ಮುಂಬೈ: ಈ ದೇಶದಲ್ಲಿ ವಿಭಿನ್ನ ರೀತಿಯ ತಾಲಿಬಾನ್ ವ್ಯವಸ್ಥೆಯನ್ನು ರಚಿಸಲು ಬಿಜೆಪಿ ಬಯಸಿದೆ ಎಂದು ಶಿವಸೇನೆ ಭಾರತೀಯ ಜನತಾ ಪಕ್ಷ (ಬಿಜೆಪಿ)ದ ವಿರುದ್ಧ ವಾಗ್ದಾಳಿ ನಡೆಸಿದೆ.
ಬಿಜೆಪಿ ರಾಷ್ಟ್ರದ ಶಾಂತಿ ಕದಡುವ ಮತಾಂಧತೆಯ ರಾಜಕಾರಣ ಮಾಡುತ್ತಿದೆ ಎಂದು ಶಿವಸೇನೆ ಮುಖವಾಣಿ ಸಾಮ್ನಾ ತನ್ನ ಸಂಪಾದಕೀಯ ಪುಟದಲ್ಲಿ ಬರೆದುಕೊಂಡಿದೆ. ಅಲ್ಲದೇ ಬರೆಯುವ ಮತ್ತು ಓದುವ ಎಲ್ಲದರ ಮೇಲೂ ಸರ್ಕಾರ ಹಿಡಿತವನ್ನು (ಸೆನ್ಸಾರ್) ಸಾಧಿಸಲು ಹೊರಟರೆ, ಪಥರ್ವತ್ ಚಳವಳಿಯನ್ನು ಬಲಪಡಿಸಬೇಕಾಗುತ್ತದೆ ಎಂದು ತಿಳಿಸಿದೆ.
ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್ಸಿಪಿ) ಮುಖ್ಯಸ್ಥ ಶರದ್ ಪವಾರ್ ಹಿಂದೂ ದ್ವೇಷಿ ಎಂದು ಬಿಜೆಪಿ ಆರೋಪಿಸಿತ್ತು. ಈ ಕುರಿತಂತೆ ಶಿವಸೇನೆ, ಜವಾಹರ್ ರಾಥೋಡ್ ಅವರು ಬರೆದ ಪಥರ್ವತ್ ಪದ್ಯದಲ್ಲಿರುವ ಕಾರ್ಮಿಕ ವರ್ಗದ ನೋವನ್ನು ಪ್ರಸ್ತುತಪಡಿಸುವ ಕವಿತೆಯ ಸಾಲುಗಳನ್ನು ಶರದ್ ಪವಾರ್ ಓದಿದ್ದಾರೆ. ಆದರೆ ಅವರ ಬಗ್ಗೆ ತಪ್ಪು ಮಾಹಿತಿಯನ್ನು ಹಬ್ಬಿಸುವ ಸಲುವಾಗಿ ಅವರನ್ನು ಹಿಂದೂ ದ್ವೇಷಿ ಎಂದು ಬಿಂಬಿಸಲಾಗಿದೆ ಎಂದು ಶಿವಸೇನೆ ಸಮರ್ಥಿಸಿಕೊಂಡಿದೆ. ಇದನ್ನೂ ಓದಿ: ಬೇಲ್ನಲ್ಲಿರುವ ಶಾಸಕರ ಪುತ್ರ ನನ್ನ ಪ್ರಾಮಾಣಿಕತೆ ಪ್ರಶ್ನಿಸುತ್ತಿದ್ದಾರೆ: ನಲಪಾಡ್ಗೆ ರಮ್ಯಾ ತಿರುಗೇಟು
ಇತ್ತೀಚೆಗಷ್ಟೇ ಸತಾರಾದಲ್ಲಿ ನಡೆದ ಕಾರ್ಯಕ್ರಮದ ವೇಳೆ ಶರದ್ ಪವಾರ್ ಅವರು, ದೇಶದ ಜನರು ಬುದ್ಧಿವಂತರಾಗಿದ್ದು, ತಪ್ಪಿತಸ್ಥ ರಾಜಕಾರಣಿಗಳಿಗೆ ಹೇಗೆ ತಕ್ಕ ಪಾಠ ಕಲಿಸಬೇಕು ಎಂಬುದು ಅವರಿಗೆ ಗೊತ್ತಿದೆ. ಈ ಹಿಂದೆ ಇಂದಿರಾಗಾಂಧಿ ಅವರು ತುರ್ತು ಪರಿಸ್ಥಿತಿ ಹೇರಿದಾಗ ಜನರು ಮುಂದಿನ ಚುನಾವಣೆಯಲ್ಲಿ ಅವರನ್ನು ಸೋಲಿಸಿ ಮೊರಾರ್ಜಿ ದೇಸಾಯಿ ಮತ್ತು ಅಟಲ್ ಬಿಹಾರಿ ವಾಜಪೇಯಿ ಅವರಿಗೆ ಅಧಿಕಾರ ನೀಡಿದರು ಎಂದು ಹೇಳಿದ್ದರು.
ಈ ವೀಡಿಯೋವನ್ನು ಬಿಜೆಪಿ ತನ್ನ ಟ್ವಿಟ್ಟರ್ನಲ್ಲಿ ಶೇರ್ ಮಾಡಿಕೊಂಡು, ನಾಸ್ತಿಕ ಶರದ್ ಪವಾರ್ ಯಾವಾಗಲೂ ಹಿಂದೂ ಧರ್ಮವನ್ನು ದ್ವೇಷಿಸುತ್ತಾರೆ ಮತ್ತು ಅವರು ಹಿಂದೂ ದೇವರನ್ನು ಅವಮಾನಿಸುತ್ತಾರೆ, ಜಾತಿಪದ್ಧತಿಯಲ್ಲಿ ತೊಡಗಿ ತಮ್ಮ ರಾಜಕೀಯ ಯಶಸ್ಸನ್ನು ಸಾಧಿಸುವುದಿಲ್ಲ ಎಂದು ಟೀಕಿಸಿದೆ. ಇದನ್ನೂ ಓದಿ: ಮೇ 19ಕ್ಕೆ ಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶ ಪ್ರಕಟ
ಈ ಕುರಿತಂತೆ ಶಿವಸೇನೆ, ಬಂಡೆಯಿಂದ ವಿಗ್ರಹವನ್ನು ಕೆತ್ತುವ ಕಾರ್ಮಿಕರ ನೋವಿನ ವಿರುದ್ಧ ಕವಿ ಧ್ವನಿ ಎತ್ತಿದ್ದಾರೆ. ದೇವಾಲಯಕ್ಕೆ ಅವರನ್ನು ಪ್ರವೇಶಿಸದಂತೆ ತಡೆಯುವ ನೋವಿನ ಕಥೆಯನ್ನು ಕವಿತೆಯಲ್ಲಿ ಹೇಳಲಾಗಿದೆ. ಆದರೆ ಕೆಲವರು ತಪ್ಪು ಮಾಹಿತಿಯನ್ನು ಹಬ್ಬಿಸುವ ಸಲುವಾಗಿ ಹೀಗೆಲ್ಲಾ ಶರದ್ ಪವರ್ ಅವರನ್ನು ಹಿಂದೂ ದ್ವೇಷಿ ಎಂದು ಆರೋಪಿಸಲಾಗಿದೆ ಎಂದು ಬಿಜೆಪಿ ವಿರುದ್ಧ ಆಕ್ರೋಶ ಹೊರಹಾಕಿದೆ.