ಬೆಳಗಾವಿ: ಅಧಿವೇಶನದಲ್ಲಿ ಬರಗಾಲ ಚರ್ಚೆಯ ಕಾವು ಜೋರಾಗಿದೆ. ಆದರೆ ಶಾಸಕ ಶ್ರೀರಾಮುಲು ಮಾತ್ರ ಮೌನವಾಗಿ ಎಲ್ಲವನ್ನೂ ವೀಕ್ಷಿಸುತ್ತಾ ಮೊಬೈಲ್ನಲ್ಲಿ ನಿರತರಾಗಿದ್ದರು.
ಬರಗಾಲದ ಮೇಲಿನ ಅಲ್ಪಾವಧಿ ಚರ್ಚೆಯ ಕಾಲವನ್ನು ಹೆಚ್ಚಿಸುವಂತೆ ಬಿ.ಎಸ್.ಯಡಿಯೂಪ್ಪ ಕೇಳಿದರು. ಈ ವೇಳೆ ಶಾಸಕರಾದ ಶಿವಲಿಂಗೇಗೌಡ ಹಾಗೂ ಎಂ.ಪಿ.ರೇಣುಕಾಚಾರ್ಯ ಅವರು ಏಕವಚದಲ್ಲಿಯೇ ಕಿತ್ತಾಡಿಕೊಂಡರು. ಆದರೆ ಶ್ರೀರಾಮುಲು ಮಾತ್ರ ಯಾವುದಕ್ಕೂ ತಲೆ ಕೆಡಿಸಿಕೊಳ್ಳದೆ ಮೌನವಾಗಿಯೇ ಉಳಿದಿದರು.
ಬಳ್ಳಾರಿ ಉಪಚುನಾವಣೆಯ ಬಳಿಕ ಶಾಸಕ ಶ್ರೀರಾಮುಲು ಮೌನಕ್ಕೆ ಜಾರಿದ್ದಾರೆ. ಈ ಚುನಾವಣೆ ಪ್ರಚಾರದ ವೇಳೆ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಶ್ರೀರಾಮುಲು ಅಂತ ಬಿಜೆಪಿ ಮುಖಂಡ ವಿ.ಸೋಮಣ್ಣ ಹೇಳಿದ್ದರು. ಅವರ ಹೇಳಿಕೆಯಿಂದಾಗಿ ಬಿ.ಎಸ್.ಯಡಿಯೂರಪ್ಪ ಶಾಕ್ ಆಗಿದ್ದರು. ಬಳಿಕ ಶ್ರೀರಾಮುಲು ಹಾಗೂ ಬಿ.ಎಸ್.ಯಡಿಯೂರಪ್ಪ ನಡುವೆ ಅಂತರ ಆರಂಭವಾಯಿತು.
ವಿ.ಸೋಮಣ್ಣ ಅವರ ಹೇಳಿಕೆ ಬಿಸಿ ಈಗ ಶ್ರೀರಾಮುಲು ಅವರಿಗೆ ತಟ್ಟಿದೆ. ಹೀಗಾಗಿ ಸದನದ ಒಳಗೂ ಹಾಗೂ ಹೊರಗು ಶ್ರೀರಾಮುಲು ಏಕಾಂಗಿಯಾಗಿ ಉಳಿಯುತ್ತಿದ್ದಾರೆ ಎನ್ನಲಾಗುತ್ತಿದೆ. ಇಂದು ಭೋಜನದ ನಂತರ ನಡೆದ ಕಲಾಪದಲ್ಲಿ ಮೊಬೈಲ್ ಹಿಡಿದು ವಾಟ್ಸಪ್ ನೋಡುತ್ತ ಶ್ರೀರಾಮುಲು ಕಾಲ ಕಳೆದರು. ಬಿಜೆಪಿ ಹಾಗೂ ಕಾಂಗ್ರೆಸ್ ನಾಯಕರು ಪರಸ್ಪರ ವಾಗ್ದಾಳಿ ನಡೆಸುತ್ತಿದ್ದರೂ ಇದಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎನ್ನುವಂತೆ ಮೊಬೈಲ್ನಲ್ಲಿ ಬ್ಯುಸಿಯಾಗಿದ್ದರು.
ಇತ್ತ ಸಹಕಾರ ಸಚಿವ ಬಂಡೆಪ್ಪ ಕಾಶಂಪೂರ್ ಗಡದ್ ನಿದ್ದೆಗೆ ಜಾರಿದ್ದರು. ಅಣ್ಣ ಕರುಣಾಕರರೆಡ್ಡಿ ಬರಗಾಲ ಚರ್ಚೆಯಲ್ಲಿ ಪಾಲ್ಗೊಂಡು ಮಾತಾಡುತ್ತಿದ್ದರೆ ಸಹೋದರ ಸೋಮಶೇಖರರೆಡ್ಡಿ ನಿದ್ದೆಯಲ್ಲಿ ಮುಳುಗಿದ್ದರು. ಭೋಜನದ ನಂತರ ಉಪಸಭಾಪತಿ ಎಂ.ಕೃಷ್ಣಾರೆಡ್ಡಿ ಕಲಾಪ ನಡೆಸುತ್ತಿದ್ದರು. ಈ ವೇಳೆ ಬಿಜೆಪಿ ಹಾಗೂ ಕಾಂಗ್ರೆಸ್ ಶಾಸಕರ ಜಟಾಪಟಿ ಮುಂದುವರಿದಿತ್ತು. ಸಭಾಪತಿ ರಮೇಶ್ ಕುಮಾರ್ ಆಗಮಿಸುತ್ತಿದ್ದಂತೆ ಒಬ್ಬೊರನ್ನೇ ಸಮಾಧಾನ ಮಾಡಿ ಸದನವನ್ನು ಚರ್ಚೆಗೆ ಅಣಿಗೊಳಿಸಿದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್ಲೋಡ್ ಮಾಡಿ: play.google.com/publictv