ಬೆಂಗಳೂರು: ನೀವು ನಿಮ್ಮ ಮನೆಯ ಮುಂದೆ ಕಾರುಗಳನ್ನು ಪಾರ್ಕ್ ಮಾಡುತ್ತೀರಾ, ಹಾಗಾದ್ರೆ ನೀವು ಈ ಸ್ಟೋರಿಯನ್ನು ಓದಲೇಬೇಕು. ಇಲ್ಲವಾದರೆ ಬೆಳಗಾಗುವಷ್ಟರಲ್ಲಿ ನಿಮ್ಮ ಕಾರಿನ ಗ್ಲಾಸ್ ಗಳು ಪುಡಿ ಪುಡಿ ಆಗುತ್ತವೆ.
ನಗರದಲ್ಲಿಯ ಕೆಲ ಕಿಡಿಗೇಡಿಗಳು ಕಾರಿನ ಗ್ಲಾಸ್ ಗಳನ್ನು ಒಡೆಯುವ ಮೂಲಕ ವಿಕೃತಿಯನ್ನು ಮೆರೆಯುತ್ತಿದ್ದಾರೆ. ಇತ್ತೀಚೆಗೆ ನಗರದಲ್ಲಿ ಇಂತಹ ಪ್ರಕರಣಗಳು ಹೆಚ್ಚಾಗುತ್ತಿದ್ದು, ಒಂದೇ ವಾರದ ಅವಧಿಯಲ್ಲಿ ಎರಡು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 7 ಪ್ರಕರಣಗಳು ದಾಖಲಾಗಿವೆ.
ಉತ್ತರ ವಿಭಾಗದ ನಂದಿನಿ ಲೇಔಟ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ 5 ಪ್ರಕರಣಗಳು ಮತ್ತು ಮಹಾಲಕ್ಷ್ಮೀ ಲೇಔಟ್ ನಲ್ಲಿ 2 ಪ್ರಕರಣಗಳು ದಾಖಲಾಗಿವೆ. ಪುಡಾರಿಗಳು ಕಾರಿನ ಗ್ಲಾಸ್ ಒಡೆಯುವ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿವೆ. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ನಂದಿನಿ ಲೇಔಟ್ ಠಾಣಾ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ದೇವರಾಜ್ ಮತ್ತು ಮಂಜು ಬಂಧಿತ ಆರೋಪಿಗಳು. ತಲೆಮರೆಸಿಕೊಂಡಿರುವ ಮತ್ತೊಬ್ಬ ಆರೋಪಿಗಾಗಿ ಪೊಲೀಸರು ಶೋಧ ನಡೆಸುತ್ತಿದ್ದಾರೆ. ಇದೇ ಕಿಡಿಗೇಡಿಗಳ ಗ್ಯಾಂಗ್ ಸದಸ್ಯರು ನಗರದ ಬೇರೆ ಕಡೆಯೂ ಕಾರಿನ ಗ್ಲಾಸ್ ಒಡೆದಿರುವ ವಿಚಾರ ತನಿಖೆಯಲ್ಲಿ ಬಹಿರಂಗವಾಗಿದೆ. ಈ ಗ್ಯಾಂಗ್ ಇತ್ತೀಚೆಗೆ ಕಾರ್ಪೋರೇಟರ್ ರಾಜೇಂದ್ರಕುಮಾರ್ ಕಾರ್ ಸಹ ಒಡೆದಿದ್ದರು ಎಂಬ ವಿಷಯ ಬೆಳಕಿಗೆ ಬಂದಿದೆ.
ಪೊಲೀಸರು ಆರೋಪಿಗಳನ್ನು ತಮ್ಮ ವಶಕ್ಕೆ ಪಡೆದುಕೊಂಡು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ್ದಾರೆ.
https://www.youtube.com/watch?v=GkgYJmxl45A