ಲಕ್ನೋ: ಹಿಂಸಾಚಾರದ ಆರೋಪಿಗಳ ವಿರುದ್ಧ ʼಬುಲ್ಡೋಜರ್ ಕಾರ್ಯಾಚರಣೆʼ ನಡೆಸುತ್ತೇವೆಂದು ಹೇಳಿ ಅಮಾಯಕರ ಮನೆಗಳನ್ನೂ ಧ್ವಂಸ ಮಾಡಲಾಗುತ್ತಿದೆ ಎಂಬ ವಿವಾದಕ್ಕೆ ಉತ್ತರ ಪ್ರದೇಶ ಸರ್ಕಾರ ಸಿಲುಕಿತ್ತು. ಆದರೆ ಈ ಯೋಜನೆಯನ್ನು ಪೊಲೀಸರು ಸಕಾರಾತ್ಮಕ ಕಾರ್ಯಗಳಿಗೆ ಬಳಿಸಿಕೊಂಡಿದ್ದಾರೆ.
ಹೌದು, ವರದಕ್ಷಿಣೆಗಾಗಿ ಪತಿ ಮನೆಯಿಂದ ಹೊರಹಾಕಲ್ಪಟ್ಟ ಮಹಿಳೆಗೆ ಸಹಾಯ ಮಾಡಲು ಪೊಲೀಸರು ಮೊದಲ ಬಾರಿಗೆ ʼಬುಲ್ಡೋಜರ್ ಆಪರೇಷನ್ʼ ಪ್ಲ್ಯಾನ್ ಬಳಸಿಕೊಂಡಿದ್ದಾರೆ. ಸಂತ್ರಸ್ತೆ ತನ್ನ ಗಂಡನ ಮನೆಗೆ ಮರಳಲು ಸಹಾಯ ಮಾಡುವಂತೆ ಅಲಹಾಬಾದ್ ಹೈಕೋರ್ಟ್ ಆದೇಶಿಸಿದ ನಂತರ ಬಿಜ್ನೋರ್ ಜಿಲ್ಲೆಯ ಮನೆಯ ಮುಂದೆ ಬುಲ್ಡೋಜರ್ ಘರ್ಜಿಸಿದೆ. ಇದನ್ನೂ ಓದಿ: ಚಿರಯುವಕರಂತೆ ವಾಲಿಬಾಲ್ ಆಡಿದ ಭಗವಂತ್ ಮಾನ್ – ವೀಡಿಯೋ ವೈರಲ್
ಮಹಿಳೆ ನೂತನಾ ಮಲಿಕ್ ಪತಿ ರಾಬಿನ್ ನಿವಾಸಕ್ಕೆ ಪೊಲೀಸರು ಭೇಟಿ ನೀಡಿದ್ದಾರೆ. ಈ ವೇಳೆ ಕುಟುಂಬದವರಿಗೆ ನ್ಯಾಯಾಲಯದ ಆದೇಶದ ಕುರಿತು ಮನವರಿಕೆ ಮಾಡಿದ್ದಾರೆ. ಆದೇಶ ಪಾಲಿಸದಿದ್ದರೆ ಬುಲ್ಡೋಜರ್ ಆಪರೇಷನ್ ಮಾಡುವ ಎಚ್ಚರಿಕೆ ಕೂಡ ನೀಡಿದ್ದಾರೆ. ಈ ಸಂದರ್ಭದಲ್ಲಿ ಮನೆಯ ಹೊರಗಡೆ ಬುಲ್ಡೋಜರ್ ಇರುವ ದೃಶ್ಯದ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಖ್ಯಾತ ಅರ್ಥಶಾಸ್ತ್ರಜ್ಞ ಅಭಿಜಿತ್ ಸೇನ್ ನಿಧನ
ಮಹಿಳೆಯ ಗಂಡನ ಮನೆಯವರು ಬಾಗಿಲು ಹಾಕಿಕೊಂಡಿದ್ದರು. ʻನಾವು ನಿಮ್ಮನ್ನು ವಿನಂತಿಸುತ್ತೇವೆ ಅಮ್ಮಾ.. ದಯವಿಟ್ಟು ಬಾಗಿಲು ತೆರೆಯಿರಿ. ಇದು ಹೈಕೋರ್ಟ್ನ ಆದೇಶʼ ಎಂದು ಅಧಿಕಾರಿಯೊಬ್ಬರು ಧ್ವನಿವರ್ಧಕದಲ್ಲಿ ಹೇಳುತ್ತಿರುವ ದೃಶ್ಯ ವೀಡಿಯೋದಲ್ಲಿದೆ.
ಪೊಲೀಸ್ ತಂಡವು ಮಹಿಳೆ ತನ್ನ ಅತ್ತೆಯ ಮನೆಗೆ ಮರಳಲು ಸಹಾಯ ಮಾಡಿದೆ. ಈಗ ಪರಿಸ್ಥಿತಿ ತಿಳಿಗೊಂಡಿದೆ ಎಂದು ಬಿಜ್ನೋರ್ ಪೊಲೀಸ್ ಅಧೀಕ್ಷಕ (ನಗರ) ಪ್ರವೀಣ್ ರಂಜನ್ ಸಿಂಗ್ ಹೇಳಿದ್ದಾರೆ.
2017ರಲ್ಲಿ ಮದುವೆಯಾದ ಕೆಲವೇ ದಿನಗಳಲ್ಲಿ ಗಂಡನ ಮನೆಯವರು ಕಿರುಕುಳ ನೀಡಲಾರಂಭಿಸಿದರು. 5 ಲಕ್ಷ ಹಾಗೂ ಬೊಲೆರೊ ಕಾರಿಗೆ ಬೇಡಿಕೆ ಇಟ್ಟಿದ್ದರು. ಅವರ ಬೇಡಿಕೆ ಈಡೇರಿಸದ ನನ್ನ ಮಗಳನ್ನು ಥಳಿಸಿ ಮನೆಯಿಂದ ಹೊರಹಾಕಿದ್ದರು. 2019ರಿಂದ ಮಗಳು ನಮ್ಮೊಂದಿಗೆ ವಾಸವಾಗಿದ್ದಳು ಎಂದು ಮಹಿಳೆಯ ತಂದೆ ಆರೋಪಿಸಿದ್ದರು.
ನಿನ್ನೆ ಪೊಲೀಸರು ಅಲ್ಲಿಗೆ ಹೋದಾಗಲೂ ಮನೆಯವರು ಒಂದು ಗಂಟೆಯವರೆಗೂ ಬಾಗಿಲು ತೆರೆಯಲಿಲ್ಲ. ನಂತರ ಪೊಲೀಸರು ಸ್ಥಳಕ್ಕೆ ಬುಲ್ಡೋಜರ್ ತಂದರು. ಆಗ ನನ್ನ ಮಗಳನ್ನು ಮನೆಗೆ ಸೇರಿಸಿಕೊಂಡರು ಎಂದು ಆಕೆ ತಂದೆ ಹೇಳಿದ್ದಾರೆ.