ಬೆಳಗಾವಿ: ಮರಾಠಾ ಅಭಿವೃದ್ಧಿ ನಿಗಮ ಅಸ್ತಿತ್ವಕ್ಕೆ ತರಬೇಕು ಎಂದು ಸರ್ಕಾರವನ್ನು ಆಡಳಿತ ಪಕ್ಷದ ಸದಸ್ಯರೇ ಆಗ್ರಹಿಸಿರುವ ಘಟನೆ ಸುವರ್ಣಸೌಧದ ವಿಧಾನಸಭೆ ಅಧಿವೇಶನದಲ್ಲಿ ನಡೆಯಿತು.
ಬಿ.ಎಸ್.ಯಡಿಯೂರಪ್ಪ ಅವಧಿಯಲ್ಲಿ ಘೋಷಣೆ ಮಾಡಲ್ಪಟ್ಟ ಮರಾಠಾ ಅಭಿವೃದ್ಧಿ ನಿಗಮ ಅಸ್ತಿತ್ವಕ್ಕೆ ಬಂದಿಲ್ಲ ಎಂದು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದರು. ಶೂನ್ಯವೇಳೆಯಲ್ಲಿ ಮಾತನಾಡಿದ ಅವರು, ತಕ್ಷಣವೇ ಮರಾಠಾ ಅಭಿವೃದ್ಧಿ ನಿಗಮ ಸ್ಥಾಪನೆಗೆ ಇದೇ ಅಧಿವೇಶನದಲ್ಲೇ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು. ಇದೇ ವೇಳೆ ಯತ್ನಾಳ್ ಪ್ರಸ್ತಾಪಕ್ಕೆ ಸದನದಲ್ಲಿ ಹಲವು ಶಾಸಕರು ಬೆಂಬಲ ಸೂಚಿಸಿದರು. ಇದನ್ನೂ ಓದಿ: ರಾಜ್ಯ ಸರ್ಕಾರದಿಂದ ರೈತ ಸಮುದಾಯಕ್ಕೆ ಶುಭ ಸುದ್ದಿ, ಎಥೆನಾಲ್ ನೀತಿ ಜಾರಿಗೆ ನಿರ್ಣಯ: ಮುನೇನಕೊಪ್ಪ
ಇನ್ನು ಸರ್ಕಾರದ ಉತ್ತರ ನೀಡಲು ಸಚಿವ ಅಶೋಕ್ ಹಿಂದೇಟು ಹಾಕಿದಾಗ, ಅಶೋಕ್ ನೀವು ಆ ಕಡೆ ನೋಡಬೇಡಿ, ನನ್ನ ನೋಡಿ ಉತ್ತರ ಕೊಡಿ ಎಂದು ಸ್ಪೀಕರ್ ಹೇಳಿದರು.
ಬಳಿಕ ಮಾತನಾಡಿದ ಆರ್.ಅಶೋಕ್, ಮರಾಠಾ ನಿಗಮಕ್ಕೆ ಅಧ್ಯಕ್ಷರು ಮತ್ತು ಸದಸ್ಯರ ನೇಮಕಕ್ಕೆ ಕ್ರಮವಹಿಸುತ್ತೇವೆ. ಈಗಾಗಲೇ ಘೋಷಿತ 50 ಕೋಟಿ ರೂ. ಜೊತೆಗೆ ಹೆಚ್ಚುವರಿ ಅನುದಾನ ಕೊಡಿಸುವ ಬಗ್ಗೆ ಕ್ರಮಕೈಗೊಂಡು ಯತ್ನಾಳ್ ಅವರನ್ನು ಸಿಎಂ ಜೊತೆ ಭೇಟಿ ಮಾಡಿಸುತ್ತೇನೆ ಎಂದು ಭರವಸೆ ನೀಡಿದರು. ಇದನ್ನೂ ಓದಿ: ಮುಂದಿನ ವರ್ಷ ಕೆಲ ಶಾಲೆಗಳಲ್ಲಿ NEP ಜಾರಿ: ಬಿ.ಸಿ.ನಾಗೇಶ್