ಬೆಂಗಳೂರು: ಬಿಜೆಪಿ ಮುಖಂಡರೊಬ್ಬರನ್ನು ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿರೋ ಘಟನೆ ಹೊಸೂರು ಮುಖ್ಯ ರಸ್ತೆಯ ಬಿಟಿಎಲ್ ಕಾಲೇಜು ಮುಂಭಾಗದಲ್ಲಿ ನಡೆದಿದೆ.
35 ವರ್ಷದ ವಾಸು ಕೊಲೆಯಾದ ಬಿಜೆಪಿ ಮುಖಂಡ. ಇಂದು ಬೆಳಗಿನ ಜಾವ ಸುಮಾರು 5 ಗಂಟೆ ವೇಳೆಯಲ್ಲಿ ಈ ಘಟನೆ ನಡೆದಿದೆ. ವಾಸು ಬೊಮ್ಮಸಂದ್ರ ಪುರಸಭೆಯ ಬಿಜೆಪಿಯ ಸದಸ್ಯರಾಗಿದ್ದರು. ರಾಜಕೀಯ ವೈಷಮ್ಯದಿಂದ ಕೊಲೆ ಮಾಡಲಾಗಿದೆ ಎಂದು ತಿಳಿದುಬಂದಿದೆ.
ವಾಸು ಬೊಮ್ಮಸಂದ್ರ ಪುರಸಭೆಯ ಅಧ್ಯಕ್ಷ ಸ್ಥಾನದ ರೇಸ್ನಲ್ಲಿ ಮುಂಚೂಣಿಯಲ್ಲಿದ್ದರು. ಇನ್ನು ವಾಸು ರಾಜಕೀಯವಾಗಿ ಬೆಳಯತೊಡಗಿದ್ದು, ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ತಮ್ಮ ಪತ್ನಿಯನ್ನು ಗೆಲ್ಲಿಸಿದ್ದರು. ವಾಸು ರಾಜಕೀಯವಾಗಿ ಪ್ರಬಲ ಮುಖಂಡರಾಗಿ ಗುರುತಿಸಿಕೊಂಡಿದ್ದರು.
ಇಂದು ಬೆಳಗಿನ ಜಾವ ವಾಸು ಅವರಿಗೆ ಒಂದು ಫೋನ್ ಕಾಲ್ ಬಂದಿತ್ತು. ಕಾಲ್ ಬಂದ ನಂತರ ತಮ್ಮ ಇನ್ನೋವಾ ಕಾರು ತೆಗೆದುಕೊಂಡು ಬಿಟಿಎಲ್ ಕಾಲೇಜು ಮುಂಭಾಗದ ಪಾರ್ಕಿಂಗ್ ಜಾಗದಲ್ಲಿ ನಿಂತಿದ್ದಾಗ ಕೊಲೆ ನಡೆದಿದೆ.
ಸ್ಥಳಕ್ಕೆ ಬೆಂಗಳೂರು ಗ್ರಾಮಂತರ ಎಸ್ಪಿ ಅಮಿತ್ ಸಿಂಗ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸ್ಥಳದಲ್ಲಿ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಇತ್ತ ವಾಸು ಸಾವಿನ ಸುದ್ದಿ ತಿಳಿದ ಅಭಿಮಾನಿಗಳು ಹಾಗೂ ಪಕ್ಷದ ಕಾರ್ಯಕರ್ತರು ಆಗಮಿಸುತ್ತಿದ್ದು, ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.