ಬೆಂಗಳೂರು: ತಮ್ಮ ಭೂಮಿ ಕಬಳಿಸಿದ್ದಾರೆ ಎಂದು ಆರೋಪಿಸಿದ ವ್ಯಕ್ತಿಗಳಿಬ್ಬರು ಕೋಲಾರ ಕಾಂಗ್ರೆಸ್ ಸಂಸದ ಕೆ ಹೆಚ್ ಮುನಿಯಪ್ಪ ಮನೆ ಮುಂದೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.
ಬೆಂಗಳೂರಿನ ಯಲಹಂಕದ ನಿವಾಸಿಗಳಾದ ರಾಜು ಮತ್ತು ಮುನಿರಾಜು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ನಗರದ ಸಂಜಯನಗರದಲ್ಲಿರುವ ಸಂಸದರ ಮನೆ ಎದುರು ಪೆಟ್ರೋಲ್ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಈ ವೇಳೆ ಮಾತನಾಡಿದ ಅವರು ಯಲಹಂಕದ ವೆಂಕಟಾಳದಲ್ಲಿರುವ 20 ಕೋಟಿ ರೂ. ಬೆಲೆ ಬಾಳುವ ಭೂಮಿಯನ್ನು ರಾಮಪ್ರಸಾದ್ ಎಂಬ ಮುನಿಯಪ್ಪ ಅವರ ಆಪ್ತ ಕಬಳಿಸಿದ್ದಾರೆ ಎನ್ನುವ ಆರೋಪ ಮಾಡಿದ್ದಾರೆ.
ಆರೋಪ ನಿರಕಾರಿಸಿದ ಸಂಸದ: ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಮಾಜಿ ಸಚಿವರಾದ ಮುನಿಯಪ್ಪ ಅವರು, ನನಗೂ ಈ ಜಮೀನಿಗೂ ಸಂಬಂಧವಿಲ್ಲ. ರಾಮಪ್ರಸಾದ್ ಎಂಬವರ ಹೆಸರಲ್ಲಿ ಜಮೀನಿದೆ. ಅವರು ನಮ್ಮ ಜಿಲ್ಲೆಯವರು ಮತ್ತು ನಮ್ಮ ಪಕ್ಷದ ಮುಖಂಡರಷ್ಟೆ. ನನ್ನ ಮನೆ ಮುಂದೆ ಗಲಾಟೆ ಮಾಡುವುದು ಸರಿಯಲ್ಲ. ರಾಮಪ್ರಸಾದ್ಗೂ ನನಗೂ ಸಂಬಂಧವಿಲ್ಲ. ಆದರೆ ವಿನಾ ಕಾರಣ ನನ್ನ ಹೆಸರನ್ನು ತರುತ್ತಿದ್ದಾರೆ. ರಾಮಪ್ರಸಾದ್ ಸಿಂಗ್ರಿ ಬಿನ್ ಹೊಟ್ಟೆ ಕದರ ಬಳಿ ಖರೀದಿ ಮಾಡಿದ್ದಾರೆ. ಅವರನ್ನು ಈ ಕುರಿತು ಪ್ರಶ್ನೆ ಮಾಡಿ ಎಂದು ಹೇಳಿದ್ದಾರೆ. ಸದ್ಯ ಈ ಪ್ರಕರಣ ನ್ಯಾಯಾಲಯದಲ್ಲಿದೆ ಎಂದರು.
ಕಾಂಗ್ರೆಸ್ ಪಕ್ಷದ ಹಿರಿಯ ಮುತ್ಸದಿ ಎಂದು ಗುರುತಿಸಿಕೊಂಡಿರುವ ಕೆಎಚ್ ಮುನಿಯಪ್ಪ ಅವರು, ಕೇಂದ್ರದ ಮಾಜಿ ರೈಲ್ವೇ ಸಚಿವ ಹಾಗೂ ಕಾಂಗ್ರೆಸ್ ಹೈಕಮಾಂಡ್ ನಲ್ಲಿ ತನ್ನದೇ ಸ್ಥಾನ ಮಾನ ಉಳಿಸಿಕೊಂಡಿರುವ ಸಂಸದರಾಗಿದ್ದು, ಆದರೆ ಇಂದು ಅವರ ಮೇಲೆ ಆರೋಪ ಕೇಳಿ ಬಂದಿದೆ.