ಬೆಳಗಾವಿ: ಮಿದುಳು ಜ್ವರದಿಂದ ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದ ಬಾಲಕನನ್ನು ಬೆಳಗಾವಿಯ ಯಶ್ ಆಸ್ಪತ್ರೆಗೆ ಕರೆತರಲಾಗಿದೆ.
ಪಬ್ಲಿಕ್ ಟಿವಿಯ ಕಳಕಳಿಯ ಸುದ್ದಿಗೆ ಸ್ಪಂದಿಸಿರುವ ಬೆಳಗಾವಿ ಫೇಸ್ಬುಕ್ ಫ್ರೆಂಡ್ಸ್ ಸರ್ಕಲ್ ತಂಡದವರು ಬಾಲಕನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯ ವೆಚ್ಚವನ್ನು ಭರಿಸಿದ್ದಾರೆ. ಈಗಾಗಲೇ ಬಾಲಕನನ್ನು ನಗರದ ಯಶ್ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯ ಜೋಯಿಡಾ ತಾಲೂಕಿನ ಅಂಬರಡಾ ಗ್ರಾಮದ ಶೈಲೇಶ್(8)ಗೆ ಮಿದುಳು ಜ್ವರ ಬಂದು ಕೋಮಾದಲ್ಲಿದ್ದನು. ಸಾವು ಬದುಕಿನ ಮಧ್ಯೆ ಹೋರಾಟ ನಡೆಸುತ್ತಿದ್ದನು. ಇತ್ತ ಮಗನನ್ನು ಉಳಿಸಿಕೊಳ್ಳಲು ತಂದೆ-ತಾಯಿ ಆಸ್ಪತ್ರೆಗಳಿಗೆ ಅಲೆದಾಡಿ ಕೊನೆಗೆ ದೇವರ ಮೊರೆ ಹೋಗಿದ್ದರು. ಈ ಕುರಿತು ಪಬ್ಲಿಕ್ ಟಿವಿ ಇಂದು ಬೆಳಗ್ಗೆ ಮಾನವೀಯ ಸುದ್ದಿಯನ್ನು ಪ್ರಕಟಿಸಿತ್ತು. ಇದನ್ನೂ ಓದಿ: ನನ್ನ ಮಗನನ್ನು ಉಳಿಸು ದೇವರೇ – ಶಿಲುಬೆ ಮುಂದೆ ಕಂದನನ್ನು ಮಲಗಿಸಿದ ದಂಪತಿ
ಪಬ್ಲಿಕ್ ಟಿವಿ ಸುದ್ದಿಯನ್ನು ಗಮನಿಸಿದ ಫೇಸ್ಬುಕ್ ಫ್ರೆಂಡ್ ಸರ್ಕಲ್ ಯುವಕರು ಕೋಮಾದಲ್ಲಿದ್ದ ಬಾಲಕನನ್ನು ಖಾನಾಪೂರ ತಾಲೂಕಿನ ನಂದಗಡ ಗ್ರಾಮದಿಂದ ಬೆಳಗಾವಿಯ ಯಶ್ ಆಸ್ಪತ್ರೆಗೆ ಅಂಬುಲೆನ್ಸ್ ಮೂಲಕ ಕರೆದುಕೊಂಡು ಬಂದಿದ್ದಾರೆ. ಸದ್ಯ ಯಶ್ ಆಸ್ಪತ್ರೆಯಲ್ಲಿ ಶೈಲೇಶ್ ಆರೋಗ್ಯವನ್ನ ವೈದ್ಯರು ತಪಾಸಣೆ ಮಾಡುತ್ತಿದ್ದಾರೆ.
ಯಶ್ ಆಸ್ಪತ್ರೆಯ ಮುಖ್ಯ ವೈದ್ಯಾಧಿಕಾರಿ ಡಾ.ಎಸ್.ಕೆ.ಪಾಟೀಲ್ ಅವರಿಂದ ಚಿಕಿತ್ಸೆ ಪ್ರಾರಂಭಿಸಲಾಗಿದೆ. ಬಾಲಕನನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಇತ್ತ ಆಸ್ಪತ್ರೆಗೆ ಬೆಳಗಾವಿ ಡಿಎಚ್ಓ ಅವರು ಭೇಟಿ ನೀಡಿ ಮಗುವಿನ ಆರೋಗ್ಯವನ್ನ ಪರಿಶೀಲನೆ ನಡೆಸಿದ್ದಾರೆ. ಮಗವಿನ ಚಿಕಿತ್ಸೆಗೆ ಬೇಕಾದ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಭರವಸೆ ಕೊಟ್ಟಿದ್ದಾರೆ. ಇದನ್ನೂ ಓದಿ: ರಾಜ್ಯಾದ್ಯಂತ ಮುಂದಿನ 4 ದಿನ ಭಾರೀ ಮಳೆ – 18 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್
ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ್ ಕೂಡ ಮಗುವಿನ ಆರೋಗ್ಯ ತಪಾಸಣೆಗೆ ಬೇಕಾದ ಅಗತ್ಯ ಖರ್ಚುವೆಚ್ಚವನ್ನು ಭರಿಸುವುದಾಗಿ ತಿಳಿಸಿದ್ದಾರೆ.