Bengaluru City
ನಾಳೆ ಕರ್ನಾಟಕ ಬಂದ್ – ಏನು ಇರುತ್ತೆ? ಏನು ಇರಲ್ಲ?

ಬೆಂಗಳೂರು: ಕೃಷಿ ಸಂಬಂಧಿ ಕಾಯ್ದೆಗಳನ್ನು ವಿರೋಧಿಸಿ ರೈತ ಸಂಘಟನೆಗಳು ನಾಳೆ ಭಾರತ್ ಬಂದ್ಗೆ ಕರೆ ನೀಡಿದೆ. ಸಹಜವಾಗಿಯೇ ಕರ್ನಾಟಕದಲ್ಲಿಯೂ ಕೂಡ ಭಾರತ್ ಬಂದ್ಗೆ ರೈತ ನಾಯಕರು ಕರೆ ನೀಡಿದ್ದಾರೆ. ರೈತರ ಈ ಉದ್ದೇಶಿತ ಬಂದ್ಗೆ ಬೆಂಬಲ ಸೂಚಿಸುವ ವಿಚಾರದಲ್ಲಿ ಹಲವು ಸಂಘ ಸಂಸ್ಥೆಗಳಿಂದ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿವೆ.
ರೈತ ಸಂಘಟನೆಗಳು, ಕಾರ್ಮಿಕ ಸಂಘಟನೆಗಳು ನಾಳೆ ಭಾರತ್ ಬಂದ್ಗೆ ಬೆಂಬಲ ಘೋಷಿಸಿವೆ. ಆದರೆ ಕನ್ನಡ ಪರ ಸಂಘಟನೆಗಳಲ್ಲಿ ಈ ಬಗ್ಗೆ ಭಿನ್ನಾಭಿಪ್ರಾಯಗಳಿವೆ. ಕೆಲ ಸಂಘಟನೆಗಳು ಬಂದ್ನಲ್ಲಿ ಪಾಲ್ಗೊಳ್ಳುವುದಾಗಿ ಘೋಷಿಸಿದ್ರೆ, ಇನ್ನೂ ಕೆಲವು ಸಂಘಟನೆಗಳು ಕೇವಲ ನೈತಿಕ ಬೆಂಬಲ ಘೋಷಿಸಿ ಸುಮ್ಮನಾಗಿವೆ.
ದಿನ ಬೆಳಗಾದರೆ ಕೆಲಸ ಮಾಡ್ಬೇಕು, ಹೊಟ್ಟೆ ತುಂಬಿಸಿಕೊಳ್ಳಬೇಕು ಎನ್ನುವ ಅನಿವಾರ್ಯತೆಯಲ್ಲಿ ಇರುವವರಿಗೆ ಬಂದ್ನಲ್ಲಿ ಪಾಲ್ಗೊಳ್ಳುವುದು ಬಿಡುವುದು ಅವರ ವಿವೇಚನೆಗೆ ಬಿಟ್ಟ ವಿಚಾರ ಎಂದು ಹೇಳಿ ಹಲವು ಸಂಘ ಸಂಸ್ಥೆಗಳು ಕೈ ತೊಳೆದುಕೊಂಡಿವೆ.
ರೈತ ಮುಖಂಡ ಕೋಡಿಹಳ್ಳಿ ಚಂದ್ರಶೇಖರ್ ಮಾತನಾಡಿ, ನನಗೆ ಬಂದ್ಗೆ ಸಂಬಂಧ ಇಲ್ಲ ಅಂತಾ ಆಟೋ ಓಡಿಸಬೇಡಿ, ಹೋಟೆಲ್ ತೆಗೆಯೋಕೆ ಹೋಗಬೇಡಿ. ಕೃಷಿ ಆಧಾರಿತ ಬದುಕು ನಮ್ಮದು. ರೈತರಿಗಾಗಿ ಹೋರಾಟ ಮಾಡಿ. ಬೆಂಬಲ ಸೂಚಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಈ ಮಧ್ಯೆ, ರೈತ, ದಲಿತ,ಕಾರ್ಮಿಕ ಹಾಗೂ ಜನಪರ ಸಂಘಟನೆಗಳ ಐಕ್ಯ ಹೋರಾಟ ಸಮಿತಿ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ಅನಿರ್ದಿಷ್ಟವಧಿ ಪ್ರತಿಭಟನೆ ಶುರು ಮಾಡಿದೆ. ನಿವೃತ್ತ ನ್ಯಾಯಮೂರ್ತಿ ನಾಗಮೋಹನ್ ದಾಸ್, ಸ್ವಾತಂತ್ರ್ಯ ಹೋರಾಟಗಾರ ಹೆಚ್ಎಸ್ ದೊರೆಸ್ವಾಮಿ ಸೇರಿ ಹಲವರು ಈ ಹೋರಾಟದಲ್ಲಿ ಪಾಲ್ಗೊಂಡಿದ್ದಾರೆ. ಸರ್ಕಾರ ರಾಜ್ಯದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಂಡಿದೆ.
ಬಂದ್ಗೆ ಬೆಂಬಲ ನೀಡಿದವರು ಯಾರು?
ಲಾರಿ ಮಾಲೀಕರ ಸಂಘ, ಎಪಿಎಂಪಿಸಿ ವ್ಯಾಪಾರಿಗಳು, ಕಾರ್ಮಿಕರ ಸಂಘ, ಎಐಟಿಯುಸಿ, ಸಿಐಟಿಯು ಬೆಂಬಲ, ಓಲಾ-ಊಬರ್ ಚಾಲಕರ ಸಂಘ, ಆಟೋ ಸಂಘಟನೆಗಳು, ಖಾಸಗಿ ಶಾಲೆಗಳು ಬೆಂಬಲ ನೀಡಿದ್ದು ನಾಳೆ ಇಡೀ ದಿನ ಆನ್ಲೈನ್ ಕ್ಲಾಸ್ ಇರುವುದಿಲ್ಲ. ಅಂಗನವಾಡಿ ನೌಕರರ ಸಂಘ, ಹೋಟೆಲ್ ಮಾಲೀಕರ ಸಂಘದಿಂದ ನೈತಿಕ ಬೆಂಬಲ, ಬ್ಯಾಂಕ್ ಯೂನಿಯನ್ ಬೆಂಬಲ ನೀಡಿವೆ.
ವಾಹನ ಸಂಘಟನೆಗಳು ಬಂದ್ಗೆ ಬೆಂಬಲ ಘೋಷಿಸಿದ್ದರೂ ವಾಹನ ರಸ್ತೆಗೆ ಇಳಿಸಬೇಕೋ ಬೇಡವೋ ಎಂಬುದನ್ನು ಚಾಲಕರ ವಿವೇಚನೆಗೆ ಬಿಡಲಾಗಿದೆ.
ವಾಟಾಳ್ ನೇತೃತ್ವದ ಕನ್ನಡ ಒಕ್ಕೂಟ, ಕರವೇ ನಾರಾಯಣಗೌಡರ ಬಣದಿಂದ ಬಂದ್ಗೆ ಬೆಂಬಲ ವ್ಯಕ್ತವಾಗಿದೆ. ಕರವೇ ಪ್ರವೀಣ್ ಶೆಟ್ಟಿ ಬಣ ನೈತಿಕ ಬೆಂಬಲ ನೀಡಿವೆ.
