Bengaluru City
ನನ್ನ ಬಗ್ಗೆ ಸಿಡಿ ಇದ್ರೆ ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಮಾಡಲಿ: ಮುನಿರತ್ನ

ಬೆಂಗಳೂರು: ನನ್ನ ಬಗ್ಗೆ ಸಿಡಿ ಇದ್ದರೆ ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಮಾಡಲಿ ಎಂದು ಶಾಸಕ ಮುನಿರತ್ನ ಹೇಳಿದ್ದಾರೆ.
ಮಾಜಿ ಸಚಿವರೊಬ್ಬರ ಸಿಡಿ ಬಿಡುಗಡೆಯಾಗಿ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಇದರ ಬೆನ್ನಲ್ಲೇ 6 ಮಂದಿ ಸಚಿವರು ಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂಬಂಧ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ಶಾಸಕರು, ನಾನಂತೂ ಯಾವುದೇ ಕೋರ್ಟ್ ಮೊರೆ ಹೋಗಲ್ಲ. ನನಗೆ ಆತಂಕವಿಲ್ಲ. ರಾಜಕೀಯದಲ್ಲಿ ಸೂಕ್ಷ್ಮವಾಗಿ ಹೆಜ್ಜೆ ಇಡಬೇಕಾಗಿದೆ. ಯಾವುದೇ ಕಾರಣಕ್ಕೆ ಕೋರ್ಟ್ ಮೆಟ್ಟಿಲು ಹತ್ತಲ್ಲ. ನನ್ನ ಬಗ್ಗೆ ಸಿಡಿ ಇದೆ ಅಂದ್ರೆ ಅದನ್ನ ರಾಷ್ಟ್ರಮಟ್ಟದಲ್ಲಿ ಬಿಡುಗಡೆ ಮಾಡಲಿ ಎಂದರು.
ನಾನು ಯಾವುದೇ ಕಾರಣಕ್ಕೂ ಕೋರ್ಟ್ ಮೊರೆ ಹೋಗುವ ಪ್ರಶ್ನೆಯೇ ಇಲ್ಲ. ಯಾರಾದ್ರೂ ಸಿಡಿ ಇದೆ ಅಂತ ಹೇಳಿದ್ರೆ, ತಡೆಯಾಜ್ಞೆ ತರುವ ಪ್ರಶ್ನೆಯೇ ಇಲ್ಲ. ತರುವಂತವರಿಗೆ ನಾನು ಸ್ವಾಗತ ಕೋರಿ ಕೂಡಲೇ ಬಿಡುಗಡೆ ಮಾಡಿ, ವಿಳಂಬ ಮಾಡಬೇಡಿ. ರಾಷ್ಟ್ರಮಟ್ಟದ ಪತ್ರಿಕಾಗೋಷ್ಟಿ ನಡೆಸಿ ಬಿಡುಗಡೆ ಮಾಡಲಿ ಎಂದು ಶಾಸಕರು ಸವಾಲೆಸೆದರು.
ಮುಂಜಾಗೃತಾ ಕ್ರಮವಾಗಿ ಸೇಫ್ಟಿಗಾಗಿ ಸಚಿವರು ನ್ಯಾಯಾಲಯ ಮೊರೆ ಹೋಗಿದ್ದಾರೆ. ಆದರೆ ನಾನು ಯಾವುದೇ ಕಾರಣಕ್ಕೂ ಕೋರ್ಟ್ ಮೊರೆ ಹೋಗಲ್ಲ. ಬಾಂಬೆ, ಪುಣೆಯಲ್ಲಿ ಒಟ್ಟಿಗೆ ಇದ್ವಿ. ಒಂದೇ ರೆಸಾರ್ಟ್ ನಲ್ಲಿದ್ವಿ. ಅಲ್ಲಿ ನಮಗೆ ತೇಜೋವಧೆ ಮಾಡುವ ಕೆಲಸ ಯಾರೂ ಮಾಡಿಲ್ಲ. ಇದು ವ್ಯವಸ್ಥಿತ ಸಂಚು. ಸಿಲುಕಿಸಬೇಕು ಅಂತಾನೇ ಮಾಡಿರುವ ಕೆಲಸವಿದು. ಅವರ ದೌರ್ಬಲ್ಯ ಯಾರಿಗೆ ಗೊತ್ತಿತ್ತೋ, ಅವರೇ ಅದನ್ನು ಬಳಸಿಕೊಂಡಿ ಸಿಲುಕಿಸಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಮಾಜಿ ಸಚಿವರ ಹಿಂದೆ ಇದ್ದವ್ರೇ ಸಂಚು ಮಾಡಿರುತ್ತಾರೆ. ಅವರನ್ನ ಅರ್ಥ ಮಾಡಿಕೊಂಡವ್ರೇ ಸಿಡಿ ಮಾಡಿದ್ದಾರೆ. ಹೊಸಬರಿಂದ ಇದು ಆಗಿಲ್ಲ ಎಂದು ಮುನಿರತ್ನ ಶಂಕೆ ವ್ಯಕ್ತಪಡಿಸಿದರು.
