡುವ ವಿಚಾರದಲ್ಲಿ ಚರ್ಚೆ ನಡೆದು ಈಗಾಗಲೇ, ತೀರ್ಮಾನಕ್ಕೆ ಬರಲಾಗಿದೆ. ಹೀಗಿದ್ದರೂ ಕಾಂಗ್ರೆಸ್ ನಾಯಕರು ಮನಬಂದಂತೆ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಸಿಕ್ಕ ಸಿಕ್ಕವರ ಮೇಲೆ ಹಲ್ಲೆ ನಡೆಸಿ ಮಾರಣ ಹೋಮ ನಡೆಸಿದ್ದು, ಭೂಪಾಲ್ ಸೇರಿದಂತೆ, ಹಲವು ಗಲಭೆಗಳು ಯಾರ ಅಧಿಕಾರದ ಅವಧಿಯಲ್ಲಿ ನಡೆದಿದೆ ಎಂಬುದು ಪ್ರಪಂಚಕ್ಕೆ ತಿಳಿದಿದೆ ಎಂದು ಕಿಡಿ ಕಾರಿದರು.
ಕಾಂಗ್ರೆಸ್ಸಿನವರಿಂದ ನಾವುಗಳು ಪಾಠ ಕಲಿಯುವ ಅಗತ್ಯವಿಲ್ಲ. ವಿರೋಧ ಪಕ್ಷದ ಮುಖಂಡರುಗಳು ರಾಜ್ಯವನ್ನು ಶಾಂತಿಯಾಗಿಸುವ ನಿಟ್ಟಿನಲ್ಲಿ ಕೈ ಜೋಡಿಸಬೇಕು. ರಾಜಕೀಯ ದುರುದ್ದೇಶದಿಂದ ಕಪ್ಪು ಚುಕ್ಕೆ ಇಡುವ ಕೆಲಸ ಮಾಡಬಾರದು. ಸಾರ್ವಜನಿಕರು ಸಹ ರಾಜಕೀಯ ಪ್ರಚೋದನೆಗೆ ಒಳಗಾಗಬಾರದು. ಅಲ್ಲದೆ ಪ್ರತಿಭಟನೆ ನಡೆಸುವವರು ಕಾಯ್ದೆ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ನಂತರ ಬೀದಿಗಿಳಿದು ಪ್ರತಿಭಟನೆ ನಡೆಸಲಿ ಎಂದು ಮನವಿ ಮಾಡಿದರು.